ತುಳು ಭಾಷೆಗೆ ರಾಜ್ಯ ಮಾನ್ಯತೆಗೆ ಎಲ್ಲಾ ಕ್ರಮ ಆಗಿದೆ: ಯು.ಟಿ. ಖಾದರ್

| Published : Aug 01 2024, 12:16 AM IST

ಸಾರಾಂಶ

ತುಳುವಿಗೆ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ತುಳುನಾಡಿನ ಸಂಸ್ಕೃತಿ, ಭಾಷೆ, ತುಳುವರ ಪ್ರೀತಿ, ವಿಶ್ವಾಸ ಜಗದಗಲ ವಿಸ್ತರಿಸಬೇಕಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಬುಧವಾರ ಮಣಿಪಾಲದಲ್ಲಿ ಪತ್ರಕರ್ತರ ಜೊತೆ, ವಿಧಾನಸಭಾ ಕಲಾಪದ ವೇಳೆ ತುಳು ಸಂಭಾಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ತುಳು ಭಾಷೆ ನಮ್ಮ ತುಳುನಾಡಿನ ಸಂಸ್ಕೃತಿಯ ಪ್ರತೀಕ. ಅನೇಕ ಕಲಾವಿದರು, ನಾಟಕಕಾರರು, ಸಿನಿಮಾದವರು ತುಳು ಭಾಷೆಯನ್ನು ವಿಶ್ವಾದ್ಯಂತ ತೆಗೆದುಕೊಂಡು ಹೋಗಿದ್ದಾರೆ. ತುಳು ಬರಹಗಾರರು ಭಾಷೆಯ ಕೀರ್ತಿ ಹೆಚ್ಚಿಸಿದ್ದಾರೆ. ಮುಂದೆ ತುಳು ಭಾಷೆ ಪರಂಪರೆ ಪ್ರೀತಿ ವಿಶ್ವಾಸವನ್ನು ಇಡೀ ದೇಶಕ್ಕೆ ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ತುಳು ಭಾಷೆಗೆ ರಾಜ್ಯದ ಮಾನ್ಯತೆ ನೀಡಲಾಗುತ್ತಿದೆ ಎಂದರು.

ನಾವು ಅವಕಾಶ ಸಿಕ್ಕಾಗಲಿಲ್ಲ ತುಳು ಭಾಷೆಯಲ್ಲಿ ಮಾತನಾಡಬೇಕು. ಕರಾವಳಿಯ 25 ಸಣ್ಣ ಸಮುದಾಯಗಳು ತುಳು ಭಾಷೆಯನ್ನು ಮಾತನಾಡುತ್ತವೆ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುತ್ತಿರುವ ಭಾಷೆ ತುಳುವಾಗಿದೆ. ಎರಡನೇ ಭಾಷೆಯಾಗಿ ಪರಿಗಣಿಸಬೇಕೆಂದು ಬಹಳಷ್ಟು ಬೇಡಿಕೆ ಇದೆ. ಈ ಬಗ್ಗೆ ಚರ್ಚೆಯಾಗಿದೆ ಸಭೆಗಳಾಗಿವೆ.

ನಿಸರ್ಗಕ್ಕೆ ವಿರುದ್ಧ ಸರ್ಕಾರದ ನೀತಿ ಸಲ್ಲದು

ಕೇರಳದ ವಯನಾಡಿನಲ್ಲಾದ ದುರಂತ ನೋವು ತಂದಿದ್ದು, ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುವ ಮಾನವನಿಂದಾಗುವ ಸಮಸ್ಯೆ, ದುರ್ಘಟನೆಗಳ ತಡೆಗೆ ಮುನ್ನೆಚ್ಚರಿಕೆ ಅತ್ಯಗತ್ಯ, ನಿಸರ್ಗಕ್ಕೆ ವಿರುದ್ಧವಾಗಿ ಸರ್ಕಾರದ ರೀತಿ ನೀತಿಗಳು ಸಲ್ಲದು ಎಂದು ಖಾದರ್ ಹೇಳಿದರು.

ಈ ರೀತಿ ಕೂಡ ಪ್ರಕೃತಿ ಮುನಿಸಿಕೊಳ್ಳುತ್ತಾ ಎಂದು ಅಚ್ಚರಿಯಾಗಿದ್ದು, ನನ್ನ ಜೀವಮಾನದಲ್ಲೇ ಪ್ರಥಮ ಬಾರಿಗೆ ಇಂಥ ದುರ್ಘಟನೆ ನೋಡಿದ್ದೇನೆ. ಜನರು ಪ್ರಯತ್ನ ಪಟ್ಟರೆ ಇಂತಹ ದುರ್ಘಟನೆಗಳನ್ನು ತಡೆಗಟ್ಟಬಹುದು, ಮಾನವರ ತಪ್ಪಿನಿಂದ ಆಗುವ ದುರ್ಘಟನೆಗಳನ್ನು ತಪ್ಪಿಸಬಹುದಾಗಿದ್ದು, ಜನರು, ಅಧಿಕಾರಿಗಳು ಎಚ್ಚೆತ್ತುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.