ಸಾರಾಂಶ
ಬಿಜೆಪಿ-ಜೆಡಿಎಸ್ ನಾಯಕರು ರಾಜಕೀಯಕ್ಕೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡಲಿ, ನಾವು ರಸ್ತೆ ಮಾಡಿ ತೋರಿಸುತ್ತೇವೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಕವಲೂರು ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಿಸಲಿಟ್ಟಿದ್ದೇವೆ. ಮುಂದಿನ 3ರಿಂದ 4 ತಿಂಗಳ ಒಳಗೆ ಎಲ್ಲ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಕವಲೂರು ಗ್ರಾಮದಲ್ಲಿ ನಡೆದ ಪ್ರತಿಭಟನೆ ಕುರಿತು ಬಿಜೆಪಿ ಜೆಡಿಎಸ್ ಮುಖಂಡರು ತಮ್ಮ ಮೇಲೆ ಮಾಡುತ್ತಿರುವ ಆರೋಪ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಪ್ರತಿಭಟನೆಯನ್ನು ಕೊಪ್ಪಳದ ಬಿಜೆಪಿ-ಜೆಡಿಎಸ್ ನಾಯಕರು ರಾಜಕೀಯಕ್ಕೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡಲಿ, ನಾವು ರಸ್ತೆ ಮಾಡಿ ತೋರಿಸುತ್ತೇವೆ. ಈಗಾಗಲೇ ಈ ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುವ ಕೆಲಸ ಮಾಡಿದ್ದೇವೆ. ಅಳವಂಡಿ ವ್ಯಾಪ್ತಿಯಲ್ಲಿ ಅಂದಾಜು ₹68.48 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದೇವೆ ಎಂದರು.ತಾಲೂಕಿನ ಕವಲೂರಿನಿಂದ ಮುರ್ಲಾಪುರ ವರೆಗೆ ರಸ್ತೆ ಅಭಿವೃದ್ಧಿಗೆ ₹3.5 ಕೋಟಿ, ಕವಲೂರು ಬನ್ನಿಕೊಪ್ಪ-ಗುಡುಗೇರಿ ರಸ್ತೆಗೆ 2.25 ಕೋಟಿ, ಕವಲೂರು-ಬನ್ನಿಕೊಪ್ಪ ರಸ್ತೆ ಅಭಿವೃದ್ಧಿಗೆ ₹7.5 ಕೋಟಿ, ಕವಲೂರು-ಮುರ್ಲಾಪುರ ರಸ್ತೆ ಅಭಿವೃದ್ಧಿ ₹2.19 ಕೋಟಿ, ಗುಡುಗೇರಿಯಿಂದ ಹಳ್ಳಿಕೇರಿಯ 5.16 ಕಿಮೀ ರಸ್ತೆ ಅಭಿವೃದ್ಧಿಗೆ ₹ 7.26 ಕೋಟಿ, ಗುಡುಗೇರಿಯಿಂದ ಏಕ್ಸಲಾಪುರ ₹3.29 ಕಿಮೀ ರಸ್ತೆ ಅಭಿವೃದ್ಧಿಗೆ ₹4.47 ಕೋಟಿ, ಅಳವಂಡಿಯಿಂದ ಘಟ್ಟರಡ್ಡಿಹಾಳ 2.8 ಕಿಮೀ ರಸ್ತೆ ಅಭಿವೃದ್ಧಿಗೆ ₹3.66 ಕೋಟಿ, ಬೈರಾಪುರದಿಂದ ಬೆಟಗೇರಿಯ 6.71 ಕಿಮೀ ರಸ್ತೆ ಅಭಿವೃದ್ಧಿಗೆ ₹7.64 ಕೋಟಿ, ಹೈದರ್ ನಗರದಿಂದ ಹಟ್ಟಿವರೆಗಿನ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಕೇಸಲಾಪುರದಿಂದ ರಾಜ್ಯ ಹೆದ್ದಾರಿ ಎಸ್.ಎಚ್ -129 ರಸ್ತೆ ಅಭಿವೃದ್ಧಿಗೆ 1.77 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
14 ಜನರ ಮೇಲೆ ಎಫ್ಐಆರ್ ಆಗಿರುವುದರ ಬಗ್ಗೆ ಗಮನಕ್ಕಿಲ್ಲ. ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಈ ಕುರಿತು ಮಾಹಿತಿ ಪಡೆದು, ಪ್ರಕರಣ ಇತ್ಯರ್ಥಪಡಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.