ಸಾರಾಂಶ
- ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ: ಮಹಾಂತೇಶ್ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹರಿಹರ
ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪ್ರಣಾಮಗಳು ಎನ್ನುತ್ತಾ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳಿಗೆ ಉತ್ತೇಜನ ನೀಡುವ ಹೊಸ ಢಾಂಬಿಕತೆ ದೇಶದಲ್ಲಿ ಬೆಳೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಏ.28ರಂದು ನಡೆಯುವ ಡಾ.ಅಂಬೇಡ್ಕರ್ 134ನೇ ಜಯಂತಿ ಹಾಗೂ ಸನ್ಮಾನ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ನಿಜವಾದ ಸಿದ್ಧಾಂತ ಪರಿಚಯಿಸಲು ಸಂಘಟನೆಯಿಂದ ಅವರ 134ನೇ ಜಯಂತಿ ನಿಮಿತ್ತ 134 ಸಾಧಕರಿಗೆ ಸನ್ಮಾನ ಮಾಡುವ ವಿಶಿಷ್ಟ ಸಮಾರಂಭ ಏ.28ರಂದು ಬೆಳಗ್ಗೆ 10 ಗಂಟೆಗೆ ನಗರದ ಬಸ್ ನಿಲ್ದಾಣ ಸಮೀಪದ ಗುರುಭವನದಲ್ಲಿ ಆಯೋಜಿಸಿದೆ. ಸಾರ್ವಜನಿಕರು ಭಾಗವಹಿಸಬೇಕು ಎಂದರು.ಆದಿಜಾಂಬವ ಕೋಡಿಹಳ್ಳಿ ಮಠದ ಷಡಕ್ಷರಮುನಿ ದೇಶೀಕೇಂದ್ರ ಶ್ರೀ ಸಾನ್ನಿಧ್ಯ ವಹಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಶೋತ್ತಮ ಬಿಳಿಮಲೆ ಉದ್ಘಾಟಿಸುವರು. ಕದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸುವರು. ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಪ್ರಶಸ್ತಿ ಪ್ರಧಾನ ಮಾಡುವರು. ಇನ್ಸೈಟ್ ಐಎಎಸ್ ಸಂಸ್ಥೆ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಕದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ, ಅಕ್ಷಯ ಆಸ್ಪತ್ರೆ ಮುಖ್ಯಸ್ಥ ಡಾ. ವಿ.ಟಿ. ನಾಗರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಪ್ರಸ್ತಾವನೆ ಮಾಡುವರು ಎಂದರು.
ಈ ಸಂದರ್ಭದಲ್ಲಿ ಹರಳಹಳ್ಳಿ ಗ್ರಾಪಂ ಸದಸ್ಯ ಎಚ್.ಎಂ.ಹನುಮಂತಪ್ಪ, ಭಾನುವಳ್ಳಿ ಗ್ರಾಪಂ ಸದಸ್ಯ ಮಂಜಪ್ಪ ಎಂ., ಕಡ್ಲೆಗೊಂದಿ ತಿಮ್ಮಣ್ಣ, ಚೌಡಪ್ಪ ಸಿ.ಭಾನುವಳ್ಳಿ, ಮಂಜಪ್ಪ ಗುಳದಹಳ್ಳಿ, ಹನುಮಂತ ಎಚ್.ಯಲವಟ್ಟಿ, ಬೆಣ್ಣೆ ರಾಜಪ್ಪ, ಆಂಜನೇಯ, ಕೀರ್ತಿ ಟಿ., ಎಳೆಹೊಳೆ ಹನುಮಂತಪ್ಪ, ಜಿಗಳಿ ಚೌಡಪ್ಪ, ಸ್ವಾಮಿ ಲಿಂಗಪ್ಪ, ಪರಶುರಾಮ, ರಾಜಪ್ಪ, ಮಹಾಂತೇಶ, ರಾಜು, ಮಹೇಶ್, ಸೋಮಶೇಖರ್, ಯುವರಾಜ ಹೊಸಪಾಳ್ಯ ಹಾಗೂ ಇತರರಿದ್ದರು.- - -
(ಬಾಕ್ಸ್) * ಬದುಕನ್ನೇ ಗಂಧದಂತೆ ತೇಯ್ದ ಅಂಬೇಡ್ಕರ್ಭಾರತದ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸದೇ, ಅಂಬೇಡ್ಕರ್ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಅಧಿಕಾರಸ್ಥರು ಸಂವಿಧಾನದ ಪ್ರತಿ ಸುಟ್ಟಾಗಲು ಖಂಡಿಸುವುದಿಲ್ಲ. ನಾವು ಬಂದಿರುವುದೇ ಸಂವಿಧಾನ ಬದಲಿಸಲಿಕ್ಕೆ ಎಂದಾಗಲು ಮಾತನಾಡುವುದಿಲ್ಲ. ಕೊನೆಗೆ ನಾವು ಭಾರತಕ್ಕೆ ಬೇರೊಂದು ಸಂವಿಧಾನ ರಚಿಸಿದ್ದೇವೆ ಎಂದಾಗಲೂ ಮೌನವಾಗಿರುತ್ತಾರೆ ಎಂದು ಪಿ.ಜೆ.ಮಹಾಂತೇಶ ಬೇಸರ ವ್ಯಕ್ತಪಡಿಸಿದರು.ಅಂಬೇಡ್ಕರ್ ಪ್ರಬಲ ಸಂವಿಧಾನ ರಚಿಸಿ, ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇಂತಹ ಸರ್ವಶ್ರೇಷ್ಠ ರಾಷ್ಟ್ರ ನಾಯಕನನ್ನು ಭಾರತೀಯರು ಕೇವಲ ದಲಿತ ನಾಯಕ ಎಂದು ಅವಮಾನಿಸಿದರು. ಈ ಮನಸ್ಥಿತಿ ವಿರೋಧಿಸಬೇಕಿದ್ದ ದಲಿತರು ಸಹ ಅದನ್ನೇ ಒಪ್ಪಿಕೊಂಡು ಹೊತ್ತು ತಿರುಗಾಡುತ್ತಿದ್ದಾರೆ. ಅಂಬೇಡ್ಕರ್ ದಲಿತರಿಗಾಗಿ ಎಷ್ಟು ದುಡಿದಿದ್ದಾರೋ, ಅದರ ನೂರುಪಟ್ಟು ದೇಶ, ಪ್ರತಿಯೊಬ್ಬ ಪ್ರಜೆಗಾಗಿ ಬದುಕನ್ನೇ ಗಂಧದಂತೆ ತೇಯ್ದಿದ್ದಾರೆ ಎಂದರು.
- - --22ಎಚ್ಆರ್ಆರ್ 01:
ಹರಿಹರ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಡಾ.ಅಂಬೇಡ್ಕರ್ 134ನೇ ಜಯಂತಿ, ಸನ್ಮಾನ ಸಮಾರಂಭದ ಕರಪತ್ರ ಬಿಡುಗಡೆಗೊಳಿಸಿದರು.