ಚುನಾವಣೆ ಸಂದರ್ಭದಲ್ಲಿ ಜನಸೇವೆ ಮಾಡುವ ರಾಜಕೀಯ ಮುಖಂಡರು ಗೆದ್ದಮೇಲೆ ಜನರನ್ನು ಮರೆಯುತ್ತಾರೆ ಎಂದು ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಚುನಾವಣೆ ಸಂದರ್ಭದಲ್ಲಿ ಜನಸೇವೆ ಮಾಡುವ ರಾಜಕೀಯ ಮುಖಂಡರು ಗೆದ್ದಮೇಲೆ ಜನರನ್ನು ಮರೆಯುತ್ತಾರೆ ಎಂದು ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ ನುಡಿದರು.ನಗರದ ಕಲಾಭವನದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ವಿವಿಕೆ ಫೌಂಡೇಶನ್ ವತಿಯಿಂದ "ಸ್ತ್ರೀ ಸಂಭ್ರಮ " ಬಾಗಲಕೋಟೆ ಪಿಂಕ್ ವಾಕ್-2026 ಕಾರ್ಯಕ್ರಮ ನಿಮಿತ್ತ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ವೀಣಾ ಕಾಶಪ್ಪನವರ ಅಧಿಕಾರದಲ್ಲಿ ಇಲ್ಲದಿದ್ದರೂ ಜನಸೇವೆ ಮಾಡುತ್ತಿದ್ದಾರೆ. ಉತ್ತಮ ಕೆಲಸ ಮಾಡುವವರನ್ನು ಸದಾ ಬೆಂಬಲಿಸಬೇಕು ಎಂದು ತಿಳಿಸಿದರು. ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಮಹಿಳೆಯರು ಉತ್ತಮ ಪೌಷ್ಟಿಕ ಆಹಾರ ಸೇವನೆಗೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪುರುಷರು ತಂಬಾಕು, ಮದ್ಯ ಸೇವನೆ ಮಾಡುತ್ತಾರೆಂಬ ಕಾರಣಕ್ಕೆ ಕ್ಯಾನ್ಸರ್ ಬರುತ್ತದೆ ಎನ್ನುತ್ತಾರೆ. ಬಹುಶಃ ಮಹಿಳೆಯರಿಗೆ ರಾಸಾಯನಿಕ ಔಷಧ ಬಳಕೆ ಆಹಾರ ಹಾಗೂ ಜಂಕ್ ಫುಡ್ನಿಂದ ಬರುತ್ತದೆ. ಫುಡ್ನಿಂದ ದೂರವಿರಬೇಕು. ಟೆಸ್ಟಿಂಗ್ ಪೌಡರ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮನೆಯಲ್ಲಿಯೇ ಅಡುಗೆ ಮಾಡಿ ತಿನ್ನಿರಿ. ಹೊರಗಿನ ಆಹಾರದಿಂದ ದೂರವಿರಿ ಎಂದು ಸಲಹೆ ಮಾಡಿದರು.ವಿವಿಕೆ ಫೌಂಡೇಶನ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಕುಟುಂಬದ ಜವಾಬ್ದಾರಿ ಹೊತ್ತ ಮಹಿಳೆಯರು ಆರೋಗ್ಯದ ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಜನರನ್ನು ಕಾಡುತ್ತಿದೆ. ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. ಆ ಕಾರಣಕ್ಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆರೋಗ್ಯಕ್ಕೂ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.ಭೋವಿ ಗುರುಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಾಣಿಕೇಶ್ವರಿ ಆಶ್ರಮದ ಚಿಕ್ಕ ಮಾಣಿಕೇಶ್ವರಿ ಅಮ್ಮನವರು, ಸಿದ್ಧಲಿಂಗ ಶಿವಾಚಾರ್ಯರು, ಜಾನಪದ ಕಲಾವಿದೆ ಗೌರಮ್ಮ ಸಂಕಿನಮಠ ಮತ್ತಿತರರು ಇದ್ದರು.