ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಮೀಸಲಿಡಿ

| Published : Mar 07 2025, 12:46 AM IST

ಸಾರಾಂಶ

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಯನ್ನು ಉದ್ದೇಶಿಸಿ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಯು ಕಾರ್ಯಾಧ್ಯಕ್ಷ ಎಚ್.ದಸ್ತಗಿರಿಸಾಬ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಸಭೆಯನ್ನು ಉದ್ದೇಶಿಸಿ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ಕಳೆದ 16-17 ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರ ಪೂರೈಸಲು ನಾಳೆ ಮಂಡಿಸುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕನಿಷ್ಠ 5000 ಕೋಟಿ ರು. ಅನುದಾನ ಮೀಸಲಿಡಬೇಕು. ಅಜ್ಜಂಪುರದ ಅಬ್ಬಿನಹೊಳಲು ಗ್ರಾಮದ ಬಳಿ ರೈತರಿಗೆ ನ್ಯಾಯಯುತ ಪರಿಹಾರ ನೀಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರೈಸಲು ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು.

ಚಿತ್ರದುರ್ಗ ಮತ್ತು ತುಮಕೂರು ಕಾಲುವೆಗಳ ಕಾಮಗಾರಿಗಳನ್ನು ಶೀಘ್ರ ಪೂರೈಸಿ ಬಯಲು ಸೀಮೆಯ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಮುಖಾಂತರ ನೀರು ಹರಿಸಬೇಕು. ವಿದ್ಯುತ್ ಮೀಟರ್‌ಗಳ ದರವನ್ನು ಸುಮಾರು 800 ಪಟ್ಟಿಗಿಂತ ಹೆಚ್ಚಿಗೆ ಹೆಚ್ಚಿಸಿದ್ದು ಇದು ರೈತರ ಮೇಲೆ ಬರೆ ಎಳೆದಂತಾಗಿದೆ, ತಕ್ಷಣ ಹಿಂದಿನ ದರದಂತೆಯೇ ಮೀಟರಗಳನ್ನು ವಿತರಿಸುವಂತೆ ಸರ್ಕಾರಕ್ಕೆ ಮತ್ತು ಬೆಸ್ಕಾಂ ಇಲಾಖೆಗೆ ಒತ್ತಾಯಿಸಲಾಗುತ್ತಿದೆ ಎಂದರು.

ರೈತ ಸಂಘದ ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು ಮಾತನಾಡಿ, ರೈತರು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಸರ್ಕಾರದ ಯೋಜನೆಗಳು ರೈತರಿಗೆ ಸಿಗುವಂತಾಗುತ್ತದೆ. ಆದ್ದರಿಂದ ತಾಲೂಕಿನ ರೈತರು ಸಂಘಟಿತರಾಗುವ ಮುಖಾಂತರ ಸರ್ಕಾರದ ಯೋಜನೆಗಳನ್ನು ಪಡೆಯುವಂತಾಗಬೇಕು ಎಂದು ಹೇಳಿದರು.

ತಾಲೂಕು ಕಾರ್ಯಾಧ್ಯಕ್ಷ ಎಚ್.ದಸ್ತಗಿರಿ ಸಾಬ್ ಮಾತನಾಡಿ, ಸರ್ಕಾರ ಅಗತ್ಯ ವಸ್ತುಗಳು ಮತ್ತು ರೈತರು ಖರೀದಿಸುವಂತಹ ವಸ್ತುಗಳ ಬೆಲೆ ಏರಿಸುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ರೈತರು ಆತ್ಮಹತ್ಯೆ ಹಾದಿ ಹಿಡಿಯುವಂತಾಗುತದೆ. ರೈತರು ಖರೀದಿಸುವ ಎಲ್ಲಾ ಸಾಮಗ್ರಿಗಳಿಗೆ ಕಡಿಮೆ ದರ ವಿಧಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು.

ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಎಂ.ಲಕ್ಷ್ಮಿಕಾಂತ್, ಎಂ.ಆರ್.ಪುಟ್ಟಸ್ವಾಮಿ, ಗೌಸ್‌ಪೀರ್, ಬಿ.ಡಿ.ಶ್ರೀನಿವಾಸ್, ಐನಳ್ಳಿ ರವೀಶ್, ಈಶ್ವರಗೆರೆ ನಾಗರಾಜ್, ಎಚ್.ಆರ್.ತಿಪ್ಪೇಸ್ವಾಮಿ, ನಿತ್ಯಶ್ರೀ , ಮಲ್ಲಿಕಾರ್ಜುನ, ಮುರಳಿ, ಎಚ್.ಎನ್.ಮೂರ್ತಪ್ಪ, ಅನ್ಸರ್ ಅಲಿ, ಮರದಮುತ್ತು, ಓಪಿಟಿ ಸ್ವಾಮಿ, ಮುಕುಂದಪ್ಪ, ಮುನಿಸ್ವಾಮಿ,ಸಿ ಎನ್ ಮಾಳಿಗೆ ಲೋಕೇಶ್ , ಮಹಾಲಿಂಗಪ್ಪ, ನಜೀರ್ ಕಾಲೋನಿ ಮೋಹಿದೀನ್ ದಾದಾಪೀರ್ ಭಾಷಾ ಸಾಬ್, ತಿಪ್ಪೇಸ್ವಾಮಿ, ರಂಗಸ್ವಾಮಿ ಮುಂತಾದವರು ಹಾಜರಿದ್ದರು.