ಸಾರಾಂಶ
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳೆಲ್ಲರೂ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಬೇಕು ಎಂದು ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳೆಲ್ಲರೂ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಬೇಕು ಎಂದು ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, 1956ರ ಅಕ್ಟೋಬರ್ನಲ್ಲಿ ಡಾ.ಅಂಬೇಡ್ಕರ್ ಅವರು ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಆದ್ದರಿಂದ ಅವರ ಅನುಯಾಯಿಗಳು ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ಅವರು ತೋರಿದ ಸನ್ಮಾರ್ಗದಲ್ಲಿ ನಾವಿಂದು ಸಾಗಬೇಕಿದೆ. ದಲಿತರು ಸಾಮಾಜಿಕ ಸಮಾನತೆಗಾಗಿ ಮತ್ತು ಶೋಷಿತ ಸಮುದಾಯಗಳೆಲ್ಲವೂ ಧರ್ಮದ ಅಸ್ಮಿತೆಯನ್ನು ಪಡೆಯಲು ಅತ್ಯಂತ ವೈಜ್ಞಾನಿಕವಾದ ಬೌದ್ಧ ಧರ್ಮವನ್ನು ಸಮೀಕ್ಷೆಯ ವೇಳೆಗೆ ನಮೂದಿಸಬೇಕು ಎಂದು ಹೇಳಿದರು.ಅಲ್ಲದೇ ಜಾತಿ ಕಾಲಂನಲ್ಲಿ ಬೌದ್ಧ ಎಂದು ಅಥವಾ ತಮ್ಮ ತಮ್ಮ ಜಾತಿಯನ್ನು ಇಚ್ಛಾನುಸಾರ ನಮೂದಿಸಿ, ವರ್ಣಾಶ್ರಮ ಪದ್ಧತಿಗೆ ತಿಲಾಂಜಲಿ ನೀಡಬೇಕು ಎಂದರು.ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸುವುದರಿಂದ ದಲಿತರು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿ, ಅವರಿಗಿರುವ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗುವುದಿಲ್ಲವೇ ಎಂಬ ಪ್ರಶ್ನೆಗೆ, ನಾವಿಗಲೂ ವರ್ಣಾಶ್ರಮ ಪದ್ದತಿಯಿಂದ ನೋವು ಅನುಭವಿಸುತಿದ್ದೇವೆ. ಆದ್ದರಿಂದ ಬಿಡುಗಡೆಗೆ ಬೌದ್ಧ ಧರ್ಮವೊಂದೇ ದಾರಿ ಎಂದರು.ಸುದ್ದಿಗೋಷ್ಠಿಯಲ್ಲಿ ಬೌದ್ಧ ಮಹಾಸಭಾದ ಅಧ್ಯಕ್ಷ ಶಂಭು ಸುವರ್ಣ, ಸ.ಸೈ.ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ಲೇಷ್ ಬ್ರಹ್ಮಾವರ ಮತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ ಉಪಸ್ಥಿತರಿದ್ದರು.