ಜ್ಞಾನದ ಮೂಲಕ ಜಗತ್ತನ್ನು ಬೆಳಗಿದ ಧ್ರುವತಾರೆ ಅಂಬೇಡ್ಕರ್: ಡಾ. ನಂಜುಂಡಸ್ವಾಮಿ

| Published : Jun 13 2025, 02:35 AM IST

ಜ್ಞಾನದ ಮೂಲಕ ಜಗತ್ತನ್ನು ಬೆಳಗಿದ ಧ್ರುವತಾರೆ ಅಂಬೇಡ್ಕರ್: ಡಾ. ನಂಜುಂಡಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಶೋಷಿತರ, ಹೆಣ್ಣು ಮಕ್ಕಳ, ಕಾರ್ಮಿಕರ, ರಾಜಕೀಯ, ಸಾಮಾಜಿಕ ಹಾಗೂ ದಲಿತರ ನಾಯಕರು. ಜವಾಹರ್ ಲಾಲ್ ನೆಹರು ಒಮ್ಮೆ ವಿದೇಶಿ ಗಣ್ಯರಿಗೆ ಪರಿಚಯಿಸುವಾಗ ಅಂಬೇಡ್ಕರ್ ನನ್ನ ಮಂತ್ರಿಮಂಡಲದ ವಜ್ರವಾಗಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಜ್ಞಾನದ ಮೂಲಕ ಜಗತ್ತನ್ನು ಬೆಳಗಿದ ಧ್ರುವತಾರೆ ಡಾ.ಬಿ.ಆರ್. ಅಂಬೇಡ್ಕರ್ ಎಂದು ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ನಂಜುಂಡಸ್ವಾಮಿ ಹರದನಹಳ್ಳಿ ತಿಳಿಸಿದರು.

ನಗರದ ಮಾನಸ ಗಂಗೋತ್ರಿಯ ಭೂಗೋಳಶಾಸ್ತ್ರ ವಿಭಾಗದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಭಾರತದಲ್ಲಿ ಹುಟ್ಟಿ ಜಗತ್ತನ್ನು ಬೆಳಗುತ್ತಿರುವ ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಸ್ವಾಮಿ ವಿವೇಕಾನಂದರ ಸಾಲಿನಲ್ಲಿ ಎಲ್ಲಾ ಸವಾಲುಗಳನ್ನು ಜ್ಞಾನದ ಮೂಲಕ ಎದುರಿಸಿ ಭಾರತದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಜ್ಞಾನದ ಜ್ಯೋತಿ ಡಾ.ಬಿ.ಆರ್. ಅಂಬೇಡ್ಕರ್ ಎಂದರು.

ಸ್ವಾತಂತ್ರ ಬಂದ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಮತ್ತು ಅಂಬೇಡ್ಕರ್ ಸಿಕ್ಕಿದ್ದು ಭಾರತದ ಪುಣ್ಯ. ಆದರೆ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಜ್ಞಾನದ ಶಿಖರ ನಮಗೆ ಸಿಗಲಿಲ್ಲ. ಇದರಿಂದ ಪಾಕಿಸ್ತಾನ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ರಾಜಕೀಯ ನಾಯಕರು ಅಂದು ಮಾತನಾಡುತ್ತಾರೆ. ಇಂದು ಅದು ಸತ್ಯವಾಗಿದೆ ಎಂದು ಅವರು ಹೇಳಿದರು.

ಅಂಬೇಡ್ಕರ್ ಶೋಷಿತರ, ಹೆಣ್ಣು ಮಕ್ಕಳ, ಕಾರ್ಮಿಕರ, ರಾಜಕೀಯ, ಸಾಮಾಜಿಕ ಹಾಗೂ ದಲಿತರ ನಾಯಕರು. ಜವಾಹರ್ ಲಾಲ್ ನೆಹರು ಒಮ್ಮೆ ವಿದೇಶಿ ಗಣ್ಯರಿಗೆ ಪರಿಚಯಿಸುವಾಗ ಅಂಬೇಡ್ಕರ್ ನನ್ನ ಮಂತ್ರಿಮಂಡಲದ ವಜ್ರವಾಗಿದ್ದಾರೆ ಎಂದು ಹೇಳಿದರು. ಬದುಕಿದ ಹೆಚ್ಚಿನ ಆಯುಷನ್ನು ಓದು, ಅಧ್ಯಯನಕೋಸ್ಕರ ಮೀಸಲಿಟ್ಟ ಏಕೈಕ ವ್ಯಕ್ತಿ ಅಂಬೇಡ್ಕರ್. ಆ ಕಾರಣಕ್ಕೆ ಅವರು ಜಗತ್ತಿನ ಜ್ಞಾನದ ಸಂಕೇತ ಮತ್ತು ಭಾರತ ದೇಶದ ಕಲಿಯುಗದ ಬುದ್ಧ ಎಂದರು.

ಪ್ರೊ. ಅರುಣ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಚಂದ್ರಶೇಖರ್, ಸರ್ಕಾರಿ ಮಹಿಳಾ ಕಾಲೇಜಿನ ಡಾ.ಎಚ್.ಆರ್. ವಿಶ್ವನಾಥ್, ಉಪನ್ಯಾಸಕರಾದ ಸೌಮಶ್ರೀ, ಪಿ.ಜಿ. ವಿಶ್ವನಾಥ್ ಮೊದಲಾದವರು ಇದ್ದರು.