ಸಾರಾಂಶ
- ಚನ್ನಗಿರಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಬಕಾರಿ ಜಿಲ್ಲಾ ಅಧಿಕಾರಿ ಚಿದಾನಂದ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಕಾನೂನು ಬಾಹಿರ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಪಟ್ಟಣದ ಅಬಕಾರಿ ಕಚೇರಿ ಎದುರು 12 ದಿನಗಳಿಂದ ಧರಣಿ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಚಿದಾನಂದ್, ಡಿವೈಎಸ್ಪಿ ಮುರುಡಪ್ಪ ಭೇಟಿ ನೀಡಿ, ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು.ತಾಲೂಕಿನಲ್ಲಿ ಈಗಾಗಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. 15 ದಿನಗಳಿಂದ ನಿರಂತರ ದಾಳಿ ನಡೆಸಲಾಗುತ್ತಿದೆ. 4 ಘೋರ ಪ್ರಕರಣಗಳು, 29 ಸಾಮಾನ್ಯ ಪ್ರಕರಣಗಳನ್ನು ದಾಖಲು ಮಾಡಿದ್ದು, 42.380 ಲೀಟರ್ ಮದ್ಯ, 31.460 ಲೀ. ಬಿಯರ್ ಜಪ್ತಿ ಮಾಡಲಾಗಿದೆ ಎಂದರು.
ಚನ್ನಗಿರಿ ತಾಲೂಕಿನಲ್ಲಿ 227 ಹಳ್ಳಿಗಳಿವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ, ಇರುವ ಸಿಬ್ಬಂದಿಯನ್ನೇ ಸಮರ್ಪಕ ಬಳಸಿ, 60 ಕಡೆ ದಾಳಿ ನಡೆಸಲಾಗಿದೆ. ಅಕ್ರಮ ಮದ್ಯ ಮಾರಾಟ ಒಂದೇ ದಿನಕ್ಕೆ ಬಗೆಹರಿಯುವ ಸಮಸ್ಯೆಯಲ್ಲ. ದಿನದಿಂದ ದಿನಕ್ಕೆ ಕಡಿವಾಣ ಹಾಕಿ, ಸಂಪೂರ್ಣ ತಡೆಗಟ್ಟಬೇಕಾಗಿದೆ. ಈ ಪರಿವರ್ತನೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ಈ ದಿನದಿಂದಲೇ ಇನ್ನು ಹೆಚ್ಚು-ಹೆಚ್ಚು ಕಡೆಗಳಲ್ಲಿ ಇಲಾಖೆ ದಾಳಿ ನಡೆಸಲಿದೆ. ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟು ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದರು.ಆಗ ಮುಖಂಡ ಬಸವಾಪುರ ರಂಗನಾಥ್ ಮಾತನಾಡಿ, ಅಕ್ರಮ ಮದ್ಯ ಮಾರಾಟ ಹಾವಳಿಯಿಂದಾಗಿ ಚಿಕ್ಕವಯಸ್ಸಿನ ಮಕ್ಕಳು ಸಹಾ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ತಾಲೂಕಿನ ಎಲ್ಲ ಬಾರ್ ಮಾಲೀಕರು ಕಾನೂನುಬಾಹಿರ ಮದ್ಯ ಮಾರಾಟ ಮಾಡುವವರಿಗೆ ಮದ್ಯ ಸರಬರಾಜು ಮಾಡೋದಿಲ್ಲ ಎಂದು ಕೊಟ್ಟಿದ್ದ ಮಾತಿನಂತೆ ನಡೆದಿಲ್ಲ. ಸೋಮವಾರದೊಳಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬಂದು ನಮ್ಮ ಮನವಿ ಸ್ವೀಕರಿಸಬೇಕು. ಒಂದು ವೇಳೆ ಜಿಲ್ಲಾಡಳಿತ ಬರದಿದ್ದರೆ ಸೋಮವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಅಬಕಾರಿ ನಿರೀಕ್ಷಕಿ ಬಿ.ಶ್ವೇತಾ, ತಾಲೂಕು ಡಿ.ಎಸ್.ಎಸ್. ಸಂಚಾಲಕ ಕೃಷ್ಣಪ್ಪ, ನೀತಿಗೆರೆ ಮಂಜಪ್ಪ, ರಂಗಸ್ವಾಮಿ, ಕುಬೇಂದ್ರ ಸ್ವಾಮಿ, ಮಾಚನಾಯ್ಕನಹಳ್ಳಿ ಮಂಜುನಾಥ್ ಮೊದಲಾದವರು ಹಾಜರಿದ್ದರು.- - - -10ಕೆಸಿಎನ್ಜಿ1.ಜೆಪಿಜಿ:
ಧರಣಿ ನಡೆಯುತ್ತಿರುವ ಸ್ಥಳಕ್ಕೆ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಚಿದಾನಂದ್ ಭೇಟಿ ನೀಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಕೋರಿದರು.