ಆಳ್ವಾಸ್‌ ಕಾಲೇಜು: ಗಣಿತ ಉಪನ್ಯಾಸಕರ ಕಾರ್ಯಾಗಾರ

| Published : Jul 25 2025, 01:13 AM IST

ಸಾರಾಂಶ

ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಗಣಿತ ಉಪನ್ಯಾಸಕರ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಸಹಾಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಎಂ. ಆಳ್ವ ಮಾತನಾಡಿ, ಗಣಿತವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಎಲ್ಲಾ ತಾರ್ಕಿಕ ವಿಜ್ಞಾನಗಳಿಗೆ ಹೇಗೆ ಅಡಿಪಾಯ ಹಾಕುತ್ತದೆ ಎಂಬುದನ್ನು ಉಲ್ಲೇಖಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಆದರೆ ಜೆ.ಇ.ಇ., ಎನ್.ಎ.ಟಿ.ಎ., ಎನ್.ಡಿ.ಎ., ಬಿ. ನಂತಹ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಬಂದಾಗ ವಿದ್ಯಾರ್ಥಿಗಳು ಹಿಂದುಳಿಯುತ್ತಾರೆ. ಪಿ.ಯು.ಸಿ. ಮಟ್ಟದಲ್ಲಿ ಫಲಿತಾಂಶಗಳನ್ನು ಹೆಚ್ಚಿಸಲು ಗಣಿತದ ಅಡಿಪಾಯವನ್ನು ಬಲಪಡಿಸಲು ಉಪನ್ಯಾಸಕರು ಕಾರ್ಯ ಪ್ರವೃತರಾಗಬೇಕೆಂದರು.ದ. ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ, ಶಿಕ್ಷಕರು ಕೇವಲ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು, ಇಲ್ಲವಾದರೆ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಶಿಕ್ಷಕರ ಜಾಗ ಆಕ್ರಮಿಸಿಕೊಳ್ಳುತ್ತದೆ ಎಂದರು.ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವಿದ್ಯಾರ್ಥಿಗಳು ಗಣಿತದಲ್ಲಿ ಏಕೆ ಹಿಂದುಳಿಯುತ್ತಾರೆ ಎಂಬುದಕ್ಕೆ ಉದಾಹರಣೆಗಳನ್ನು ನೀಡಿದರು. ಗಣಿತ ಮತ್ತು ಭೌತಶಾಸ್ತ್ರವು ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಹಾಗೂ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಡಾ. ಪ್ರಶಾಂತ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಈ ಸಂದರ್ಭ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ‘ದಿ ಬುಕ್ ಮ್ಯಾಥ್ ಮೇಡ್ ಈಸಿ’ ಪುಸ್ತಕದ 8ನೇ ಆವೃತ್ತಿ ಬಿಡುಗಡೆಗೊಳಿಸಲಾಯಿತು.

ನಿವೃತ್ತ ಗಣಿತ ಶಿಕ್ಷಕಿ ಸೀತಾ ಹಾಗೂ ಪುಸ್ತಕದ ಸಂಪಾದಕೀಯ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಮುಂಬರುವ ಶೈಕ್ಷಣಿಕ ವರ್ಷದ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಘದ ಅಧ್ಯಕ್ಷ ಲಾರೆನ್ಸ್ ಸಿಕ್ವೆರಿಯಾ, ಉಪಾಧ್ಯಕ್ಷ ಆದರ್ಶ್ ಚೊಕ್ಕಾಡಿ, ಕಾರ್ಯದರ್ಶಿ ಅನುಪಮಾ ಮತ್ತಿತರರು ಉಪಸ್ಥಿತರಿದ್ದರು.ಉಪನ್ಯಾಸಕ ವರುಣ್ ಪ್ರಭು, ವೆಲಿಟ, ಲೋಹಿತ್ ಸಾಲ್ಯಾನ್ ಹಾಗೂ ಸುಕನ್ಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರನಾಥ್ ಬರ್ವೆ ವಂದಿಸಿದರು.