ಸಾರಾಂಶ
ಶಿಡ್ಲಘಟ್ಟ: ಡಾ.ಅಂಬೇಡ್ಕರ್ ಕುರಿತು ಅಮಿತ್ ಶಾ ಅವರು ನೀಡಿರುವ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ. ದೇಶದ ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಹಾಗೂ ಕ.ದ.ಸಂ.ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ತಿಳಿಸಿದರು.
ನಗರದಲ್ಲಿ ಕ.ದ.ಸಂ.ಸಮಿತಿ ಶಿಡ್ಲಘಟ್ಟ ತಾಲೂಕು ಶಾಖೆ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರವಾಗಿರಲಿ, ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವವರ ನಡೆ ಮತ್ತು ನುಡಿ ಜವಾಬ್ದಾರಿಯುತವಾಗಿರಬೇಕು. ಏಕೆಂದರೆ ಅವರ ಮಾತು ಇಡೀ ದೇಶ ಹಾಗೂ ವ್ಯವಸ್ಥೆಯ ಮಾತಾಗಿರುತ್ತದೆ. ಅಮಿತ್ ಶಾ ಅವರು ದೇಶದ ಗೃಹಮಂತ್ರಿಗಳಾಗಿರುವವರು. ಅವರ ಮಾತನ್ನು ಇಡೀ ವಿಶ್ವವೇ ಆಲಿಸುತ್ತದೆ. ಅವರು ಅತ್ಯಂತ ಬೇಜವಾಬ್ದಾರಿಯುತವಾಗಿ ಮಾತನಾಡಿರುವುದರಿಂದ ಕ.ದ.ಸಂ.ಸಮಿತಿ ಶಿಡ್ಲಘಟ್ಟ ತಾಲೂಕು ಶಾಖೆ ವತಿಯಿಂದ ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದರು.
ಡಾ.ಅಂಬೇಡ್ಕರ್ ಅವರು ಕೊಟ್ಟಂಥ ಸಂವಿಧಾನದ ಅಡಿಯಲ್ಲಿ ಅಮಿತ್ ಶಾ ಹಾಗೂ ಅವರ ಸರ್ಕಾರ ಕೆಲಸ ಮಾಡುತ್ತಿದೆ ಎಂಬುದನ್ನು ಅವರು ಮರೆತಂತಿದೆ. ಮೌಢ್ಯ ಅಥವಾ ಯಾವುದೋ ಒಂದು ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಈ ದೇಶದಲ್ಲಿ ಹೆಚ್ಚುತ್ತಿರುವುದು ದುರಂತ. ನಮ್ಮದು ಜಾತ್ಯಾತೀತ ರಾಷ್ಟ್ರ. ಸರ್ವಧರ್ಮಗಳು ಸಂವಿಧಾನವೆಂಬ ವಿಶಾಲವಾದ ಚಪ್ಪರದ ಅಡಿಯಲ್ಲಿ ಸಾಮರಸ್ಯದಿಂದ ಬಾಳ್ವೆ ನಡೆಸಿವೆ.ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ಅವರ ರಾಜೀನಾಮೆ ಪಡೆದು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಕ.ದ.ಸಂ.ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ತಾಲೂಕು ಸಂಚಾಲಕ ಸೊಣ್ಣಪ್ಪ, ಸಂಘಟನಾ ಸಂಚಾಲಕರಾದ ತೋಕಲಹಳ್ಳಿ ಆಂಜಿನಪ್ಪ, ವರಸಂದ್ರ ನಾರಾಯಣಸ್ವಾಮಿ, ದಿಬ್ಬೂರಹಳ್ಳಿ ಗೊರ್ಲಪ್ಪ, ಸುಬ್ರಮಣಿ, ಮುನಿಆಂಜಿನಪ್ಪ, ದೇವರಾಜ್ ಹಾಜರಿದ್ದರು.