ಕುಕನೂರು: ಪಟ್ಟಣದ ಸಾರ್ವಜನಿಕರಿಗೆ ಅಮೃತ ೨.೦ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಧ್ವಾನದಿಂದ ಕೂಡಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಪಪಂ ಸದಸ್ಯರು ಆರೋಪಿಸಿದರು.
ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ಮಂಗಳವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಪಟ್ಟಣದಲ್ಲಿ ವರ್ಷದಿಂದ ನಡೆಯುತ್ತಿರುವ ಅಮೃತ ೨.೦ ಕುಡಿಯುವ ನೀರಿನ ಯೋಜನೆಯಲ್ಲಿ ಗುಣಮಟ್ಟದ ಸಿಸಿ ರಸ್ತೆ ಅಗೆದು ಮನ ಬಂದಂತೆ ಭೂಮಿ ಅಗೆದು ಪೈಪ್ಲೈನ್ ಮಾಡುತ್ತಿದ್ದಾರೆ. ಇದರಿಂದ ಕಾಲನಿಯ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದೆಯಾಗುತ್ತಿದೆ. ಕೆಲ ಜನರು ಬೈಕ್ ಮತ್ತು ಪಾದಚಾರಿಗಳು ಜಾರಿ ಬಿದ್ದಿದ್ದಾರೆ. ಪೈಪ್ಲೈನ್ ಮುಗಿಯುತ್ತಿದ್ದಂತೆ ಸಿಸಿ ರಸ್ತೆ ಹಾಕಿ ಎಂದರೂ ಕೇಳುತ್ತಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದರು.೧೭ನೇ ವಾರ್ಡ್ ನಿವಾಸಿಗಳಿಂದ ಮನವಿ: ೧೭ನೇ ಪಪಂ ಸದಸ್ಯ ಶಿವರಾಜಗೌಡ ಯಲ್ಲಪ್ಪಗೌಡ್ರ, ನಮ್ಮ ವಾರ್ಡ್ನಲ್ಲಿ ಅನೇಕ ಸಮಸ್ಯೆ ಇದ್ದು, ನಮಗೆ ಪಪಂದಿಂದ ಸ್ಪಂದನೆ ಸಿಗುತ್ತಿಲ್ಲ ಇದರಿಂದ ನಮ್ಮ ಕಾಲನಿಯ ನಿವಾಸಿಗಳು ಸಭೆಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬೇಕಾಯಿತು ಎಂದರು.
ಪಪಂ ಸದಸ್ಯ ಗುದ್ನೇಪ್ಪ ನೋಟಗಾರ ಮಾತನಾಡಿ, ಪಪಂಯಲ್ಲಿ ಕೆಲಸ ನಿರ್ವಹಿಸುತ್ತೀರುವ ಕೆಲ ಸಿಬ್ಬಂಧಿ ಯಾರ ಒತ್ತಡಕ್ಕೆ ಒಳಗಾಗದೆ ಅವರನ್ನು ಮೂಲ ಹುದ್ದೆಗೆ ವರ್ಗಾವಣೆ ಮಾಡಬೇಕು. ಕೆಲವರು ಪೌರಕಾರ್ಮಿಕರೆಂದು ಕೆಲಸಕ್ಕೆ ಬಂದು ಪಪಂ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತಹವರನ್ನು ಕೂಡಲೆ ಮೂಲ ಹುದ್ದೆಗೆ ಕಳುಹಿಸಬೇಕೆಂದು ಒತ್ತಾಯಿಸಿದರು.ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಪಪಂನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ, ವಾಹನ ಚಾಲಕರು, ವಾಟರ್ಮನ್ ಮತ್ತು ಪೌರಕಾರ್ಮಿಕರನ್ನು ಸ್ವಚ್ಛತೆ, ಕುಡಿಯುವ ನೀರು ಸಮಸ್ಯೆಗಳು ಬಾರದಂತೆ ನೇಮಕ ಮಾಡಲಾಗಿದೆ. ವಾರ್ಡ್ಗಳನ್ನು ಹಂಚಿಕೆಯಂತೆ ಅವರು ಕೆಲಸ ನಿರ್ವಹಿಸಬೇಕೆಂದು ಹೇಳಿದರು.
