ಬಂಟ್ವಾಳ: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಅಬುದಾಭಿ, ದುಬೈ, ಇಸ್ರೇಲ್ ಸಹಿತ ಹಲವು ದೇಶಗಳಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರನ್ನು ಆತಂಕಕ್ಕೆ ತಳ್ಳಿದೆ. ಹೀಗಿದ್ದರೂ ಸ್ಥಳೀಯ ಸರ್ಕಾರಗಳು ನಮ್ಮ ಭದ್ರತೆಗೆ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.ಇಸ್ರೇಲ್ ನಲ್ಲಿ ವಾಸ್ತವ್ಯವಿರುವ ಬಂಟ್ವಾಳ ಮೂಲದ ಸುನಿಲ್ ರವರು, ಶನಿವಾರ ಇಡೀ ದಿನ ನಾವು ಬಾಂಬ್ ಶಟರ್ ನಲ್ಲಿಯೇ ಕಾಲ ಕಳೆಯಬೇಕಾಯಿತು. ಇಡೀ ದಿನ ದಾಳಿಗಳು ನಡೆಯುತ್ತಿದ್ದು, ಎಲ್ಲರ‌ ನಿದ್ದೆ ಗೆಡಿಸಿದೆ. ಭಾನುವಾರ ಸ್ವಲ್ಪ ಕಡಿಮೆ ಇತ್ತು. ಆಕಾಶದಲ್ಲಿ ಕ್ಷಿಪಣಿದಾಳಿಗಳು ನಿಜಕ್ಕೂ ಭಯಹುಟ್ಟಿಸಿದೆ ಎನ್ನುತ್ತಾರೆ ಅವರು.ಇಸ್ರೇಲ್ ನ ಇಲಾತ್ ಎಂಬಲ್ಲಿ ಉದ್ಯೋಗದಲ್ಲಿರುವ ಮೂಡಬಿದ್ರೆಯ ವಲೇರಿಯನ್ ರವರು, ನಾವಿರುವಲ್ಲಿ ಯಾವುದೇ ಸಮಸ್ಯೆ ಇಲ್ಲ. ದಿನಕ್ಕೆ ಒಂದೆರಡು ಕ್ಷಿಪಣಿ ದಾಳಿ ನೋಡುತ್ತಿದ್ದೇವೆ. ಉದ್ವಿಗ್ನ ಸ್ಥಿತಿ ಇರುವ ಸ್ಥಳದಿಂದ ಸುಮಾರು 380 ಕಿ.ಮೀ.ದೂರದಲ್ಲಿದ್ದೇವೆ. ಇಲ್ಲಿ ಎಲ್ಲವೂ ಸರಿ ಇದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.ಅಬುದಾಭಿಯಲ್ಲಿ ಪರಿಸ್ಥಿತಿ ಸೋಮವಾರ ಭಯದ ವಾತಾವರಣ ಇತ್ತು. ಮಂಗಳವಾರ ಸಹಜಸ್ಥಿತಿಯತ್ತ ಮರಳಿದೆ. ವಿಮಾನ ನಿಲ್ದಾಣಗಳು ಕಾರ್ಯಸ್ಥಗಿತಗೊಳಿಸಿದ್ದು, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸದ ಬಗ್ಗೆ ಮಾಹಿತಿ ಇದೆ. ಹೀಗಿದ್ದರೂ ನಾಲ್ಕು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಿ, ಆನ್ಲೈನ್ ಕ್ಲಾಸ್ ನಡೆಸುವ ಬಗ್ಗೆ ಸುತ್ತೋಲೆ ಬಂದಿದೆ ಎನ್ನುತ್ತಾರೆ ಪುತ್ತೂರು ಮೂಲದ ಸಿರಾಜ್ ಪರ್ಲಡ್ಕ ಅವರು.