ಹಿರಿಯರನ್ನು ಸದಾ ಗೌರವಿಸಿ, ವಿಧೇಯತೆ ತೋರಬೇಕು

| Published : Jun 18 2025, 11:48 PM IST

ಹಿರಿಯರನ್ನು ಸದಾ ಗೌರವಿಸಿ, ವಿಧೇಯತೆ ತೋರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಹಳೇಬೇರು, ಹೊಸಚಿಗುರು ಎಂಬಂತೆ ಕಿರಿಯರು ಹಿರಿಯರನ್ನು ಸದಾ ಗೌರವಿಸಿ, ವಿಧೇಯತೆ ತೋರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದ್ದಾರೆ.

- ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನ ಕಾರ್ಯಕ್ರಮದಲ್ಲಿ ಮಹಾವೀರ ಮ. ಕರೆಣ್ಣವರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಳೇಬೇರು, ಹೊಸಚಿಗುರು ಎಂಬಂತೆ ಕಿರಿಯರು ಹಿರಿಯರನ್ನು ಸದಾ ಗೌರವಿಸಿ, ವಿಧೇಯತೆ ತೋರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಹಿರಿಯ ನಾಗರಿಕರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ''''ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನ'''' ಪ್ರಯುಕ್ತ ಹಾಗೂ ಹಿರಿಯ ನಾಗರಿಕರ ಹಕ್ಕುಗಳ ಮತ್ತು ಸೌಲಭ್ಯಗಳ ಕುರಿತಾಗಿ ಹಾಗೂ ಅವರ ಮೇಲೆ ನಡೆಯುವ ದೌರ್ಜನ್ಯಗಳ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಅನುಭವವನ್ನು ಪರಿಗಣಿಸಿ, ಜೀವನದಲ್ಲಿ ಅಳವಡಿಸಬೇಕು. ಹಿರಿಯ ನಾಗರಿಕರ ಆಪತ್ತಿನ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಕಾನೂನು ಸೇವಾ ಪ್ರಾಧಿಕಾರ ಸಹಾಯದೊಂದಿಗೆ ನ್ಯಾಯ ಪಡೆಯಬಹುದು ಎಂದ ಅವರು, ಹಿರಿಯ ನಾಗರಿಕರು ಈ ದೇಶದ ಸಂಪತ್ತು ಮತ್ತು ಅವರ ಮೌಲ್ಯಗಳು ಏನೆಂಬುದನ್ನು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ಇವತ್ತಿನ ಕೆಲ ಮಕ್ಕಳಿಂದ ತಾಯಿ-ತಂದೆ ಆಸ್ತಿ, ಅಂತಸ್ತುಗಳನ್ನು ಮಾಡಿಕೊಟ್ಟಿಲ್ಲ ಎಂಬ ಕಾರಣಗಳಿಗೆ ನಿಂದನೆಗಳು, ದೌರ್ಜನ್ಯಗಳು ನಡೆಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ವಿವಾಹವಾಗದೇ ಖಿನ್ನತೆಗೆ ಒಳಗಾಗುವಂತಾಗಿದೆ. ಹೆತ್ತ ತಂದೆ- ತಾಯಿಗೆ ನಿಂದಿಸುತ್ತಿದ್ದಾರೆ. ಇಂಥ ಅನ್ಯಾಯದ ವಿರುದ್ಧ ಹಿರಿಯ ನಾಗರಿಕರು ಕಾನೂನಿನ ಸೇವೆ ಪಡೆಯಬೇಕು. ದೌರ್ಜನ್ಯಕ್ಕೆ ತುತ್ತಾಗಿ ಏನೂ ಗೊತ್ತಿಲ್ಲದಂತೆ ಇರುವುದು ತಪ್ಪು. ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಕಾನೂನಿನ ಸಲಹೆ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್.ಗುರುಮೂರ್ತಿ ಮಾತನಾಡಿದರು. ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ವೀರಯ್ಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಡಾ. ಕೆ.ಕೆ.ಪ್ರಕಾಶ್, ಜಿಲ್ಲಾ ಸಂಯೋಜಕ ಡಿ.ನಾಗರಾಜ ಉಪಸ್ಥಿತರಿದ್ದರು.

- - -

-17ಕೆಡಿವಿಜಿ40:

ದಾವಣಗೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನ ಕಾರ್ಯಕ್ರಮವನ್ನು ಮಹಾವೀರ ಮ. ಕರೆಣ್ಣವರ ಉದ್ಘಾಟಿಸಿದರು.