ಸಾರಾಂಶ
ತುಂಗಭದ್ರಾ ಯೋಜನೆಯಡಿ ಬರುವ 17 ವಿಜಯನಗರ ಕಾಲುವೆಗಳ ನಿರ್ವಹಣೆಗೆ ಪ್ರತ್ಯೇಕ ನಿಗಮ ಸ್ಥಾಪನೆ ಆಗಬೇಕು.
ಹೊಸಪೇಟೆ: ವಿಜಯನಗರ ಕಾಲುವೆಗಳಿಗೆ ನೀರಿನ ಹಂಚಿಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಮತ್ತು ತುಂಗಭದ್ರಾ ಡ್ಯಾಂಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಲ ಸಂಪನ್ಮೂಲ ಸಚಿವರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದ್ದಾರೆ.ಡಿಸಿಎಂ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಎಚ್.ಆರ್.ಗವಿಯಪ್ಪ ಪ್ರಸ್ತಾಪಿಸಿದ ವಿಷಯದ ಮೇರೆಗೆ ವಿಜಯನಗರ ಕಾಲುವೆಗಳಿಗೆ ನೀರಿನ ಹಂಚಿಕೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಹಾಗೂ ತುಂಗಭದ್ರಾ ಡ್ಯಾಂಗೆ ಸಂಬಂಧಿಸಿದಂತೆ ಹಾಗೂ ಇನ್ನೀತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ತುಂಗಭದ್ರಾ ಯೋಜನೆಯಡಿ ಬರುವ 17 ವಿಜಯನಗರ ಕಾಲುವೆಗಳ ನಿರ್ವಹಣೆಗೆ ಪ್ರತ್ಯೇಕ ನಿಗಮ ಸ್ಥಾಪನೆ ಆಗಬೇಕು. ವಿಜಯನಗರ ಕಾಲುವೆಗಳ ಆಧುನೀಕರಣ ಕಾಮಗಾರಿಗಳ ನಿರ್ಮಾಣಕ್ಕೆ ಹೆಚ್ಚುವರಿ ಅವಧಿಯನ್ನು ಮಂಜೂರು ಮಾಡಬೇಕು. ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆಗಳಿಗೆ ಸಮಾನವಾಗಿ ನೀರಿನ ಹಂಚಿಕೆ ಮಾಡಬೇಕು. ತುಂಗಭದ್ರಾ ಯೋಜನೆಯ ವಿಜಯನಗರ ಕಾಲುವೆಗಳ ವ್ಯಾಪ್ತಿಯ ಬೆಲ್ಲ ಅಣೆಕಟ್ಟಿನಿಂದ ತಳವಾರಘಟ್ಟವರೆಗೆ ನದಿ ಪಾತ್ರದಲ್ಲಿ ಬರುವ ಬೆಲ್ಲ, ತುರ್ತಾ, ರಾಮಸಾಗರ ಮತ್ತು ಬೆಳಗೋಡ ಅಣೆಕಟ್ಟು ವ್ಯಾಪ್ತಿಯಲ್ಲಿ ಚಿಕ್ಕದಾದ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಬೇಕು. ಹೊಸಪೇಟೆ ತಾಲೂಕಿನ ಕಮಲಾಪುರ ವ್ಯಾಪ್ತಿಯಲ್ಲಿ ಇರುವ ವಿಜಯನಗರ ರಾಜರುಗಳಿಂದ ನಿರ್ಮಾಣವಾದ ಕೆರೆ ಅಭಿವೃದ್ದಿ ಮಾಡಬೇಕು ಎಂದು ವಿವಿಧ ವಿಷಯಗಳ ಬಗ್ಗೆ ಸಹ ಶಾಸಕ ಎಚ್.ಆರ್. ಗವಿಯಪ್ಪ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.ಈ ವಿಷಯಗಳ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ ಸಕಾರಾತ್ಮಕವಾಗಿ ಸ್ಪಂದಿಸಿದರು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎಚ್.ಆರ್.ಗವಿಯಪ್ಪ ವಿಜಯನಗರ ಕಾಲುವೆಗಳಿಗೆ ನೀರಿನ ಹಂಚಿಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳು ಮತ್ತು ತುಂಗಭದ್ರಾ ಡ್ಯಾಂಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಸ್ತಾಪಿಸಿದರು.