ಸಾರಾಂಶ
ಗುತ್ತಲ:ವೀರಗಣಾಚಾರಿ, ನಿಜಶರಣ ಅಂಬಿಗರ ಚೌಡಯ್ಯ ಅವರ ವಚನತತ್ವ ಸಿದ್ಧಾಂತದ ವಿರೋಧಿಗಳು ಮೂರ್ತಿ ಭಗ್ನಗೊಳಿಸಿ ವಿಕೃತಿ ಮೆರೆದಿದ್ದಾರೆ. ಇದು ಬಸವಾದಿ ಶಿವಶರಣರಿಗೆ, ವಚನಕಾರರಿಗೆ ಮಾಡಿರುವ ಅಪಮಾನವಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಸ್ವಾಮೀಜಿ, ಕಲಬುರಗಿ ಜಿಲ್ಲೆಯ ಮುತ್ತಗಾ ಗ್ರಾಮದಲ್ಲಿ ಶರಣ ಶ್ರೇಷ್ಠ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಭಗ್ನಗೊಳಿಸಿರುವ ಕೃತ್ಯ ಖಂಡನೀಯ, ಕೃತ್ಯ ಎಸಗಿರುವ ಮೂರ್ತಿ ಭಂಜಕರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.ಆರು ವರ್ಷದ ಹಿಂದೆಯಷ್ಟೇ ಅಂಬಿಗ ಸಮಾಜದವರು ಹಾಗೂ ಭಕ್ತರು ಸೇರಿಕೊಂಡು ಮೂರ್ತಿ ಸ್ಥಾಪನೆ ಮಾಡಿದ್ದರು. ಆದರೆ ಕಿಡಿಗೇಡಿಗಳು ಮೂರ್ತಿ ಭಗ್ನಗೊಳಿಸುವ ಮೂಲಕ ಸಮಾಜದ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ. ವಚನ ಕ್ರಾಂತಿಯ ಮೂಲಕ ಸಮಾಜದ ಡೊಂಕನ್ನು ಸರಿಪಡಿಸಿದ್ದ ಮಹನೀಯನಿಗೆ ಅಪಮಾನ ಮಾಡಿದಂತಾಗಿದೆ ಎಂದರು.
12ನೇ ಶತಮಾನದ ವಚನ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಬಸವಣ್ಣನವರ ಅನುಯಾಯಿ, ಅವರ ವಚನಗಳು ನಮ್ಮಲ್ಲಿ ವಿಚಾರ ವಂತಿಕೆ ಮೂಡಿಸುತ್ತದೆ ಎಂದು ಹೇಳಿದರು.ಮೂರ್ತಿ ಭಗ್ನಗೊಳಿಸಿದ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ತಕ್ಷಣವೇ ಮುಖ್ಯಮಂತ್ರಿ, ಗೃಹಸಚಿವ, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಭಗ್ನವಾಗಿರುವ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನ ತೆರವುಗೊಳಿಸಿ ನೂತನ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.