ಸಾರಾಂಶ
ರಾಣಿಬೆನ್ನೂರು: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ತುಂಗಭದ್ರ ನದಿ ತಟದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪದ ಬಳಿ ಮೂಲಗದ್ದುಗೆಯ ಅಭಿವೃದ್ಧಿಯ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸುವ ಅಭಿಯಾನ ಕಾರ್ಯಕ್ರಮವು ನಿಜ ಶರಣ ಅಂಬಿಗರ ಚೌಡಯ್ಯನವರ ಮೂಲ ಮಠದ ಅಭಿನವ ಅಂಬಿಗರ ಚೌಡಯ್ಯನವರ ಸಾನಿಧ್ಯದಲ್ಲಿ ಸೋಮವಾರ ಜರುಗಿತು.ಮೂಲಗದ್ದುಗೆಯ ನಿಜಶರಣ ಅಂಬಿಗರ ಚೌಡಯ್ಯನ ಮಠದ ಅಧ್ಯಕ್ಷೆ ಅಂಬಿಕಾ ಜಾಲಗಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿರುವ ಅಂಬಿಗ ಸಮುದಾಯ 39 ಪರ್ಯಾಯ ಪಂಗಡಗಳನ್ನು ಹೊಂದಿದೆ. ಇವರಿಗೆಲ್ಲ ಆರಾಧ್ಯ ಕುಲಗುರು ನಿಜಶರಣ ಅಂಬಿಗರ ಚೌಡಯ್ಯನವರಾಗಿದ್ದು, ಅವರ ಐಕ್ಯ ಮಂಟಪ ಅಭಿವೃದ್ಧಿ ಕಾಣದೆ ಇರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬರುವ ಬಜೆಟ್ನಲ್ಲಿ ಗ್ರಾಮದಲ್ಲಿರುವ 100 ಎಕರೆ ವಿಸ್ತೀರ್ಣವುಳ್ಳ ಜಾಗೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಪ್ರಾಧಿಕಾರ ಮಾಡಬೇಕು. ತುರ್ತಾಗಿ 50 ಕೋಟಿ ಅನುದಾನ ಒದಗಿಸಬೇಕು ಮತ್ತು ಐಕ್ಯಮಂಟಪದ ಅಭಿವೃದ್ಧಿಗೆ ಅಡ್ಡಿಯಾಗಿರುವ ಭಾರತೀಯ ಪುರಾತತ್ವ ಇಲಾಖೆಯಿಂದ ಆಕ್ಷೇಪಣೆಯನ್ನು ರಾಜ್ಯ ಸರ್ಕಾರವು ತೆರವುಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಕೂಡಲ ಸಂಗಮ ಮಾದರಿಯಲ್ಲಿ ಐಕ್ಯಮಂಟಪವನ್ನು ಅಭಿವೃದ್ಧಿಪಡಿಸಬೇಕು ಎಂದರು.ಹುಬ್ಬಳ್ಳಿಯ ಬ್ರಹ್ಮರ್ಷಿ ಶ್ರೀ ರಾಜು ಗುರು ಸ್ವಾಮೀಜಿ ಮಾತನಾಡಿ, ಈಗಾಗಲೇ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿಯೇ 32 ಕೋಟಿ ರು.ಗಳನ್ನು ನೀರಾವರಿ ಇಲಾಖೆಯಿಂದ ಬಿಡುಗಡೆಗೊಳಿಸಿದ್ದರು. ಆದರೆ ಪ್ರಸ್ತಾವಿತವಲ್ಲದ ಯೋಜನೆಗೆ ಅನುದಾನ ದುರ್ಬಳಕೆಯಾಗಿದೆ. ಸದ್ಯ ನಡೆಯುತ್ತಿರುವ ಕಟ್ಟಡಗಳು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಕೂಡಿದ್ದು ಕೂಡಲೇ ಉನ್ನತಮಟ್ಟದ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಹಿನ್ನೀರಿನಿಂದ ಚೌಡಯ್ಯನವರ ಗದ್ದುಗೆ ಮುಳುಗಡೆಯಾಗುತ್ತಿರುವುದರಿಂದ ಸದರಿ ಬ್ಯಾರೇಜ್ಗೆ ಹಾಗೂ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಬಳಿ ಇರುವ ಜಾನಪದ ವಿಶ್ವವಿದ್ಯಾಲಯಕ್ಕೆ ಅಂಬಿಗರ ಚೌಡಯ್ಯನವರ ಹೆಸರನ್ನು ನಾಮಕರಣ ಮಾಡಬೇಕು. ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಬಜೆಟ್ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿದರು.ಅಭಿನವ ಅಂಬಿಗರ ಚೌಡಯ್ಯ ಶ್ರೀಗಳು ಹಾಗೂ ಸಮಾಜದ ಮುಖಂಡರು ಗ್ರಾಪಂ ಪಿಡಿಓ ವೀರಪ್ಪ ತಳವಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಲಕ್ಷ್ಮಣ ದೀಪಾವಳಿ, ವೀರೇಶ ಬಾರ್ಕಿ, ಪರಮೇಶ ದೀಪಾವಳಿ, ವೀರಣ್ಣ ಗಂಗಮ್ಮನವರ, ಚಂದ್ರಪ್ಪ ಮಾಳಗಿ, ಪ್ರಕಾಶ ದೀಪಾವಳಿ, ರಾಘವೇಂದ್ರ ಹಳ್ಳಳ್ಳಿ, ನಾಗರಾಜ ದೀಪಾವಳಿ, ಹನುಮಂತಪ್ಪ ಜಾಲಗಾರ, ರಮೇಶ ಕುಂಚೂರ, ಮಲ್ಲಿಕಾರ್ಜುನ ದೀಪಾವಳಿ, ದೇವಿಂದ್ರಪ್ಪ ಹುಲ್ಮನಿ, ಬಸವರಾಜ ಲಕ್ಷ್ಮೇಶ್ವರ, ಕಿರಣಕುಮಾರ ಕುಂಚೂರ, ಗಜೇಂದ್ರ ಮಾಳಗಿ, ಬಸವಣ್ಣೆಪ್ಪ ದೀಪಾವಳಿ, ಮಲ್ಲಿಕಾರ್ಜುನ ಬಾರ್ಕಿ, ಪ್ರವೀಣ ದೀಪಾವಳಿ, ಹನುಮಂತಪ್ಪ ದಿವಟರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಾಜದ ಮುಖಂಡರು ಇದ್ದರು.