10 ಕೋಟಿ ರು. ಮೌಲ್ಯದ ಆ್ಯಂಬರ್ ಗ್ರಿಸ್‌ ವಶ

| Published : Apr 11 2025, 12:32 AM IST

ಸಾರಾಂಶ

ಆ್ಯಂಬರ್‌ ಗ್ರಿಸ್‌ ಸಾಗಾಟ ಮಾಡುತ್ತಿದ್ದ ಸುಮಾರು 10 ಮಂದಿ ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸುಮಾರು 10 ಕೋಟಿ ಮೌಲ್ಯದ 10 ಕೆ. ಜಿ ತೂಕದ ಆ್ಯಂಬರ್ ಗ್ರಿಸ್‌ (ತಿಮಿಂಗಲದ ವಾಂತಿ) ಸಾಗಾಟ ಮಾಡುತ್ತಿದ್ದ ಸುಮಾರು 10 ಮಂದಿ ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಆಂಧ್ರ ಪದೇಶಕ್ಕೆ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಗಳನ್ನು ವಿರಾಜಪೇಟೆ ತಾಲೂಕಿನ ಹೆಗ್ಗಳ ಜಂಕ್ಷನ್ ನಲ್ಲಿ ಗುರುವಾರ ಬಂಧಿಸಲಾಗಿದೆ. ಕೇರಳದ ತಿರುವನಂತಪುರದಿಂದ ಬೆಂಗಳೂರು ಮೂಲಕ ಆಂಧ್ರಪ್ರದೇಶಕ್ಕೆ ಸಾಗಾಟ ಮಾಡಲು ಯತ್ನಿಸಲಾಗಿತ್ತು. ತನಿಖೆ ವೇಳೆ ಮಹಿಳೆಯೊಬ್ಬರು ಮಾಹಿತಿ ನೀಡಿದ್ದರು.

ಪ್ರಕರಣ ಸಂಬಂಧ ಸೆಕ್ಷನ್ 239 ಅಡಿಯಲ್ಲಿ 10 ಜನರ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.

ಕೇರಳದ ತಿರುವನಂತಪುರ ಹಾಗೂ ಕಣ್ಣೂರಿನ ಆರೋಪಿಗಳಾದ ಶಂಶುದ್ದೀನ್.ಎಸ್. (45), ಎಂ.ನವಾಜ್ (54), ವಿ.ಕೆ.ಲತೀಶ್(53) ರಿಜೇಶ್.ವಿ(40), ಪ್ರಶಾಂತ್.ಟಿ(52), ಶಿವಮೊಗ್ಗ ಜಿಲ್ಲೆಯ ಭದ್ರವಾತಿಯ ರಾಘವೇಂದ್ರ ಎ.ವಿ(48), ಕಾಸರಗೋಡಿನ ಬಾಲಚಂದ್ರನಾಯಕ್ (55), ಕ್ಯಾಲಿಕಟ್ ನ ಸಾಜುಥಾಮೋಸ್ (58), ಕಣ್ಣೂರು ಜಿಲ್ಲೆಯ ಜೋಬಿಸ್.ಕೆ.ಕೆ, ಜಿಜೇಸ್.ಎಂ. (40) ಬಂಧಿಸಲಾಗಿದೆ ಎಂದು ವಿವರಿಸಿದರು.

10 ಕೆ.ಜಿ 390 ಗ್ರಾಂ ಆ್ಯಂಬರ್ ಗ್ರಿನ್(ತಿಮಿಂಗಲದ ವಾಂತಿ) ಅಂದಾಜು ಮೌಲ್ಯ 10 ಕೋಟಿ ರು., ಕೆ.ಎಲ್-13 ಎಎಕ್ಸ್-5197 ಮಾರುತಿ ಸ್ವೀಫ್ಟ್, 2 ನೋಟು ಎಣಿಸುವ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಆರೋಪಿಗಳ ಪತ್ತೆಗಾಗಿ ಮಹೇಶ್ ಕುಮಾರ್.ಎಸ್. ಡಿಎಸ್ಪಿ ವಿರಾಜಪೇಟೆ ಉಪವಿಭಾಗ, ಅನೂಪ್ ಮಾದಪ್ರ.ಪಿ, ಸಿಪಿಐ, ವಿರಾಜಪೇಟೆ ವೃತ್ತ, ಪ್ರಮೋದ್.ಹೆಚ್.ಎಸ್. ಪಿಎಸ್‌ಐ, ವಿರಾಜಪೇಟೆ ನಗರ ಪೊಲೀಸ್ ಠಾಣೆ ಹಾಗೂ ಠಾಣಾ ಸಿಬ್ಬಂದಿ ಮತ್ತು ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.