ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ಒಳಗಡೆ ಬರುವ ಎಲ್ಲ ಸಾರಿಗೆ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪಟ್ಟಣದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.ಕರವೇ ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ವಿಜಯಮಹಾಂತೇಶ ಗಿಡ್ಡಪ್ಪಗೋಳ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ್ ಎಸ್.ಎಸ್.ನಾಯಕಲಮಠರವರಿಗೆ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ ಅವರಿಗೆ ಮತ್ತು ಪಿ.ಎಸ್.ಐ ಅವರ ಕಚೇರಿಗೆ ಮಂಗಳವಾರ ಕೊಲ್ಹಾರ ತಾಲೂಕು ಕರವೇ ಘಟಕದ ಪದಾಧಿಕಾರಿಗಳು ತೆರಳಿ ಮನವಿ ಸಲ್ಲಿಸಿದರು.ರಾಷ್ಟ್ರೀಯ ಹೆದ್ದಾರಿ 218ರ ಮಾರ್ಗವಾಗಿ ಕೊಲ್ಹಾರ ಪಟ್ಟಣದ ಒಳಗಡೆ ಬರುವ ಎಲ್ಲ ಸಾರಿಗೆ ಬಸ್ಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈಗಾಗಲೇ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲಾ ಬಸ್ಗಳು ಕೊಲ್ಹಾರ ಪಟ್ಟಣದ ಮೂಲಕ ಹಾದು ಹೋಗಲು ಆದೇಶಿಸಿದ್ದಾರೆ. ಆದ್ದರಿಂದ ಪಟ್ಟಣದ ವಿವಿಧೆಡೆ ರಸ್ತೆ ಬದಿಯ ವ್ಯಾಪಾರದಿಂದ ಸುಗಮ ಸಂಚಾರಕ್ಕೆ ಕುತ್ತು ತಂದಿದೆ. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತ, ಗಾಂಧಿ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಅಗಸಿ ಹತ್ತಿರ ಮತ್ತು ಹಲವು ಮುಖ್ಯ ರಸ್ತೆಗಳಲ್ಲಿ ಎರಡು ಬದಿಯ ಪಾದಚಾರಿ ರಸ್ತೆ ಅತೀಕ್ರಮಣವಾಗಿ ಅದರ ಮೇಲೆ ವ್ಯಾಪಾರ ನಡೆಸುತ್ತಿದ್ದು ಹಾಗೂ ಪ್ರತಿ ಬುಧವಾರ ಪಟ್ಟಣದಲ್ಲಿ ನಡೆಯುವ ಸಂತೆ ದಿನ ರಸ್ತೆ ಮೇಲೆ ವ್ಯಾಪಾರ ನಡೆಯುತ್ತಿದೆ. ಇದರಿಂದ ಸಾರಿಗೆ ಬಸ್ಗಳು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಟ್ಟಣದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ತಾಲೂಕಿನ ತಹಸೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ, ಕರ್ನಾಟಕ ರಕ್ಷಣಾ ವೇದಿಕೆ ಕೊಲ್ಹಾರ ತಾಲೂಕು ಘಟಕದ ಅಧ್ಯಕ್ಷ ವಿಜಯಮಹಾಂತೇಶ ಗಿಡ್ಡಪ್ಪಗೋಳ, ತಾಲೂಕು ಉಸ್ತುವಾರಿ ರವಿ ಗೊಳಸಂಗಿ, ಕರವೇ ಕೊಲ್ಹಾರ ನಗರ ಘಟಕದ ಅಧ್ಯಕ್ಷ ಸಂತೋಷ ಹಡ್ರೋಳ್ಳಿ, ಕಾರ್ಯಕರ್ತರಾದ ಬಸವರಾಜ ಕುಬಕಡ್ಡಿ, ಬಸವರಾಜ ಗಡ್ಡಿಪೂಜಾರಿ, ಮಲ್ಲು ಉಗ್ರಾಣ,ರಾವತ್ ಬರಗಿ,ಅಶೋಕ ಹೆಳವರ,ವಿಶ್ವನಾಥ ಪುರಾಣಿಕ,ಹರೀಶ ಕಟಬರ, ಪರಸು ಗಣಿ ಉಪಸ್ಥಿತರಿದ್ದರು.