ವಿಕಸಿತ ಭಾರತದ ಪರಿಕಲ್ಪನೆಯ ಸಾಕಾರಕ್ಕೆ ಎಲ್ಲರೂ ಶ್ರಮಿಸಿ: ಶಾಸಕ ಟೆಂಗಿನಕಾಯಿ

| Published : Jul 01 2024, 01:47 AM IST

ವಿಕಸಿತ ಭಾರತದ ಪರಿಕಲ್ಪನೆಯ ಸಾಕಾರಕ್ಕೆ ಎಲ್ಲರೂ ಶ್ರಮಿಸಿ: ಶಾಸಕ ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ವಿಕಸಿತ ಭಾರತದ ಪರಿಕಲ್ಪನೆಯ ಸಾಕಾರಕ್ಕೆ ಎಲ್ಲರೂ ಶ್ರಮಿಸುವ ಕಾರ್ಯವಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ವಿಕಸಿತ ಭಾರತದ ಪರಿಕಲ್ಪನೆಯ ಸಾಕಾರಕ್ಕೆ ಎಲ್ಲರೂ ಶ್ರಮಿಸುವ ಕಾರ್ಯವಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಕೇಶ್ವಾಪುರದಲ್ಲಿರುವ ಐಸಿಎಐ ಭವನದಲ್ಲಿ ಭಾನುವಾರ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಅಮೃತ ಮಹೋತ್ಸವ ಮತ್ತು ವಿಕಸಿತ ಭಾರತಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.

2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ನೂರು ವರ್ಷಗಳಾಗುತ್ತವೆ. ಆ ಸಂದರ್ಭದಲ್ಲಿ ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೆ ಭಾರತವನ್ನು ತಲುಪಿಸುವ ಗುರಿಯೊಂದಿಗೆ ವಿಕಸಿತ ಭಾರತ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಅದನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ ದೇಶವನ್ನು ಪ್ರಬಲ ಆರ್ಥಿಕ ಶಕ್ತಿಯನ್ನಾಗಿ ಮುನ್ನಡೆಸಲು ಲೆಕ್ಕಪರಿಶೋಧಕರ ಪ್ರಾದೇಶಿಕ ಮಂಡಳಿಗಳು ಹಾಗೂ ಶಾಖೆಗಳಲ್ಲಿ ವಿಕಸಿತ ಭಾರತದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ರಸ್ತೆ ಅಭಿವೃದ್ಧಿ, ಉಜ್ವಲ ಯೋಜನೆ, ವಿಮಾನ ನಿಲ್ದಾಣಗಳ ಉನ್ನತೀಕರಣ, ಸರಕು ಸಾಗಾಣಿಕೆ ಅಭಿವೃದ್ಧಿ, ರೈಲ್ವೆ ಸಂಪರ್ಕ ಅಭಿವೃದ್ಧಿ ಸೇರಿದಂತೆ ಕೇಂದ್ರ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು.

ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಉಮಾ ಮುಕುಂದ ಮಾತನಾಡಿ, ಸ್ತ್ರೀ ಸಬಲೀಕರಣದ ಅಂಗವಾಗಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ. 33.33 ರಷ್ಟು ಮೀಸಲಾತಿ ನೀಡಿದೆ. ಸಿಎ ಓದುತ್ತಿರುವ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಅಲಂಕರಿಸಿ ಎಂದರು.

ಚಂದ್ರಶೇಖರ್ ಧವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಧನಪಾಲ್ ಜೆ. ಮುನ್ನೊಳ್ಳಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ರಿಷಬ್ ಉಪಾಧ್ಯಾಯ ವಂದಿಸಿದರು.ವಿಕಸಿತ ಭಾರತ ಓಟ

ವಿಕಸಿತ ಭಾರತ ಧ್ಯೇಯವಾಕ್ಯದ ಅಡಿ ಸಂಸ್ಥೆಯ ಎಲ್ಲ ಸದಸ್ಯರು ಹಾಗೂ ವಿದ್ಯಾರ್ಥಿಗಳಿಂದ ವಿಕಸಿತ ಭಾರತಕ್ಕಾಗಿ ಓಟ ನಡೆಸಲಾಯಿತು. ಕೇಶ್ವಾಪುರದ ಐಸಿಎಐ ಭವನದಿಂದ ಆರಂಭವಾದ ಓಟವು ಬಸವೇಶ್ವರ ವೃತ್ತಕ್ಕೆ ಆಗಮಿಸಿ ಪುನಃ ಐಸಿಎಐ ಭವನದ ವರೆಗೆ ತೆರಳಿ ಸಮಾರೋಪಗೊಳಿಸಲಾಯಿತು.