ಭಾರತ ವಾಸ್ತುಶಿಲ್ಪ ಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ

| Published : Jan 02 2025, 12:31 AM IST

ಸಾರಾಂಶ

ಭಾರತದ ವಾಸ್ತುಶಿಲ್ಪ ಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರವಾಗಿದೆ. ಅವರು ದೇಶಾದ್ಯಂತ ಅತ್ಯಂತ ನಾಜೂಕಾದ ಕೆತ್ತನೆಯಿಂದ ಹಲವಾರು ದೇವಾಲಯಗಳನ್ನು ನಿರ್ಮಿಸಿದವರು ಎಂದು ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ತಿಪ್ಪೇಸ್ವಾಮಿ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿ ತಾಲೂಕು ಕಚೇರಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷ ತಿಪ್ಪೇಸ್ವಾಮಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾರತದ ವಾಸ್ತುಶಿಲ್ಪ ಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರವಾಗಿದೆ. ಅವರು ದೇಶಾದ್ಯಂತ ಅತ್ಯಂತ ನಾಜೂಕಾದ ಕೆತ್ತನೆಯಿಂದ ಹಲವಾರು ದೇವಾಲಯಗಳನ್ನು ನಿರ್ಮಿಸಿದವರು ಎಂದು ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ತಿಪ್ಪೇಸ್ವಾಮಿ ಹೇಳಿದರು.

ಬುಧವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಅವರ ಕಲೆಗಳನ್ನು ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳಾದ ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿರುವುದು ಕಾಣಬಹುದಾಗಿದೆ ಎಂದರು.

ಭಾರತ ದೇಶದ ಸಂಸ್ಕೃತಿ ಮತ್ತು ಪರಂಪರೆಗೆ ವಿಶ್ವಕರ್ಮ ಸಮಾಜ ಅಪಾರ ಕೊಡುಗೆ ನೀಡಿದೆ. ಆದರೆ, ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ನಮ್ಮ ಸಮಾಜಕ್ಕೆ ನ್ಯಾಯಯುತವಾಗಿ ನೀಡಬೇಕಾದ ಸೌಲಭ್ಯಗಳನ್ನು ನೀಡಲು ಇಂದಿನ ಸರ್ಕಾರಗಳು ಮುಂದಾಗಿಲ್ಲ. ಈ ಹಿನ್ನೆಲೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಇನ್ನಾದರೂ ಸಮಾಜ ಬಾಂಧವರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಸಮಾಜದ ಗೌರವ ಅಧ್ಯಕ್ಷ ಶಂಕರಾಚಾರ್ ಮಾತನಾಡಿ, ಚನ್ನಗಿರಿ ಪಟ್ಟಣದ ಕಾಳಿಕಾಂಬ ದೇವಾಲಯದ ಬಳಿ ವಿಶ್ವಕರ್ಮ ಸಮಾಜ ವತಿಯಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 15 ವರ್ಷಗಳೇ ಕಳೆದರೂ ಇಂದಿಗೂ ಭವನ ಪೂರ್ಣಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸಮುದಾಯ ಭವನ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಿಕೊಡಬೇಕು ಎಂದರು.

ಈ ಸಂದರ್ಭ ಅವರಶಿಲ್ಪಿ ಜಕಣಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಗಿ ತಹಸೀಲ್ದಾರ್ ಶಂಕರಪ್ಪ, ಮೌನೇಶಾಚಾರ್, ಶ್ರೀನಿವಾಸಾಚಾರ್, ಸುಬ್ರಮಣ್ಯಾಚಾರ್, ನಾಗರಾಜಾಚಾರ್, ಕಚೇರಿ ಸಿಬ್ಬಂದಿ, ಸಮಾಜ ಬಾಂಧವರು ಹಾಜರಿದ್ದರು.

- - - -1ಕೆಸಿಎನ್ಜಿ2.ಜೆಪಿಜಿ:

ಚನ್ನಗಿರಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ವಿಶ್ವಕರ್ಮ ಸಮಾಜದಿಂದ ನಡೆದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದಲ್ಲಿ ಗಣ್ಯರು ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.