ಅಂಬೇಡ್ಕರ್ ಚಿಂತನೆ ಸಮಾಜಮುಖಿ ಕೆಲಸಕ್ಕೆ ಪ್ರೇರಣೆ: ಹರೀಶ್‌ ಪೂಂಜ

| Published : May 31 2025, 01:01 AM IST

ಅಂಬೇಡ್ಕರ್ ಚಿಂತನೆ ಸಮಾಜಮುಖಿ ಕೆಲಸಕ್ಕೆ ಪ್ರೇರಣೆ: ಹರೀಶ್‌ ಪೂಂಜ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಆಶ್ರಯದಲ್ಲಿ ಬುದ್ಧ, ಬಸವ, ಪುಲೆ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸತ್ಯ ಶೋಧಕ ವೇದಿಕೆ ಮೂಲಕ ಸಮಾಜ ಸುಧಾರಕರ ತತ್ವ ಅನುಷ್ಠಾನಗೊಳ್ಳುತ್ತಿದೆ. ಅಂಬೇಡ್ಕರ್ ಚಿಂತನೆಯು ನಮ್ಮೆಲ್ಲರ ಸಾಮಾಜಿಕ ಜೀವನಕ್ಕೆ ಸಮಾಜಮುಖಿ ಕೆಲಸಗಳಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಆಶ್ರಯದಲ್ಲಿ ನಡೆದ ಬುದ್ಧ, ಬಸವ, ಪುಲೆ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತೀ ವರ್ಷ 100 ವಿದ್ಯಾರ್ಥಿಗಳ ಪುಸ್ತಕದ ಖರ್ಚನ್ನು ನಾನು ಭರಿಸುತ್ತೇನೆ. ಶಿಕ್ಷಣಕ್ಕೆ ಒತ್ತು ನೀಡಲೇಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಶಿಕ್ಷಣ ಎನ್ನುವುದು ವ್ಯಕ್ತಿಯ ಬದುಕನ್ನು ರೂಪಿಸುತ್ತದೆ ಮತ್ತು ಸಶಕ್ತರನ್ನಾಗಿ ಮಾಡುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, ಸತ್ಯಶೋಧಕ ಸಮಾಜ ಸಂಘಟನೆಯ ಸ್ಥಾಪಕರು ಮಹಾತ್ಮ ಜ್ಯೋತಿಭಾಯಿ ಫುಲೆಯವರು. ಒಂದು ಸಮುದಾಯ, ಶೋಷಿತ ಸಮುದಾಯವನ್ನು ಶಿಕ್ಷಣದಿಂದ ವಂಚಿತರಾಗಿಸುತ್ತಿದ್ದ ಕಾಲಘಟ್ಟದಲ್ಲಿ ಸತ್ಯ ಶೋ‌ಧಕ ಸಮಾಜ ಸಂಘಟನೆಯ ಮೂಲಕ ದಮನಿತ, ಶೂದ್ರ ಸಮುದಾಯಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಗಳನ್ನು ತೆರೆದರು. ನಮಗೆ ನಾವೇ ಪ್ರೋತ್ಸಾಹ ಕೊಡಬೇಕು, ಬೇರೆ ಯಾರೂ ಬರುವುದಿಲ್ಲ. ಅಂಬೇಡ್ಕರ್ ಅವರಿಗೆ ಯಾರೂ ಪ್ರೋತ್ಸಾಹ ಕೊಡಲಿಲ್ಲ, ಅವರೇ ನಮಗೆಲ್ಲಾ ಸ್ಫೂರ್ತಿ ಎಂದು ಹೇಳಿದರು.

ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ ಅಧ್ಯಕ್ಷತೆವಹಿಸಿದ್ದರು. ಬಿಜೆಪಿ ಬೆಳ್ತಂಗಡಿ ಮಂಡಲ ಪ.ಜಾ. ಮೋರ್ಚಾ ಅಧ್ಯಕ್ಷ ಈಶ್ವರ ಬೈರ ಶುಭ ಹಾರೈಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ರೈಡಿಂಗ್ ಜೋಡಿಗಳು ಯೂಟ್ಯೂಬ್ ಚಾನೆಲ್‌ನ ಶ್ಯಾಮ್ ಪ್ರಸಾದ್ ಕಾಮತ್ ದಂಪತಿ, ಭೂನ್ಯಾಯ ಮಂಡಳಿ ಸದಸ್ಯ ಬಾಬು ಎರ್ಮೆತ್ತೋಡಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ 5 ರಿಂದ 10ನೇ ತರಗತಿ ವರೆಗಿನ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು.

‌‌ಕಾರ್ಯದರ್ಶಿ ಗಿರೀಶ್ ಪಣಕಜೆ, ಕೋಶಾಧಿಕಾರಿ ಯೋಗೀಶ್ ಪಣಕಜೆ, ಸದಸ್ಯರಾದ ಹರೀಶ್ ಕುಕ್ಕಳ, ಸತೀಶ್ ಉಜಿರೆ, ಶೀನ ಕುಳ್ಳಂಜ, ಹರೀಶ್ ಪಣಕಜೆ, ಸತೀಶ್ ಮಡಂತ್ಯಾರ್, ಚರಣ್ ಕುಕ್ಕೇಡಿ, ನಯನಾ ಪುರಿಯ, ವಿಶ್ವನಾಥ್ ಕಳೆಂಜ, ವಿಠಲ್ ಪುರಿಯ, ಸುನೀತಾ ಮಡಂತ್ಯಾರ್ ಉಪಸ್ಥಿತರಿದ್ದರು.

ಲಲಿತಾ ಕಳೆಂಜ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾ ಕಳೆಂಜ ಸ್ವಾಗತಿಸಿದರು. ಸುಶ್ಮಿತಾ ಮಾಲಾಡಿ ವಂದಿಸಿದರು.

ಸುಶ್ಮಿತಾ, ಸುರಕ್ಷಿತಾ ನಾರಾವಿ ನಾಡಗೀತೆ ಹಾಡಿದರು.