ಅಧ್ಯಕ್ಷರ ವಿರುದ್ಧ ಆರೋಪಗಳ ಸುರಿಮಳೆ

| Published : Sep 24 2025, 01:00 AM IST

ಸಾರಾಂಶ

ತಾಲೂಕಿನ ಮಾವತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡದ ಕಾರಣಕ್ಕೆ ಸಭೆ ರದ್ದಾಗಿದೆ.

ಕನ್ನಡ ಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಮಾವತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಸರ್ವ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡದ ಕಾರಣಕ್ಕೆ ಸಭೆ ರದ್ದಾಗಿದೆ.

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯನ್ನ ಏರ್ಪಡಿಸಲಾಗಿತ್ತು. ವಾರ್ಷಿಕ ಸಭೆ ನಡೆಸಲು ಸರ್ವ ಸದಸ್ಯರಿಗೆ ೧೫ ದಿನ ಮುಂಚೆಯೇ ಆಹ್ವಾನ ಪತ್ರಿಕೆ ನೀಡಬೇಕಾಗಿತ್ತು. ಸಂಘದ ಎರಡು ಬಣದ ಸದಸ್ಯರ ನಡುವೆ ಮಾತಿನ ಜಟಾಪಟಿಯಿಂದ ರೈತರಿಗೆ ಸೇರಿದ ೩೦ ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಆಯೋಜಿಸಿದ್ದ ಸಭೆಯನ್ನು ರದ್ದುಪಡಿಸಲಾಗಿದೆ.

ಮಾಜಿ ಅಧ್ಯಕ್ಷ ಶಂಕರಣ್ಣ ಮಾತನಾಡಿ, ನಾಲ್ಕು ವರ್ಷದ ಹಿಂದೆ ನಾನು ಅಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರನ್ನ ಭೇಟಿ ಮಾಡಿ ಸಾಲ ಮಂಜೂರು ಮಾಡಿಕೊಂಡು ಬಂದಿದ್ದೆ. ಆದರೆ ಈಗಿನ ಅಧ್ಯಕ್ಷ ಧನಂಜಯ ಅವರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ಇಲ್ಲಿಯವರೆಗೂ ನಮ್ಮ ಸಂಘಕ್ಕೆ ಒಂದು ರುಪಾಯಿ ಸಾಲ ಮಂಜೂರು ಆಗಿಲ್ಲ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬೋರಣ್ಣ ಮಾತನಾಡಿ ಸಂಘದ ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ . ರೈತರ ಪಹಣಿಯಲ್ಲಿ ಸಾಲ ಮಂಜೂರು ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲಾಗುವುದು ಎಂದರು. ಅಧ್ಯಕ್ಷ ಧನಂಜಯ ಮಾತನಾಡಿ, ನಮ್ಮ ಮನೆಯ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಇರುವ ಕಾರಣ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ವಾರ್ಷಿಕ ಸಭೆಯನ್ನು ಆಯೋಜನೆ ಮಾಡಲು ತಿಳಿಸಲಾಗಿತ್ತು. ಸದಸ್ಯರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿದ್ದಾರೆ. ಆದ್ದರಿಂದ ಸಭೆ ಮುಂದೂಡಲಾಗಿದೆ ಎಂದರು. ನಿರ್ದೇಶಕ ಮಂಜುನಾಥ್ ಮಾತನಾಡಿ ಏಕಾ ಚಕ್ರಾಧಿಪತ್ಯ ಧೋರಣೆಯಿಂದ ಇಷ್ಟೇಲ್ಲ ಬೆಳವಣಿಗೆ ಆಗುತ್ತಿದೆ. ನಮ್ಮ ಭಾಗದ ರೈತರಿಗೆ ಒಂದು ಮೂಟೆ ಗೊಬ್ಬರ ಆಗಲಿ ಸಾಲವಾಗಲಿ ನೀಡಿಲ್ಲ. ಇದಕ್ಕೆ ಅಧ್ಯಕ್ಷರೆ ಕಾರಣ ಎಂದರು. ಸಭೆಯಲ್ಲಿ ಸಂಘದ ಸಿಇಒ ತಿಮ್ಮಯ್ಯ, ಉಪಾಧ್ಯಕ್ಷ ನರಸಿಂಹಮೂರ್ತಿ ನಿರ್ದೇಶಕರಾದ ಮತ್ತರಾಜು, ಪ್ರಕಾಶ್, ಮಂಜುನಾಥ್, ನವೀನ್‌ಕುಮಾರ್, ರಂಗದಾಸಯ್ಯ, ರಮೇಶ್, ನಲ್ಲಪ್ಪ, ಪಾರ್ವತಮ್ಮ, ಭಾಗ್ಯಮ್ಮ, ಕೃಷ್ಣಪ್ಪ, ಮುಖಂಡರಾದ ವೆಂಕಟಗೌಡ, ಮಂಜುನಾಥ್, ನರಸೇಗೌಡ, ಸೇರಿದಂತೆ ಇತರರು ಇದ್ದರು.

ಕೋಟ್‌.... ರೈತರಿಗೆ ಸಾಲ ಮಂಜೂರು ಮಾಡಲು ಸಲುವಾಗಿ ರೈತರ ಪಹಣಿಯಲ್ಲಿ ಸಾಲ ನೀಡಲಾಗಿದೆ ಎಂದು ನಮೂದಿಸಲಾಗಿದೆ. ಅದನ್ನ ಅದಷ್ಟು ಬೇಗ ಸರಿಪಡಿಸಲಾಗುವುದು. ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರಿಗೆ ಅವಮಾನ ಮಾಡುವ ರೀತಿ ನಾನು ಮಾತನಾಡಿಲ್ಲ, ನನ್ನ ವಿರೋಧಿಗಳು ಇಲ್ಲದಸಲ್ಲದ ಆರೋಪ ಮಾಡುತ್ತಿದ್ದಾರೆ. - ಧನಂಜಯ ವಿಎಸ್‌ಎಸ್‌ಎನ್ ಅಧ್ಯಕ್ಷ ಮಾವತ್ತೂರು.