ಆರೋಗ್ಯ ಜಾಗೃತಿಗೆ ಪಿಂಕ್ವಾಕ್ ಥಾನ್:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನಗರದಲ್ಲಿ ವಿವಿಕೆ ಫೌಂಡೇಶನ್ ವತಿಯಿಂದ ಜಿಲ್ಲಾಡಳಿತ ಹಾಗೂ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ ಹಮ್ಮಿಕೊಂಡ ಬಾಗಲಕೋಟೆ ಪಿಂಕ್ ವಾಕ್ಥಾನ್ಗೆ ಬಿಗ್ಬಾಸ್ ಖ್ಯಾತಿಯ ಅಶ್ವಿನಿಗೌಡ ಹಾಗೂ ನಟ ಪ್ರಥಮ್ ಚಾಲನೆ ನೀಡಿದರು. ವಿವಿಕೆ ಫೌಂಡೇಶನ್ನಿಂದ ಸ್ತ್ರೀ ಸಂಭ್ರಮ ಆಯೋಜನೆ ಕಲಾಭವನದವರೆಗೆಜಿಲ್ಲಾಡಳಿತ ಭವನದಿಂದ ಹೊರಟ ವಾಕ್ಥಾನ್ ನವನಗರದ ಸಾಗಿತು. ಮೆರವಣಿಗೆಯಲ್ಲಿ ಮಹಿಳೆಯ ಆರೋಗ್ಯದ ಕುರಿತ ಪೋಸ್ಟರ್, ಡೊಳ್ಳು ಕುಣಿತ ಸೇರಿದಂತೆ ನಾನಾ ವಾದ್ಯಗಳು ಆಕರ್ಷಣೆ ಪಡೆದವು. ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ್, ಫೌಂಡೇಶನ್ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಳು ನಿಪನಾಳ ಸೇರಿದಂತೆ ಹಲವು ಕಲಾವಿದರು ಸಾಥ್ ನೀಡಿದರು. ತೆರೆದ ವಾಹನದಲ್ಲಿ ಕಲಾವಿದರು ಸಾಗಿದರು. ಅವರ ಹಿಂದೆ ಕಾಲೇಜ್ ವಿದ್ಯಾರ್ಥಿಗಳು, ಅಂಗನವಾಡಿ ಸಹಾಯಕಿಯರು ಇದ್ದರು.ಸ್ಟೆಪ್ ಹಾಕಿ ಹುರುಪು ತುಂಬಿದ ವೀಣಾ!:
ಕೃಷಿ ತಜ್ಞೆ ಕವಿತಾ ಮಿಶ್ರಾ, ವಿಮುಕ್ತಾ ಅವಿನಾಶ ಇತರರು ನಾನಾ ರೀತಿಯ ಹಾಡಿಗೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ಟೆಪ್ ಹಾಕಿ ಹುರುಪು ನೀಡಿದರು. ಮಾಳು ನಿಪನಾಳ ಅವರ ನಾ ಡ್ರೈವರಾ.. ಕಲಾವಿದರಾದ ಶಿವಾನಿ ಶಿವದಾಸ್, ಅನಘಾ ಪಾಟೀಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಾಯಕ ಹನುಮಂತ ಲಮಾಣಿ, ಕಲಾವಿದೆ ಅಶ್ವಿನಿಗೌಡ, ನಟ ಪ್ರಥಮ, ಗಾಯಕ ಮಾಳು ನಿಪನಾಳ, ಗಾಯಕಿ ಅನಘಾ ಪಾಟೀಲ ಗಾಯನದ ಮೂಲಕ ಜನರನ್ನು ರಂಜಿಸಿದರು. ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹಾಸ್ಯ ಚಟಾಕಿ ಹಾರಿಸಿದರು.ಕ್ಯಾನ್ಸರ್ ಬರದಂತೆ ಮಹಿಳೆಯರು ಜೀವನಶೈಲಿ ಹೇಗೆ ರೂಪಿಸಿಕೊಳ್ಳಬೇಕೆಂದು ತಿಳಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು.-ಗುರುಮಹಾಂತಸ್ವಾಮೀಜಿ,
ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠ.ಅಸ್ಕಿ ಆಸ್ಪತ್ರೆ ಸಹಯೋಗದಲ್ಲಿ ಕ್ಯಾನ್ಸರ್ ತಪಾಸಣೆ ಹಮ್ಮಿಕೊಂಡಿದ್ದು, ಒಂದು ವಾರ ಉಚಿತ ತಪಾಷಣೆ ಇರುತ್ತದೆ. ಮಹಿಳೆಯರು ಆರೋಗ್ಯ ತಪಾಸಣೆ ಹಿಂಜರಿಯಬಾರದು. ಮಹಿಳಾ ದಿನಾಚರಣೆ ನಿಮಿತ್ತ ಈ ದಿನವನ್ನು ಉಲ್ಲಸಿತವಾಗಿ ಕಳೆಯಬೇಕೆಂಬ ಉದ್ದೇಶದಿಂದ ನಾನಾ ಕಲಾವಿದರಿಂದ ಸಂಗೀತ ಕಾರ್ಯಕ್ರಮವಿದೆ. ಇದರ ಯಶಸ್ವಿನ ಬೆನ್ನಲ್ಲೇ ಮುಂದಿನ ಹಂತದಲ್ಲಿ ಯುವ ಉತ್ಸವ ನಡೆಸಲಾಗುವುದು.-ವೀಣಾ ಕಾಶಪ್ಪನವರ,
ಜಿಪಂ ಮಾಜಿ ಅಧ್ಯಕ್ಷೆ.