ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಗಂಗಾಧರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಹುತ್ವವನ್ನು ಒಳಗೊಂಡ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಅವುಗಳ ಬಲದಿಂದ ಆಡಳಿತ ನಡೆಸಲು ಸಾಧ್ಯವಾಗುತ್ತಿದೆ ಎಂದು ಪ್ರಾಂಶುಪಾಲ ಪ್ರೊ ತಾರಿಣಿ ಶುಭದಾಯಿನಿ ಹೇಳಿದರು

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರು ಮತ್ತು ಮಹಿಳೆಯರು ಸೇರಿ ಸಮಾಜದಲ್ಲಿ ಎರಡು ರೀತಿಯಲ್ಲಿ ಶೋಷಣೆ ನಡೆಯುತ್ತಿದೆ. ಅಲ್ಲದೆ ಹಿಂದುಳಿದ ವರ್ಗಗಳು ಬಹು ಸಂಖ್ಯೆಯಲ್ಲಿದ್ದರೂ ಅವರು ಅಧಿಕಾರದಿಂದ ವಂಚಿತರಾಗಬೇಕಾಗಿದೆ. ಮುಟ್ಟಿಸಿಕೊಂಡವರು ಎಂಬ ಕಥೆಯಲ್ಲಿ ಲೇಖಕ ಪಿ.ಲಂಕೇಶ್ ಅವರು ಜಾತಿ ವ್ಯವಸ್ಥೆಯನ್ನು ಒಂದು ರೂಪಕವಾಗಿ ಬಳಸಿದ್ದಾರೆ. ಹೊರಗಡೆ ಏನೆಲ್ಲ ಇದ್ದರೂ ಜಾತಿ ತಕರಾರುಗಳು ಮನೆಯಲ್ಲಿ ಪ್ರಾರಂಭವಾಗುತ್ತವೆ. ಹಾಗಾಗಿ ಸಮಾಜಕ್ಕೆ ಅಂಟಿಕೊಂಡಿರುವ ಜಾತಿ, ಭ್ರಷ್ಟಾಚಾರ ಶ್ರೇಷ್ಠತೆಯ ವ್ಯಸನದ ರೋಗನಿವಾರಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು

ರಾಜ್ಯಶಾಸ್ತ್ರ ಚಿಂತಕ ಗಂಗಾಧರ ಮಾತನಾಡಿ, ಸಾಮಾಜಿಕ ಬದುಕಿನಲ್ಲಿ ತಾನು ಅನುಭವಿಸಿದ ಜಾತಿ ಮತ್ತು ಅಸ್ಪೃಶ್ಯತಾ ಆಚರಣೆ, ಮಹಾಡ್ ಕೆರೆ ನೀರು, ಗಾಡಿಯಲ್ಲಿ ಪಯಣ, ಕ್ಷೌರಿಕ ಸೇವೆ ನಿರಾಕರಣೆ, ಬರೋಡ ಮುಂತಾದ ಮುಖ್ಯ ಘಟನೆಗಳು ಅಂಬೇಡ್ಕರ್ ಅವರ ಮೇಲೆ ಪರಿಣಾಮ ಬೀರಿತ್ತು. ಅಂಬೇಡ್ಕರ್ ಅವರ ಆತ್ಮ ಕಥನ ವೀಸಾಗಾಗಿ ಕಾಯುವಿಕೆ ಎಂಬ ಕೃತಿ ಮತ್ತು ಬುದ್ಧನ ಚಿಂತನೆಗಳು ಸಂವಿಧಾನ ರಚನೆಗೆ ಪ್ರೇರಣೆ ನೀಡಿವೆ ಎಂದರು.

ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಪ್ರಸಾದ್, ಕನ್ನಡ ಸಹ ಪ್ರಾಧ್ಯಾಪಕ ಪ್ರೊ.ಚಿತ್ತಯ್ಯ ಮಾತನಾಡಿಸಿದರು. ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ.ಎಸ್.ಬಿ.ಶಿವಪ್ರಸಾದ್, ಐಕ್ಯೂಎಸಿ ಸಮಿತಿ ಸಂಚಾಲಕಿ ಪ್ರೊ.ಕೆ.ಲೀಲಾವತಿ, ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಹನುಮಂತಪ್ಪ, ಮುಖ್ಯ ಅಧೀಕ್ಷಕ ಹರೀಶ್ ಬಾಬುರೆಡ್ಡಿ, ವಾಣಿಜ್ಯ ಶಾಸ್ತ್ರ ವಿಭಾಗದ ಪ್ರೊ. ಸೌಮ್ಯ ಇದ್ದರು.