ಅಂಬೇಡ್ಕರ್ ಎಂದರೆ ಅವರು ದಲಿತರಿಗೆ ಮಾತ್ರ ಎಂಬ ಭಾವನೆ ಸಮಾಜದಲ್ಲಿ ಇಂದಿಗೂ ಇದೆ. ವಿದ್ಯಾವಂತರು ಸಂವಿಧಾನದ ಬಗ್ಗೆ ಅರ್ಥೈಸಿಕೊಳ್ಳದೆ ಇರುವುದರಿಂದ ಈ ತಾರತಮ್ಯ ಇದೆ.

ಬಂಗಾರಪೇಟೆ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಾತಿ ಪದ್ಧತಿಯನ್ನು ಸಮಾಜದಿಂದ ಹೋಗಲಾಡಿಸಲು ಸಂವಿಧಾನ ರಚನೆ ಮಾಡಿದರು. ಇಂತಹ ಧೀಮಂತ ವ್ಯಕ್ತಿಯ ಜಯಂತಿಯನ್ನು ಬರೀ ಭಾರತದಲ್ಲಿ ಮಾತ್ರ ಆಚರಣೆ ಮಾಡದೆ ವಿದೇಶಗಳಲ್ಲಿಯೂ ಆರಾಧಿಸುವರು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ರವರ ೧೩೫ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಎಂದರೆ ಅವರು ದಲಿತರಿಗೆ ಮಾತ್ರ ಎಂಬ ಭಾವನೆ ಸಮಾಜದಲ್ಲಿ ಇಂದಿಗೂ ಇದೆ. ವಿದ್ಯಾವಂತರು ಸಂವಿಧಾನದ ಬಗ್ಗೆ ಅರ್ಥೈಸಿಕೊಳ್ಳದೆ ಇರುವುದರಿಂದ ಈ ತಾರತಮ್ಯ ಇದೆ. ಸಂವಿಧಾನದ ಬಗ್ಗೆ ಮೊದಲು ಎಲ್ಲರೂ ಅರಿಯಬೇಕು. ಆಗಲೇ ಉದ್ಧಾರವಾಗಲು ಸಾಧ್ಯವೆಂದರು.ಕೆಲವರು ಫೇಸ್ ಬುಕ್‌ನಲ್ಲಿ ಮುಂದಿನ ಎಂಎಲ್‌ಎ ಮುನಿಸ್ವಾಮಿ ಎಂದು ಬರೆಯುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ನಾನು ನನ್ನ ಶ್ರಮಕ್ಕೆ ಜನರು ಕೂಲಿ ಕೊಡುವರು. ಅದು ಬಿಟ್ಟು ಬಿಟ್ಟಿ ಪ್ರಚಾರ ಪಡೆಯುವವರಿಗಲ್ಲ ಜನ ಬೆಂಬಲ ಎಂದು ಮಾಜಿ ಸಂಸದರನ್ನು ಟೀಕಿಸಿದರು.ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ದೇಶದ ಆಸ್ತಿ ಹೊರತು ಒಂದು ಸಮಾಜಕ್ಕಲ್ಲ. ಅವರ ಬಗ್ಗೆ ಎಲ್ಲರೂ ಅರ್ಥೈಸಿಕೊಂಡು ಅವರ ಮಾರ್ಗದಲ್ಲಿ ಸಾಗಬೇಕೆ ವಿನಃ ಬರೀ ಹೊಗಳಿಕೆಗೆ ಮಾತ್ರ ಸೀಮಿತಗೊಳಿಸಬಾರದು ಎಂದರು.ಈ ವೇಳೆ ತಹಸೀಲ್ದಾರ್ ಸುಜಾತ, ತಾಪಂ ಇಒ ರವಿಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ನಗರಸಭೆ ಆಯುಕ್ತ ಸತ್ಯನಾರಾಯಣ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ನೌಕರ ಸಂಘದ ಅಧ್ಯಕ್ಷ ರವಿಕುಮಾರ್, ದಲಿತ ಮುಖಂಡರಾದ ಹುಣಸನಹಳ್ಳಿ ವೆಂಕಟೇಶ್, ರಮೇಶ್,ಎಂ.ನಾರಾಯಣ್, ಎಸ್.ಎ.ಪಾರ್ಥಸಾರಥಿ ಇತರರು ಇದ್ದರು.