ಸಾರಾಂಶ
ಪಟ್ಟಣದ ಸರ್ಕಾರಿ ಚಾವಡಿಯಿಂದ ಲಿಂಬಿಕಾಯಿ ಅವರ ಮನೆವರೆಗೆ ಪುರಸಭೆ ಅನುದಾನದಡಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿ ಶನಿವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿ ರಸ್ತೆ ಕೆಲಸ ಬಂದ್ ಮಾಡಿಸಿದರು.
ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಚಾವಡಿಯಿಂದ ಲಿಂಬಿಕಾಯಿ ಅವರ ಮನೆವರೆಗೆ ಪುರಸಭೆ ಅನುದಾನದಡಿ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿ ಶನಿವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿ ರಸ್ತೆ ಕೆಲಸ ಬಂದ್ ಮಾಡಿಸಿದರು.
ನಾಗರಾಜ ಚಿಂಚಲಿ ಮಾತನಾಡಿ ‘ರಸ್ತೆ ನಿರ್ಮಾಣಕ್ಕೆ ಕೆಂಪು ಮಣ್ಣಿನ ಗೊರಸು ಬಳಸಬೇಕು. ಆದರೆ ಗುತ್ತಿಗೆದಾರರು ಜವುಳ ಮಣ್ಣನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಕಾಮಗಾರಿ ಕಳಪೆ ಆಗಿರುವುದು ಇದರಿಂದಲೇ ಗೊತ್ತಾಗುತ್ತದೆ. ಅಲ್ಲದೆ ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ನೀರಿನ ಪೈಪ್ಲೈನ್ಗಳು ಒಡೆದು ಹಾಳಾಗಿದ್ದು ೧೩, ೧೧, ೫ ಮತ್ತು ೪ನೇ ವಾರ್ಡ್ಗಳ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕಾರಣ ಪುರಸಭೆ ಅಧಿಕಾರಿಗಳು ತಕ್ಷಣ ನೀರಿನ ಸಮಸ್ಯೆ ಪರಿಹರಿಸಿ ರಸ್ತೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರಲ್ಲದೆ ‘ಸಾರ್ವಜನಿಕರೂ ಕೂಡ ಕಳಪೆ ಕಾಮಗಾರಿ ಕಂಡು ಬಂದರೆ ಪ್ರತಿಭಟಿಸಬೇಕು ಎಂದು ಹೇಳಿದರು.ಮಂಜುನಾಥ ಮಾಗಡಿ ಮಾತನಾಡಿ ‘ಗುತ್ತಿಗೆದಾರರ ಆಮೆಗತಿ ವೇಗದ ಕಾಮಗಾರಿಯಿಂದಾಗಿ ಕೇವಲ ೨೦೦ ಮೀಟರ್ ಉದ್ದದ ರಸ್ತೆಯನ್ನು ಒಂದು ತಿಂಗಳಾದರೂ ಇನ್ನೂ ನಿರ್ಮಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯೂ ಕಾರಣವಾಗಿದೆ. ರಸ್ತೆಗೆ ಹಾಕಲು ಕೆಂಪು ಗೊರಸು ಸಿಗುತ್ತಿಲ್ಲ. ಬೇಕಾದರೆ ನೀವೇ ಮಣ್ಣು ಕೊಡಿಸಿ ಎಂದು ಗುತ್ತಿಗೆದಾರರು ಉಡಾಪೆ ಉತ್ತರ ಕೊಡುತ್ತಿದ್ದಾರೆ. ಇದರಿಂದಾಗಿ ಸಿಕ್ಕ ಜವುಳು ಮಣ್ಣನ್ನು ತಂದು ಹಾಕಿದ್ದಾರೆ’ ಎಂದು ಆರೋಪಿಸಿದರು. ರಸ್ತೆಯಲ್ಲಿನ ಪೈಪ್ಗಳು ಒಡೆದಿರುವುದರಿಂದ ನಮ್ಮ ಓಣಿಗೆ ಸಿಹಿ ಮತ್ತು ಸವುಳ ನೀರು ಎರಡೂ ಬರುತ್ತಿಲ್ಲ. ಬೇಗನೇ ರಸ್ತೆ ಮುಗಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಗುತ್ತಿಗೆದಾರರು ತಮಗೆ ತಿಳಿದಂತೆ ಕೆಲಸ ಮಾಡುತ್ತಿದ್ದು ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಮಲ್ಲಪ್ಪ ಅಂಕಲಿ ಹೇಳಿದರು. ಈ ಸಂದರ್ಭದಲ್ಲಿ ರಾಜು ಲಿಂಬಿಕಾಯಿ, ಅಭಯ ಜೈನ್, ಗುರಪ್ಪ ಮುಳಗುಂದ, ಈರಣ್ಣ ಅಳಗುಂಡಿ ಸೇರಿದಂತೆ ಮತ್ತಿತರರು ಇದ್ದರು.ಮುಖ್ಯಾಧಿಕಾರಿ ಭೇಟಿ: ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಸದಸ್ಯ ಪ್ರವೀಣ ಬಾಳಿಕಾಯಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಣ್ಣನ್ನು ಥರ್ಡ್ ಪಾರ್ಟಿ ಅವರಿಂದ ಪರೀಕ್ಷಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.