ದಾಬಸ್ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದಿಂದ ಆಲೂರು ಕಾಲೋನಿಯವರೆಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ನೆಲಮಂಗಲ ಮೀಸಲಾತಿಯ ಕ್ಷೇತ್ರವಾಗಿದ್ದು, ಅನೇಕ ಶಾಸಕರನ್ನು ನೋಡಿದೆ. ಆದರೆ ಇಲ್ಲಿಯವರೆಗೂ ಕೆಲ ಪರಿಶಿಷ್ಟಜಾತಿ ಹಾಗೂ ವಂಗಡದ ಜನರು ವಾಸಿಸುವ ಗ್ರಾಮಗಳಲ್ಲಿ ಮೂಲಸೌಕರ್ಯಗಳು ಇಲ್ಲದಿರುವುದು ನನಗೆ ನೋವು ತಂದಿದೆ. ನಾನು ಚುನಾವಣೆ ಸಮಯದಲ್ಲಿ ಬಂದಾಗ ರಸ್ತೆಗಾಗಿ ಸ್ಥಳೀಯರು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ಮಾಡಿದ್ದೇನೆ. ಇಂದು ಅವರ ಮುಖದಲ್ಲಿ ಸಂತೋಷ ಕಂಡು ನನಗೆ ಬಹಳಷ್ಟು ಸಂತೋಷವಾಗಿದೆ. ಬೇರೆ ಶಾಸಕರ ಬಗ್ಗೆ ಟೀಕೆ ಮಾಡುವುದಿಲ್ಲ ಆದರೆ ವಾಸ್ತವತೆಯನ್ನು ಜನರೇ ನೋಡಬೇಕಾಗಿದೆ ಎಂದರು.60 ವರ್ಷದ ನಂತರ ರಸ್ತೆ ಅಭಿವೃದ್ಧಿ: ಗ್ರಾಮದ ಯುವಕ ನಾಗರಾಜು ಮಾತನಾಡಿ, ಆಲೂರು ಕಾಲೊನಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿದ್ದು 200ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಆದರೆ ಈ ಗ್ರಾಮಕ್ಕೆ ಕಾಲು ದಾರಿ ಬಿಟ್ಟರೆ ರಸ್ತೆಯೂ ಇರಲಿಲ್ಲ, ರಸ್ತೆಯಿಲ್ಲ ಎಂದು ಗ್ರಾಮಕ್ಕೆ ಹೆಣ್ಣುಗಳನ್ನು ನೀಡುತ್ತಿರಲಿಲ್ಲವಂತೆ. ಈ ರಸ್ತೆಗಾಗಿ 50 ವರ್ಷಗಳಿಂದ ಗ್ರಾಮದ ಜನರು ಹೋರಾಟ ಮಾಡಿದ್ದಾರೆ. ಸೋಲೂರು ಅತಂತ್ರದ ಸ್ಥಿತಿಯ ಹಿನ್ನೆಲೆ ಅಂದಿನ ಶಾಸಕರು, ಅಧಿಕಾರಿಗಳು ಸ್ಪಂದಿಸದೆ ಸಮಸ್ಯೆ ಬಗೆಹರಿದಿರಲಿಲ್ಲ, ಶಾಸಕರಾದ ಶ್ರೀನಿವಾಸ್ ಅವರ ಸಹಕಾರದಿಂದ ನಾನು ಸ್ವತಃ ತಹಸೀಲ್ದಾರ್, ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಲೋಕಾಯುಕ್ತರು, ಶಾಸಕರ ಸಹಕಾರ ಪಡೆದು ಸ್ಥಳೀಯ ಜಮೀನಿನವರ ಮನವೊಲಿಸಿ ಮಾಲೀಕರಿಂದ 10 ಅಡಿಯಷ್ಟು ರಸ್ತೆಗೆ ಜಮೀನು ಬಿಡಿಸಿಕೊಂಡಿದ್ದೇವೆ. ಈಗ ಶಾಸಕರು 1 ಕೋಟಿ ಅನುದಾನ ನೀಡಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ನಮ್ಮ ಗ್ರಾಮದ ಜನರ 60 ವರ್ಷದ ಸಮಸ್ಯೆ ಪರಿಹಾರವಾಗಿದೆ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಟ್ಟೆಕೆರೆ ಬಾಬು, ಬಿಟ್ಟಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಗಂಗಬೈರಣ್ಣ, ಎನ್ಪಿಎ ಮಾಜಿ ಸದಸ್ಯ ರಂಗಸ್ವಾಮಿ, ಗ್ರಾಪಂ ಮಾಜಿ ಸದಸ್ಯೆ ಜಯಮ್ಮ ಕರಿಯಪ್ಪ, ಕೃಷ್ಣಪ್ಪ, ಮುಖಂಡರಾದ ಹನುಮಂತರಾಜು, ತೋಪೇಗೌಡ, ನರಸಿಂಹಮೂರ್ತಿ, ಸುರೇಶ್, ನಾಗರಾಜು, ಚಿದಾನಂದ್, ಪೂಜಹನುಮಂತಯ್ಯ, ರವಿಕುಮಾರ್, ಆಂಜಿನಮೂರ್ತಿ, ಸ್ವಾಮಿ, ಕಾಚನಹಳ್ಳಿ ಮನು ಇತರರಿದ್ದರು.ಪೋಟೋ 11 :
ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದಿಂದ ಆಲೂರು ಕಾಲೋನಿಯವರೆಗಿನ ಸಿಸಿ ರಸ್ತೆ ಅಭಿವೃದ್ಧಿ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ್ ಚಾಲನೆ ನೀಡಿದರು. ಗ್ರಾಮದ ಯುವಕ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಟ್ಟೆಕೆರೆ ಬಾಬು, ಬಿಟ್ಟಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಗಂಗಬೈರಣ್ಣ ಇತರರಿದ್ದರು.