ಶಾ ದೇಶದ ಮತ್ತೊಬ್ಬಉಕ್ಕಿನ ಮನುಷ್ಯ: ಬಿವೈವಿ

| Published : Feb 12 2024, 01:34 AM IST

ಸಾರಾಂಶ

ಅಸಾಧ್ಯವಾದ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮತ್ತೊಬ್ಬ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಎನಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಅಸಾಧ್ಯವಾದ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮತ್ತೊಬ್ಬ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಎನಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.

ಸುತ್ತೂರಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಮಾತನಾಡಿ, ದೇಶದ ಅಭಿವೃದ್ಧಿಗೆ ಅಮಿತ್ ಶಾ ಸಂಕಲ್ಪ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದು ಸೇರಿ ಅನೇಕ ಕಠಿಣ ನಿರ್ಧಾರಗಳನ್ನು ಜಾರಿಗೆ ತಂದಿದ್ದಾರೆ. ಇದೀಗ ಶಾ ಅವರ ಆಗಮನದಿಂದ ಇಡೀ ರಾಜ್ಯದಲ್ಲಿ ಸಂಚಲನ ಉಂಟಾಗಿದೆ. ಇದು ಕೇವಲ ರಾಜಕೀಯಕ್ಕೆ ಮಾತ್ರವಲ್ಲದೆ, ಎಲ್ಲಾ ಹಂತದಲ್ಲೂ ಸಂಚಲನ ಸೃಷ್ಟಿಸಲಿದೆ ಎಂದು ಹೇಳಿದರು.

ಸುತ್ತೂರು ಮಠ ಆಧ್ಯಾತ್ಮಿಕ ಚಟುವಟಿಕೆ ಮೂಲಕ ವಿಶ್ವವ್ಯಾಪಿ ಜ್ಞಾನ ಪಸರಿಸಿದೆ, ವಿನೂತನ ಸಾಧನೆ ಮಾಡಿದೆ. ಕನ್ನಡನಾಡು, ಮಠ-ಮಾನ್ಯಗಳ ನಾಡು. ಈ ಪರಂಪರೆಯ ಮಹಾಕೊಂಡಿಯಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಮಠ ಸೇವೆ ಸಲ್ಲಿಸಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದೆ ಎಂದು ಬಣ್ಣಿಸಿದರು.

ಪ್ರಧಾನಿ ಮೋದಿ ಅವರಿಗೂ ಮೈಸೂರು ಭಾಗದ ಸುತ್ತೂರು ಮಠದ ಬಗ್ಗೆ ಭಕ್ತಿ ಹೆಚ್ಚಿದೆ. ಹಾಗೆಯೇ ಅಮಿತ್ ಶಾ ಅವರು ಗೃಹ ಮಂತ್ರಿಯಾಗಿ ಮಾತ್ರವಲ್ಲ, ಮಠದ ಸದ್ಭಕ್ತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.