ಸ್ವಾಭಿಮಾನದಿಂದ ಬದುಕಲು ಸಂವಿಧಾನದಿಂದ ಅವಕಾಶ

| Published : Oct 08 2024, 01:12 AM IST

ಸಾರಾಂಶ

ಡಾ. ಅಂಬೇಡ್ಕರ್‌ ಯಾವುದೇ ಸ್ವಾರ್ಥ ಇಲ್ಲದೆ ಶೋಷಿತರ, ಹಿಂದುಳಿದ ಮತ್ತು ದಲಿತರ ಪರವಾಗಿ ಹೋರಾಡಿದ ಪರಿಣಾಮ ನನ್ನನ್ನು ಈಗ ಗುರುತಿಸುವಂತಾಗಿದೆ

ಮುಂಡರಗಿ: ಸಮಾಜದಲ್ಲಿ ಅನೇಕರು ಶಾಂತಿ ಮತ್ತು ನೆಮ್ಮದಿ ಸ್ವಾಭಿಮಾನದಿಂದ ಬದುಕಲು ಡಾ.ಬಿ.ಆರ್. ಅಂಬೇಡ್ಕರ್‌ ಅವರು ಕೊಟ್ಟಿರುವ ಸಂವಿಧಾನವೇ ಕಾರಣವಾಗಿದೆ ಎಂದು ಗದಗ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ ಅಧಿಕಾರೇತರ ಸದಸ್ಯ ಎಸ್.ಎನ್. ಬಳ್ಳಾರಿ ಹೇಳಿದರು.

ಅವರು ಭಾನುವಾರ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಾ. ಅಂಬೇಡ್ಕರ್‌ ಅವರು ಯಾವುದೇ ಸ್ವಾರ್ಥ ಇಲ್ಲದೆ ಶೋಷಿತರ, ಹಿಂದುಳಿದ ಮತ್ತು ದಲಿತರ ಪರವಾಗಿ ಹೋರಾಡಿದ ಪರಿಣಾಮ ನನ್ನನ್ನು ಈಗ ಗುರುತಿಸುವಂತಾಗಿದೆ ಎಂದು ಹೇಳಿದರು.

ಸಂವಿಧಾನದ ಆಶಯದಂತೆ ಎಲ್ಲರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳಬೇಕು. ಜಾತ್ಯತೀತ ಮನೋಭಾವವೇ ನಮ್ಮ ಬೆಳವಣಿಗೆಗೆ ಕಾರಣವಾಗಬೇಕು. ಸಂವಿಧಾನಕ್ಕೆ ಧಕ್ಕೆ ಬರುವ ಆತಂಕ ತಪ್ಪಿಸಲು ನಾವು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಬೇಕು. ಎಲ್ಲಿಯ ವರೆಗೆ ಸಂವಿಧಾನ ಗಟ್ಟಿಯಾಗಿರುತ್ತದೆಯೋ ಅಲ್ಲಿಯ ವರೆಗೆ ಹಕ್ಕುಗಳ ರಕ್ಷಣೆಯಾಗುತ್ತಿರುತ್ತದೆ ಎಂದರು.

ಹುಸೇನಸಾಬ್ ಕಾತರಕಿ, ದುದ್ದುಸಾಬ್ ಕಾತರಕಿ, ರಾಜಾಭಕ್ಷಿ ಬೆಟಗೇರಿ, ಇಸ್ಮಾಯಿಲ್ ನಮಾಜಿ, ಮುದಿಯಜ್ಜನವರ, ದಲಿತ ಸಂಘರ್ಷ ಸಮಿತಿಯ ಸೋಮಣ್ಣ ಹೈತಾಪುರ, ಲಕ್ಷ್ಮಣ ತಗಡಿನಮನಿ ಮಾತನಾಡಿದರು.

ವಾಲ್ಮೀಕಿ ಸಮಾಜ, ಹಾಲುಮತ ಸಮಾಜ ಹಾಗೂ ಅಲ್ಪಸಂಖ್ಯಾತರ ಸಮುದಾಯದ ಅನೇಕರು ಎಸ್.ಎನ್. ಬಳ್ಳಾರಿ ಅವರನ್ನು ಸನ್ಮಾನಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋರಾಟದ ಹಾದಿ ಎಂದರೆ ಅದು ಕಲ್ಲು ಮುಳ್ಳುಗಳಿಂದ ಕೂಡಿದ್ದು. ಸಮಸ್ಯೆಗಳನ್ನು ಮೆಟ್ಟಿನಿಂತಾಗಲೇ ದಡ ಸೇರಲು ಸಾಧ್ಯ. ನಾನು ಸಹ ಡಿಎಸ್ಎಸ್ ಸಂಘಟನೆ ಮೂಲಕವೇ ಬೆಳೆದು ಬಂದಿದ್ದು, ಸಾಮಾಜಿಕ ಶಕ್ತಿಗೆ ಹೋರಾಟ ಮುಖ್ಯ ಎಂದರು.

ಮೈಲಾರಪ್ಪ ಕಲಕೇರಿ, ಮಂಜುನಾಥ ಮುಂಡವಾಡ, ಸುರೇಶ ಕ್ಯಾದಿಗಿಹಳ್ಳಿ, ಮಾರುತಿ ಗುಡಿಮನಿ, ಫಕ್ರುಸಾಬ್ ಹಾರೋಗೇರಿ, ನಿಂಗಪ್ಪ ಪೂಜಾರ, ಮಂಜುನಾಥ ತಳಗೇರಿ, ದ್ಯಾಮಣ್ಣವರ, ತಿಪ್ಪಣ್ಣ, ಸುರೇಶ ಕಲ್ಲುಕುಟುಗರ, ರಾಜು ಡಾವಣಗೆರೆ ಪಾಲ್ಗೊಂಡಿದ್ದರು.