ಧಾರವಾಡ:

ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವ ಪಡೆದಿರುವ ಅಧಿಕ ಮಾಸದ ಅಂಗವಾಗಿ ನಗರದ ರವಿವಾರ ಪೇಟೆಯ ಬಾಳಿಕಾಯಿ ಓಣಿಯಲ್ಲಿರುವ ಶ್ರೀವಿಠ್ಠಲ-ರುಕುಮಾಯಿ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜದ ಸನ್ನಿತ್ರ ಬಳಗದ ನೇತೃತ್ವದಲ್ಲಿ ಅಂಬಾ ಭವಾನಿ ಗೊಂದಲ ಮಹೋತ್ಸವ ಭಕ್ತಿಭಾವ ಮತ್ತು ಸಂಭ್ರಮದಿಂದ ನೆರವೇರಿತು.

ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸವನ್ನು ಧಾರ್ಮಿಕ ಆಚರಣೆ, ಪೂಜೆ-ಪುನಸ್ಕಾರ ಹಾಗೂ ದೇವಿ ಆರಾಧನೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಗೊಂದಲ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ಅಂಬಾ ಭವಾನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಸನ್ನಿಧಾನದಲ್ಲಿ ಸಂಪ್ರದಾಯಬದ್ಧ ವಿಧಿ-ವಿಧಾನಗಳ ಮೂಲಕ ನಡೆದ ಗೊಂದಲ ಕಾರ್ಯಕ್ರಮವು ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ನೆಮ್ಮದಿ ನೀಡಿತು.

ಗೊಂದಲ ಮಹೋತ್ಸವವು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಜನಪ್ರಿಯವಾಗಿರುವ ಪಾರಂಪರಿಕ ಧಾರ್ಮಿಕ-ಸಾಂಸ್ಕೃತಿಕ ಆಚರಣೆಯಾಗಿದ್ದು, ಅಂಬಾ ಭವಾನಿ ಸೇರಿದಂತೆ ವಿವಿಧ ಶಕ್ತಿದೇವತೆಗಳ ಆರಾಧನೆಯ ಭಾಗವಾಗಿ ಇದನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಗುತ್ತದೆ. ದೇವಿಯ ಮಹಿಮೆ, ಪುರಾಣ ಪ್ರಸಂಗ ಹಾಗೂ ಭಕ್ತಿಯ ಸಂದೇಶಗಳನ್ನು ಗೀತೆ ಮತ್ತು ವಾದ್ಯಗಳ ಮೂಲಕ ಬಿಂಬಿಸುವ ಈ ಆಚರಣೆ ಜನಪದ ಸಂಸ್ಕೃತಿಯ ಪ್ರತೀಕವಾಗಿದೆ.

ಕಾರ್ಯಕ್ರಮದ ಅಂಗವಾಗಿ ವಿಠ್ಠಲ-ರುಕುಮಾಯಿ ಹಾಗೂ ಅಂಬಾ ಭವಾನಿ ದೇವಿಯ ವಿಶೇಷ ಅಲಂಕಾರ, ಪೂಜೆ, ಆರತಿ ಹಾಗೂ ಮಂಗಳ ಕಾರ್ಯಕ್ರಮಗಳು ನಡೆದವು. ಭಕ್ತರು ಕುಟುಂಬ ಸಮೇತರಾಗಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.


ನಾಮದೇವ ಶಿಂಪಿ ಸಮಾಜದ ರಾಜ್ಯಾಧ್ಯಕ್ಷ ನಾರಾಯಣ ಕೊಪರಡೆ, ಮುರಳೀಧರ ಹಾಸಲ್ಕರ್, ಸುನೀಲ್ ಲಾಳಗೆ, ವೆಂಕಟೇಶ ಲಾಳಗೆ, ನಾಗೇಶ್ ಲಾಳಗೆ, ಪುಟ್ಟು ಲಾಳಗೆ ಕೃಷ್ಣಾ ಬೊಂಗಾಳೆ, ಪ್ರವೀಣ್ ಮುಳೆ, ಆನಂದ ರೇಣಕೆ, ವಿವೇಕ್ ಕಟಾವಕರ, ಅಶೋಕ ಬೋಂಗಾಳೆ, ಪ್ರವೀಣ್ ಸದರೆ, ಸಂತೋಷ ಸದರೆ, ಸಂತೋಷ ಬೊಂಗಾಳೆ ಇದ್ದರು.