ಬುದ್ಧ ಬಸವಣ್ಣನವರು ಪ್ರತಿಪಾದಿಸಿದ ಸಮಾಜ ಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಜೊತೆ ಜೊತೆಯಲ್ಲೇ ಅಂಬೇಡ್ಕರ್ ಚಿಂತನೆಗಳೂ ಸಮಕಾಲೀನ ಸಮಾಜಕ್ಕೆ ಜರೂರಿದೆ ಎಂದು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜು ಅಭಿಪ್ರಾಯಿಸಿದರು.
ಕನ್ನಡಪ್ರಭವಾರ್ತೆ ತುರುವೇಕೆರೆ
ಬುದ್ಧ ಬಸವಣ್ಣನವರು ಪ್ರತಿಪಾದಿಸಿದ ಸಮಾಜ ಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಜೊತೆ ಜೊತೆಯಲ್ಲೇ ಅಂಬೇಡ್ಕರ್ ಚಿಂತನೆಗಳೂ ಸಮಕಾಲೀನ ಸಮಾಜಕ್ಕೆ ಜರೂರಿದೆ ಎಂದು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜು ಅಭಿಪ್ರಾಯಿಸಿದರು.ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ ರವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ಸಮಕಾಲೀನ ಜಗತ್ತಿನಲ್ಲಿ ಶಿಕ್ಷಣಕ್ಕೆ ಇರುವ ಪ್ರಾಮುಖ್ಯತೆ ಮತ್ಯಾವ ಅಸ್ತ್ರಗಳಿಗೂ ಇಲ್ಲ. ಸಂವಿಧಾನವನ್ನು ಸಂಪೂರ್ಣವಾಗಿ ಓದಿದರಷ್ಟೇ ಅಂಬೇಡ್ಕರ್ ಚಿಂತನೆಗಳು ಏನು ಎಂಬುದು ತಿಳಿಯಲಿದೆ. ಸಂವಿಧಾನವನ್ನು ಓದುವ ಕೆಲಸ ಎಲ್ಲರಿಂದಲೂ ಆಗಬೇಕು. ಜಗತ್ತನಲ್ಲೇ ಬಲಿಷ್ಟ ಸಂವಿಧಾನ ಕೊಟ್ಟ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಲ್ಲಬೇಕಿದೆ. ಆದರೆ ಜಾತಿ ಕಾರಣಕ್ಕೆ ಅವರನ್ನು ನಗಣ್ಯ ಮಾಡಲಾಯಿತೇ? ಎಂಬ ಅನುಮಾನ ಮೂಡುತ್ತದೆ. ಒಂದು ವೇಳೆ ಸ್ಪೃಶ್ಯರಾಗಿದ್ದರೆ ಅವರ ಸ್ಥಾನ, ಮಾನಗಳು ಎಲ್ಲಿ ಇರುತ್ತಿದ್ದವು ಎಂಬುದು ನಿರೀಕ್ಷೆಗೂ ಮೀರಿದುದಾಗಿತ್ತು ಎಂದರು. ಅಂಬೇಡ್ಕರ್, ದಮನಿತರ, ಶೋಷಿತರ, ಮಹಿಳೆಯರ ಪರ ಧ್ವನಿ ಎತ್ತಿದವರು. ದೇಶದ ಆರ್ಥಿಕ ಭದ್ರ ಬುನಾದಿಗಾಗಿ ಬ್ಯಾಂಕ್ ಗಳ ಸ್ಥಾಪನೆ ಅಗತ್ಯ ಎಂದರು. ಆದರೆ ದೇಶದ ಎಷ್ಟು ಬ್ಯಾಂಕ್ ಗಳಲ್ಲಿ ಇಂದು ಅಂಬೇಡ್ಕರ್ ರವರ ಭಾವಚಿತ್ರವಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಸಂವಿಧಾನ ಮತ್ತು ಕಾನೂನುಗಳು ಎಲ್ಲ ಜಾತಿಗೂ ಅನ್ವಯಿಸುವಾಗ ಈ ಜಾತಿ ವ್ಯವಸ್ಥೆಗೆ ಏಕೆ ನಾವೆಲ್ಲ ಪ್ರಧಾನ್ಯತೆ ಕೊಡಬೇಕು. ಅಂದಿನ ಕಡು ಬಡತನದ ಸ್ಥಿತಿಯಲ್ಲೂ 14 ಮಕ್ಕಳ ಸಾಕಿ ಸಲಹಿ ಇಡೀ ಜಗತ್ತೇ ಕೊಂಡಾಡುವ ಡಾ.ಬಿ.ಆರ್.ಅಂಬೇಡ್ಕರ್ ರಂತಹ ಪುಣ್ಯಾತ್ಮನನ್ನು ಭೂಮಿಗೆ ಕೊಟ್ಟ ಮಹಾತಾಯಿಗೆ ನಾವೆಲ್ಲ ನಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ತಹಶೀಸೀಲ್ದಾರ್ ಎನ್.ಎ. ಕುಂಞ ಅಹಮದ್, ಇ.ಒ.ಅನಂತರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬಿಇಒ ಸೋಮಶೇಖರ್, ಸರ್ಕಾರಿ ನೌಕರರ ಸಂಘದ ಪಾಪಣ್ಣ, ಗುತ್ತಿಗೆದಾರ ಕಲ್ಲಬೋರನಹಳ್ಳಿ ಜಯರಾಮ್, ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್, ವಾಲ್ಮೀಕಿ ಸಮಾಜದ ಅಧ್ಯಕ್ಷ ವಸಂತ್ ಕುಮಾರ್, ಮುಖಂಡರಾದ ವಿಜಯ ಕುಮಾರ್, ದಲಿತ ಮುಖಂಡರಾದ ನೆಮ್ಮದಿ ಗ್ರಾಮ ಮೂರ್ತಿ, ಬಾಣಸಂದ್ರ ಕೃಷ್ಣ ಮಾದಿಗ, ರಂಗಧಾಮಯ್ಯ, ಕುಣಿಕೇನಹಳ್ಳಿ ಜಗದೀಶ್, ಕೊಡಗೀಹಳ್ಳಿ ಚಂದ್ರಯ್ಯ, ಡೊಂಕಿಹಳ್ಳಿ ರಾಮಣ್ಣ ಸೇರಿದಂತೆ ದಸಂಸ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಗಣಪತಿ ಪೆಂಡಾಲ್ ವರೆಗೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇಟ್ಟು ವಿವಿಧ ಜಾನಪದ ಕಲಾಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.