ಸಾರಾಂಶ
ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಸದರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2023ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ನಡೆದ ಕಾಮಗಾರಿಗಳು ಮತ್ತು ವೆಚ್ಚ ಹಾಗೂ 15ನೇ ಹಣಕಾಸು ಯೋಜನೆಯಿಂದ ನಡೆದ ಕಾಮಗಾರಿಗಳು ಮತ್ತು ವೆಚ್ಚ ಇದರ ವರದಿ ಮಂಡನೆ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿಗೆ ಸಮೀಪದ ಆಲೂರುಸಿದ್ದಾಪುರ ಗ್ರಾ.ಪಂ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆಯಲ್ಲಿ ಗುರುವಾರ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆಯಿತು. ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಸದರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2023ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ನಡೆದ ಕಾಮಗಾರಿಗಳು ಮತ್ತು ವೆಚ್ಚ ಹಾಗೂ 15ನೇ ಹಣಕಾಸು ಯೋಜನೆಯಿಂದ ನಡೆದ ಕಾಮಗಾರಿಗಳು ಮತ್ತು ವೆಚ್ಚ ಇದರ ವರದಿಯನ್ನು ಉದ್ಯೋಗ ಖಾತ್ರಿ ಯೋಜನೆಯ ತಾಲೋಕು ಅಧಿಕಾರಿ ದಿನೇಶ್ ಮಂಡಿಸಿದರು.ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ 2023 ಸಾಲಿನಲ್ಲಿ ವಿವಿಧ 40 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 40 ಲಕ್ಷದ 40 ಸಾವಿರ 440 ರು. ವೆಚ್ಚವಾಗಿದೆ. 15ನೇ ಹಣಕಾಸು ಯೋಜನೆ ಅನುದಾನದಿಂದ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಇದಕ್ಕಾಗಿ ಒಟ್ಟು 25 ಲಕ್ಷದ 63 ಸಾವಿರದ 143 ರು. ವೆಚ್ಚವಾಗಿದೆ ಎಂದು ವರದಿಯಲ್ಲಿ ಅವರು ಮಂಡಿಸಿದರು. ಈ ಕುರಿತು ಗ್ರಾಮಸ್ಥರು ಚರ್ಚಿಸಿದರು.
ಗ್ರಾಮಸಭೆ ಉದ್ದೇಶ ಕುರಿತು ಮಾಹಿತಿ ನೀಡಿದ ಉದ್ಯೋಗ ಖಾತ್ರಿ ಯೋಜನೆ ಅಧಿಕಾರಿ ದಿನೇಶ್, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಹಲವಾರು ಕಾಮಗಾರಿಗಳನ್ನು ಮಾಡುವುದರ ಜೊತೆಯಲ್ಲಿ ಯೋಜನೆ ಮೂಲಕ ಹೈನುಗಾರಿಕೆ, ಕುರಿ, ಕೋಳಿ, ಹಂದಿ, ಹಸು ಇನ್ನು ಮುಂತಾದವುಗಳನ್ನು ಸಾಕಾಣಿಕೆ ಮಾಡಲು ವೈಯಕ್ತಿಕ ಸಾಲ ಮತ್ತು ಸಬ್ಸಿಡಿ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡುತ್ತದೆ ಎಂದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಮಾಹಿತಿ ನೀಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು 15ನೇ ಹನಕಾಸು ಯೋಜನೆ ಅನುದಾನಗಳಲ್ಲಿ ಆಗಿರುವ ಕಾಮಗಾರಿಗಳು ಆಗಿರುವ ವೆಚ್ಚವನ್ನು ಗ್ರಾಮಸ್ಥರಿಗೆ ತಿಳಿಸುವ ಜವಾಬ್ದಾರಿ ಸಂಬಂಧಪಟ್ಟ ಗ್ರಾ.ಪಂ. ಅವರದಾಗಿದ್ದು, ಈ ನಿಟ್ಟಿನಲ್ಲಿ ಈ ಯೋಜನೆಗಳಿಗೆ ಸಂಬಂಧ ಪಟ್ಟ ಗ್ರಾಮಸಭೆಯನ್ನು ನಡೆಸಲು ಸರ್ಕಾರ ಆದೇಶ ನೀಡಿರುವ ಉದ್ದೇಶದಿಂದ ಸಭೆಯನ್ನು ನಡೆಸಲಾಗಿದೆ. ಗ್ರಾ.ಪಂ. ಅಭಿವೃದ್ಧಿಗೂ ಇದು ಪೂರಕವಾಗಿದೆ ಎಂದರು.
ಸಭೆಯಲ್ಲಿ ಆಲೂರುಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರುತಿ, ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಮೋಹನ್, ಉದ್ಯೋಗ ಖಾತ್ರಿ ಯೋಜನೆ ಅಭಿಯಂತರ ಅಶೋಕ್, ಗ್ರಾ.ಪಂ. ಸದಸ್ಯರು ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.