ಸಾರಾಂಶ
ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.
ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಗುರುರಾಜ್, ಹನ್ನೆರಡನೇ ಶತಮಾನದಲ್ಲಿ ದಿಟವನ್ನೆ ನುಡಿದ ದಿಟ್ಟ ಶರಣರು ಇವರು. ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ನಿಜಶರಣ ಅಂಬಿಗರ ಚೌಡಯ್ಯ ಅವರ ಮಾತು ಕಟುವಾದರೂ ನೇರ ನುಡಿಯವರಾಗಿದ್ದರು. ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿದರು. ಅನಾಚಾರ, ಅನೈತಿಕತೆಯನ್ನು ನಿರ್ಭಿತಿಯಿಂದ ಕಟುವಾಗಿ ಟೀಕಿಸಿದರು. ತನ್ನ ವಚನಗಳನ್ನು ವೈಚಾರಿಕವಾಗಿ ನಿರೂಪಿಸಿ ಮಹಾ ಮಾನವತವಾದಿಯಾಗಿದ್ದರು ಎಂದು ತಿಳಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು. ಎಮ್ಮಿಗನೂರಿನ ರಾಜು ಮತ್ತು ತಂಡದವರು ವಚನ ಗಾಯನ ಮತ್ತು ಸಿರುಗುಪ್ಪದ ಕೀರ್ತಿ ನೃತ್ಯ ಪ್ರದರ್ಶನ ಪ್ರಸ್ತುತ ಪಡಿಸಿದರು.ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ಬಿ.ಮೌಲಾಲಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು. ಮೆರವಣಿಗೆಯು ನಗರದ ಡಾ. ರಾಜ್ ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ರೈಲ್ವೆ ಸ್ಟೆಷನ್, ಎಚ್.ಆರ್. ಗವಿಯಪ್ಪ ವೃತದ ಮೂಲಕ ಡಾ. ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.ನಿಜಗುಣ ಅಂಬಿಗರ ಚೌಡಯ್ಯ ಆದರ್ಶ ಪಾಲಿಸಿಕುರುಗೋಡು: ಇಲ್ಲಿನ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ನಿಜಗುಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ನರಸಪ್ಪ ಮಾತನಾಡಿ, ವಚನಕಾರರಲ್ಲಿ ನೇರ ನಡೆ-ನುಡಿಗೆ ಹೆಸರಾಗಿದ್ದ ಅಂಬಿಗರ ಚೌಡಯ್ಯ ಅವರಿಗೆ ಮಾತ್ರ ನಿಜಶರಣ ಎಂದು ಕರೆಯುತ್ತಿದ್ದರು. ಅಂಥ ಮಹಾನ್ ವ್ಯಕ್ತಿಯ ಆದರ್ಶ ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು. ಗ್ರೇಡ್-೨ ತಹಸೀಲ್ದಾರ್ ಮಲ್ಲೇಶಪ್ಪ, ಶಿರಸ್ತೆದಾರ್ ವಿಜಯ ಕುಮಾರ್ ಮತ್ತು ರಾಜಶೇಖರ್, ಕಂದಾಯ ನಿರೀಕ್ಷಕ ಸುರೇಶ್ ಮತ್ತು ಭದ್ರಯ್ಯ ಸಿಬ್ಬಂದಿ ಲತಾ, ಮಲ್ಲಮ್ಮ, ಸ್ವಾತಿ, ಶ್ವೇತಾ, ಸರಸ್ವತಿ ಇದ್ದರು