ಕನ್ನಡಪ್ರಭ ವಾರ್ತೆ ಬೇಲೂರು

ಪುರಸಭೆಯಲ್ಲಿ ಬಿ‌. ಆರ್‌. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯನ್ನು ಮಾಡಲಾಯಿತು.ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಮಾತನಾಡಿ ಶಿಕ್ಷಣ, ಸಮಾನತೆ ಮತ್ತು ನ್ಯಾಯಕ್ಕಾಗಿ ಜೀವನವಿಡೀ ಹೋರಾಡಿದ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಾಗಿದ್ದಾರೆ. ದಲಿತರ ಹಕ್ಕುಗಳಿಗಾಗಿ ಶ್ರಮಿಸಿದ ಮಹಾನ್ ನಾಯಕರು, ಕೇವಲ 2 ವರ್ಷ 11 ತಿಂಗಳು 18 ದಿನಗಳಲ್ಲಿ ಸಂವಿಧಾನ ರಚಿಸಿ ದೇಶಕ್ಕೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದ್ದಾರೆ. ಇಂದಿನ ಯುವಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಅರಿತುಕೊಳ್ಳಬೇಕು. ಮಹಿಳೆಯರ ಸಬಲೀಕರಣಕ್ಕೂ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಹೇಳಿದರು. ಒಂದು ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹುಟ್ಟುತ್ತಾರೆ, ಆದರೆ ಒಂದು ಶಾಲೆ ಅಥವಾ ಗ್ರಂಥಾಲಯ ಕಟ್ಟಿದರೆ ವಿದ್ವಾಂಸರು ಹುಟ್ಟುತ್ತಾರೆ ಎಂಬ ಅಂಬೇಡ್ಕರ್ ಅವರ ಸಂದೇಶವನ್ನು ಉಲ್ಲೇಖಿಸಿ, ಎಲ್ಲರೂ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು. ನಂತರ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲರಿಗೂ ಸಮಪಾಲು, ಸಮಬಾಳು ದೊರಕಬೇಕು ಎಂಬ ಉದ್ದೇಶದಿಂದ ಹೋರಾಟ ನಡೆಸಿದ ಮಹಾನ್ ನಾಯಕರು. ಸಂವಿಧಾನವನ್ನು ರಚಿಸಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಒದಗಿಸಿದರು ಎಂದು ಹೇಳಿದರು.ಸದಸ್ಯ ಬಿ. ಗಿರೀಶ್ ಮಾತನಾಡಿ, ಇದು ಸಂಭ್ರಮದ ಆಚರಣೆಯ ದಿನ. 1891ರ ಏಪ್ರಿಲ್ 14ರಂದು ಜನಿಸಿದ ಅಂಬೇಡ್ಕರ್‌ ಅವರು ಭಾರತದ ಭವ್ಯ ಇತಿಹಾಸವನ್ನು ರೂಪಿಸಿದ ಮಹಾನ್ ವ್ಯಕ್ತಿ. ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿದ ಪುಣ್ಯದ ದಿನವನ್ನು ನಾವು ಗೌರವದಿಂದ ಆಚರಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸದಸ್ಯ ಜಮಾಲುದ್ದೀನ್ ,ಅಕ್ರಂಪಾಷ, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾಂವಿ, ಆರೋಗ್ಯಾಧಿಕಾರಿ ಲೋಹಿತ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.