ಆಳ್ವಾಸ್ ಪುನರ್ಜನ್ಮ: ಮಾನಸಿಕ ಆರೋಗ್ಯ ಆಸ್ಪತ್ರೆ ಉದ್ಘಾಟನೆ

| Published : Jul 15 2025, 01:00 AM IST

ಸಾರಾಂಶ

ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮಿಜಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳನ್ನು ನೀಡುವ ‘ಆಳ್ವಾಸ್ ಪುನರ್ಜನ್ಮ’ ಮಾನಸಿಕ ಆರೋಗ್ಯ ಆಸ್ಪತ್ರೆಯ ಉದ್ಘಾಟನೆ ಭಾನುವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಆರೋಗ್ಯ ಕ್ಷೇತ್ರದಲ್ಲಿ ಮಾನಸಿಕ ರೋಗಗಳ ಚಿಕಿತ್ಸೆಯ ವೈದ್ಯರು ಹಾಗೂ ವ್ಯಸನಮುಕ್ತ ಕೇಂದ್ರಗಳ ಅಗತ್ಯ ಬಹಳಷ್ಟಿದೆ. ನಮ್ಮ ದೇಶದಲ್ಲಿನ ಪ್ರತೀ ಜಿಲ್ಲೆಯಲ್ಲಿ 2 ಲಕ್ಷ ಜನ ಮದ್ಯವ್ಯಸನದ ಸಮಸ್ಯೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಹೇಳಿದರು.ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮಿಜಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳನ್ನು ನೀಡುವ ‘ಆಳ್ವಾಸ್ ಪುನರ್ಜನ್ಮ’ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳೂರಿನ ಮನೋವೈದ್ಯ ಸಲಹೆಗಾರ ಡಾ.ಕ್ಯಾರೋಲಿನ್ ಡಿಸೋಜಾ ಮಾತನಾಡಿ, ಇಂದು ಮದ್ಯಪಾನ, ಮಾದಕವಸ್ತುಗಳು, ಸಿಗರೇಟು, ಡ್ರಗ್ಸ್ ಮುಂತಾದವುಗಳು ಯುವಕ-ಯುವತಿಯರ ಬದುಕನ್ನು ಜರ್ಜರಿತಗೊಳಿಸುತ್ತಿವೆ. ನಾವು ಎಲ್ಲರೂ ಒಟ್ಟಾಗಿ ಹೋರಾಡಿದರೆ, ಯಾವುದೇ ವ್ಯಸನವೂ ನಮ್ಮೊಳಗೆ ತಾನಾಗಿ ಸೋಲುತ್ತದೆ ಎಂದರು.

ಬೆಳ್ತಂಗಡಿಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ಮಾತನಾಡಿದರು.

ಆಳ್ವಾಸ್ ಪುನರ್ಜನ್ಮದ ವಿಶೇಷತೆ:

ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ನಿರ್ಮಿಸಲಾಗಿರುವ ನೂತನ 50 ಹಾಸಿಗೆಯ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳು ಲಭ್ಯವಿವೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿರುವುದು ವಿಶೇಷ. ಅಲೋಪಥಿ, ನ್ಯಾಚುರೋಪಥಿ, ಆಯುರ್ವೇದ, ಪಿಸಿಯೋತೆರೆಪಿ, ಮನೋವೈದ್ಯ ಶಾಸ್ತ್ರ ಹಾಗೂ ಯೋಗ ಧ್ಯಾನ, ಮಾನಸಿಕ ಹಾಗೂ ಸಾಮಾಜಿಕ ಶಿಕ್ಷಣದೊಂದಿಗೆ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಯ ವಿಧಾನದೊಂದಿಗೆ ಕಾರ‍್ಯನಿರ್ವಹಿಸುವ ಆಸ್ಪತ್ರೆ ಇದಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಸಮಾಜದ ಪರಿಕಲ್ಪನೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕೆಲಸ ನಿರ್ವಹಿಸುತ್ತಿದ್ದು, ಈ ನೆಲೆಯಲ್ಲಿ ನೂತನವಾಗಿ ಆರಂಭಗೊಂಡ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯು ಈ ಧ್ಯೇಯೋದ್ದೇಶವನ್ನು ಇನ್ನಷ್ಟು ಸಕಾರಗೊಳಿಸಲಿದೆ ಎಂದರು.ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ ಆಳ್ವ, ಡಾ.ಹನ, ಡಾ.ಗ್ರೀಷ್ಮಾ ಹಾಗೂ ಇನ್ನಿತರರು ಇದ್ದರು. ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ‍್ಯ ಡಾ.ಕುರಿಯನ್ ಸ್ವಾಗತಿಸಿದರು. ಪುನರ್ಜನ್ಮದ ಆಪ್ತ ಸಮಾಲೋಚಕಿ ಸುಮನ್ ಪಿಂಟೋ ವಂದಿಸಿದರು. ಪ್ರೊ.ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.