‘ಸಾಕುತಂದೆ ರೂಮಿ’ ನಾಟಕ ಕೃತಿಗೆ ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿ

| Published : Feb 15 2025, 12:31 AM IST

‘ಸಾಕುತಂದೆ ರೂಮಿ’ ನಾಟಕ ಕೃತಿಗೆ ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಕನ್ನಡ ನಾಟಕ ಕೃತಿಗೆ ನೀಡಲಾಗುವ ದ್ವಿತೀಯ ವರ್ಷದ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 15 ಸಾವಿರ ರು. ನಗದು ಬಹುಮಾನವನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 27 ‘ವಿಶ್ವರಂಗಭೂಮಿ ದಿನಾಚರಣೆ’ಯಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಆದರ್ಶ ಅಧ್ಯಾಪಕ, ಕವಿ, ಲೇಖಕ, ತಾಳಮದ್ದಳೆ ಅರ್ಥಧಾರಿ ದಿ.ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿಯು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನೀಡುವ ಪುಸ್ತಕ ಪ್ರಶಸ್ತಿಗೆ ಬೆಂಗಳೂರಿನ ಉಪನ್ಯಾಸಕ ಎನ್. ಸಿ. ಮಹೇಶ್ ಅವರ ‘ಸಾಕುತಂದೆ ರೂಮಿ’ ನಾಟಕ ಕೃತಿಯು ಆಯ್ಕೆಯಾಗಿದೆ. ಮೂವರು ತೀರ್ಪುಗಾರರ ಸಮಿತಿಯ ಸಲಹೆಯಂತೆ ಈ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಭೂಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಕನ್ನಡ ನಾಟಕ ಕೃತಿಗೆ ನೀಡಲಾಗುವ ದ್ವಿತೀಯ ವರ್ಷದ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 15 ಸಾವಿರ ರು. ನಗದು ಬಹುಮಾನವನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 27 ‘ವಿಶ್ವರಂಗಭೂಮಿ ದಿನಾಚರಣೆ’ಯಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ.ಕಳೆದ ವರ್ಷ ಈ ಪ್ರಶಸ್ತಿಯು ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿಯಾದ ಮೌನೇಶ ಬಡಿಗೇರರ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಪುಸ್ತಕಕ್ಕೆ ಲಭಿಸಿತ್ತು.

ಪ್ರಶಸ್ತಿಗೆ ಕೃತಿಗಳ ಆಹ್ವಾನ

ರಂಗಭೂಮಿಯು ನಿರಂತರವಾಗಿ ನಡೆಸಲಿರುವ ಈ ಸ್ಪರ್ಧೆಯ ಮುಂದಿನ ವರ್ಷದ ಪುರಸ್ಕಾರಕ್ಕೆ 2023 ಮತ್ತು 2024 ಈ ಎರಡು ವರ್ಷಗಳಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸ್ವತಂತ್ರ ಸಾಹಿತ್ಯ ಕೃತಿಯನ್ನು ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.