ಆತ್ಯಾಧುನಿಕ ವಿನ್ಯಾಸಗಳೊಂದಿಗೆ ಸುಸಜ್ಜಿತ ಹವಾನಿಯಂತ್ರಿತ ಸೌಲಭ್ಯಗಳನ್ನು ಒಳಗೊಂಡು ನಿರ್ಮಾಣಗೊಂಡಿರುವ ಒಂದು ಸುಂದರ ಭವನವೆಂದರೆ ತಪ್ಪಾಗಲಾರದು.

ಡಾ.ಬಿ.ಆರ್. ಅಂಬೇಡ್ಕರ್ ಭವನ, ಅನುಭವ ಕೇಂದ್ರದ ಉದ್ಘಾಟಿಸಿ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ಅಭಿಮತ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವಿಶ್ವ ಆರ್ಥಿಕತೆಯಲ್ಲಿ ಇಂದು ಭಾರತ ಆರ್ಥಿಕ ಸ್ವಾವಲಂಬಿಯಾಗಿ ಮತ್ತು ನಾಲ್ಕನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ರೂಪುಗೊಳ್ಳಲು ಅರ್ಥಶಾಸ್ತ್ರಜ್ಞ ಶ್ರೇಷ್ಠ ಆರ್ಥಿಕ ತಜ್ಞ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ ದೂರದೃಷ್ಟಿಯ ಆರ್ಥಿಕ ಚಿಂತನೆಗಳು ಪ್ರಮುಖ ಕಾರಣವಾಗಿದ್ದು, ಅವರು ವಿದೇಶದಲ್ಲಿ ಪಡೆದ ಜ್ಞಾನಾರ್ಜನೆ ಫಲವಾಗಿ ರಚಿಸಿದ ಸಂವಿಧಾನ ಮೂಲಕ ದೇಶದ ದಿಕ್ಕನ್ನೇ ಬದಲಾಯಿತೆಂದು ಉಪಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ನುಡಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರದ ಉದ್ಘಾಟನೆಯಲ್ಲಿ ದೀಪಬೆಳಗಿದ ನಂತರ ಮಾತನಾಡಿ, ಸರಿಸುಮಾರು 21 ಕೋಟಿ ರು. ವೆಚ್ಚದಲ್ಲಿ ಆತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರ ರಾಜ್ಯದ ಬೆಂಗಳೂರು ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇಲ್ಲವೆಂದು ಅಂತಹ ಆತ್ಯಾಧುನಿಕ ವಿನ್ಯಾಸಗಳೊಂದಿಗೆ ಸುಸಜ್ಜಿತ ಹವಾನಿಯಂತ್ರಿತ ಸೌಲಭ್ಯಗಳನ್ನು ಒಳಗೊಂಡು ನಿರ್ಮಾಣಗೊಂಡಿರುವ ಒಂದು ಸುಂದರ ಭವನವೆಂದರೆ ತಪ್ಪಾಗಲಾರದು ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಯಾವುದೇ ನಿರ್ದಿಷ್ಟ ಧರ್ಮ, ಜಾತಿ, ಪ್ರಾಂತ್ಯಕ್ಕೆ ಸೀಮಿತರಲ್ಲ. ಅವರು ಇಡೀ ವಿಶ್ವಕ್ಕೇ ಬೆಳಕು ನೀಡಿದ ಮಹಾನ್ ಮನವತಾವಾದಿ ಸ್ವಾತಂತ್ರ‍್ಯಾ ನಂತರದ 80 ವರ್ಷಗಳಲ್ಲಿ ಭಾರತ, ಆರ್ಥಿಕವಾಗಿ ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದಿದ್ದರೆ, ಅದರ ಹಿಂದಿನ ಮಹಾನ್ ಶಕ್ತಿಯೇ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಎಂದರು.

ಸಮಾಜ ಕಲ್ಯಾಣ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಡಾ. ಸುಧಾಕರ್ ಅವರು ಹಲವು ವರ್ಷಗಳ ಶ್ರಮದಿಂದ ಚಿಂತಾಮಣಿಯಲ್ಲಿ ನಿರ್ಮಿಸಿರುವ ಡಾ. ಅಂಬೇಡ್ಕರ್ ಭವನ, ಬಾಬಾ ಸಾಹೇಬರ ಬಾಲ್ಯದಿಂದ ಹಿಡಿದು ಅವರ ಪರಿನಿರ್ವಾಣದವರೆಗೆ ಸಂಪೂರ್ಣ ಮಾಹಿತಿ ನೀಡುವ ಸುಂದರ ಸುಸಜ್ಜಿತವಾದ ಈ ಅನುಭವ ಕೇಂದ್ರವಾಗಿದೆ. ಈ ಕಲ್ಪನೆಯೇ ಅದ್ಭುತವಾಗಿದೆ ಮುಂದಿನ ಪೀಳಿಗೆಗೆ ಅಂಬೇಡ್ಕರ್ ಅವರ ಜೀವನದರ್ಶನ ಹಾಗೂ ಅವರ ತತ್ವಗಳನ್ನು ಮಾಡಿಸಲು ಈ ಅನುಭವ ಕೇಂದ್ರ ಸಹಕಾರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಚಿಂತಾಮಣಿ ನಗರದಲ್ಲಿ 1.75 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಆಜಾದ್ ಚೌಕ್ ವೃತ್ತ ಹಾಗೂ 7.5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿಪಡಿಸಿದ ಸಾಮರ್ಥ್ಯಸೌಧ, ತಾಲೂಕು ಪಂಚಾಯತ್ ಸಭಾಂಗಣ ಮತ್ತು ಸಭಾಭವನವನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸದ ಎಂ. ಮಲ್ಲೇಶ್ ಬಾಬು, ನರಸೀಪುರದ ಶಾಸಕ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಡಾ. ಎಂ.ಸಿ.ಸುಧಾಕರ್, ವಿಧಾನಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಎ.ಅನಿಲ್‌ಕುಮಾರ್, ಸರ್ಕಾರದ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಜಿ.ಪ್ರಭು, ಜಿಪಂ ಸಿಇಒ ಡಾ. ವೈ.ನವೀನ್ ಭಟ್, ರಾಜ್ಯ ಜಾನಪದ ಅಕಾಡೆಮಿಯ ರಾಜ್ಯಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಗ್ಯಾರಂಟಿ ತಾಲ್ಲೂಕು ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ, ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್. ಶ್ರೀನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್ ಆನಂದ್ ರೆಡ್ಡಿ, ತಹಸೀಲ್ದಾರ್ ಸುದರ್ಶನ್ ಯಾದವ್‌ ಅಧಿಕಾರಿಗಳು ಇದ್ದರು.

ಚಿತ್ರಶೀರ್ಷಿಕೆ: ಚಿಂತಾಮಣಿ ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರದ ಉದ್ಘಾಟನೆಯಲ್ಲಿ ದೀಪಬೆಳಗಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್.