ಸಾರಾಂಶ
ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದು, ಈ ವರ್ಷದ ಮೊದಲ ಒಳಹರಿವು ಶುಕ್ರವಾರ ದಾಖಲಾಗಿದೆ. 1,768 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರ ಸಂತಸಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಿದ್ದು, ಈ ವರ್ಷದ ಮೊದಲ ಒಳಹರಿವು ಶುಕ್ರವಾರ ದಾಖಲಾಗಿದೆ. 1,768 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರ ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಇರಲಿಲ್ಲ. ಆದರೆ ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾದ ಕಾರಣ ಕೃಷ್ಣಾ ನದಿ ಪಾತ್ರದ ಜನರಿಗೆ ಸಂತಸ ತಂದಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದ ಈ ಒಳಹರಿವು ಬಂದಿದ್ದು, ಇನ್ನೂ ಮಹಾರಾಷ್ಟ್ರದಿಂದ ಬಿಟ್ಟ ನೀರು ಬಂದಿಲ್ಲ. ಕಳೆದ ವರ್ಷ ಮಳೆಯ ಅಭಾವ, ನೀರಿನ ಬರ ಅನುಭವಿಸದ ರೈತರಿಗೆ ಈ ಬಾರಿ ಅಣೆಕಟ್ಟಿಗೆ ನೀರು ಬಂದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.ಜಲಾಶಯ ಶೀಘ್ರ ಭರ್ತಿಯತ್ತ ಸಾಗಲಿ ಎಂದು ರೈತರ ಅಪೇಕ್ಷೆಯಾಗಿದೆ.
ನೀರಿನ ಸಂಗ್ರಹದ ಮಾಹಿತಿ:519.60 ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಶುಕ್ರವಾರ 507.79 ಮೀ ವರೆಗೆ ನೀರು ಇತ್ತು. 123.081 ಟಿಎಂಸಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ 20.6 ಟಿಎಂಸಿ ನೀರಿದೆ. ಅದರಲ್ಲಿ ಬಳಕೆಯೋಗ್ಯ 3 ಟಿಎಂಸಿ ನೀರಿದೆ.
ಈಗ ಜಲಾಶಯಕ್ಕೆ ಬಂದಿರುವುದು ಅಲ್ಪ ಒಳಹರಿವು. ಪ್ರತಿವರ್ಷ ಬಹಳಷ್ಟು ದಿನಗಳ ಕಾಲ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್ ಕ್ಕಿಂತ ಹೆಚ್ಚು ನೀರು ಬರುತ್ತದೆ. ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿಯೇ ಜಲಾಶಯ ಭರ್ತಿಯತ್ತ ಸಾಗುತ್ತದೆ. ಈ ವರ್ಷ ಮಹಾರಾಷ್ಟ್ರದಲ್ಲಿ ಮಳೆಯಾಗಿ ಹೆಚ್ಚು ನೀರು ಬರಲಿ ಎಂದು ರೈತರ ನಿರೀಕ್ಷೆಯಾಗಿದೆ.