೬ನೇ ವಾರ್ಡ್ ಸದಸ್ಯ ಮನವಿಗೆ ಸ್ಪಂದನೆ ಇಲ್ಲ: ಪಟ್ಟಣದ ೬ನೇ ವಾರ್ಡ್ನ ಪಪಂ ಸದಸ್ಯ ಮಲ್ಲಿಕಾರ್ಜುನ ಚೌಧರಿ ಕಳೆದ ಎರಡು ವರ್ಷಗಳಿಂದ ತನ್ನ ವಾರ್ಡ್ನ ಚರಂಡಿ ಸ್ವಚ್ಛತೆ,ವಿದ್ಯುತ್ ಕಂಬ ಸ್ಥಳಾಂತರ ಮತ್ತು ನೀರಿನ ಕುರಿತು ಪಪಂಗೆ ಮನವಿ ಸಲ್ಲಿಸಿದರೂ ಇನ್ನುವರೆಗೂ ನಮ್ಮ ವಾರ್ಡ್ ಸಮಸ್ಯೆ ಬಗೆಹರಿದಿಲ್ಲ ಎಂದು ಸಭೆಯಲ್ಲಿ ಮನವಿ ನೀಡಿದ ಹಳೆಯ ಪತ್ರ ಸಭೆಗೆ ತೋರಿಸಿ ಹೇಳಿದರು.
ಸಭೆಯಲ್ಲಿ ವಿದ್ಯುತ್ ದೀಪ ವಾರ್ಷಿಕ ಟೆಂಡರ್, ಕಂಪ್ಯೂಟರ್ ಆಪ್ರೇಟರ್ ನೇಮಕಾತಿ, ಸರ್ವೆ ನಂ.೧೦೦/ಇ ಜಮೀನಿನ ಮೂಲ ದಾಖಲೆ, ಅನಧಿಕೃತ ಕಟ್ಟಡಗಳಿಗೆ ಕಟ್ಟಡ ಪರವಾನಗಿ ನೀಡುವ ಕುರಿತು, ಜವಳದ ರಸ್ತೆ ಮತ್ತು ಅನುದಾನದ ಕುರಿತು, ತರಕಾರಿ ಅಂಗಡಿಗಳ ಬಾಡಿಗೆ ಕುರಿತು, ಮಳಿಗೆಗಳ ಟೆಂಡರ್, ಹಕ್ಕು ಬದಲಾವಣೆ ಶುಲ್ಕ, ವಸತಿ, ಕಾರ್ಖಾನೆಗಳಿಗೆ ವಿದ್ಯುತ್ ಎನ್ಒಸಿ, ಶುಲ್ಕ ನಿಗದಿಪಡಿಸುವ ಬಗ್ಗೆ, ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಜಾಗೆ ವಿಸ್ತರಣೆ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಆಸ್ಪತ್ರೆಗೆ ವಸತಿ ಗೃಹಗಳಿಗೆ ನೀರು, ೨ನೇ ವಾರ್ಡ್ನ ಸರ್ಕಾರಿ ಪ್ರೌಢ ಶಾಲೆಗೆ ನೀರು ಒದಗಿಸುವ ಸೇರಿದಂತೆ ಅನೇಕ ವಿಷಯ ಚರ್ಚೆ ಮಾಡಲಾಯಿತು.
ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜುದ್ದೀನ್ ಕರಮುಡಿ, ಸದಸ್ಯರಾದ ರಾಮಣ್ಣ ಬಂಕದಮನಿ, ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ, ರಾಧಾ ದೊಡ್ಡಮನಿ, ಪ್ರಶಾಂತ ಆರುಬೆರಳ್ಳಿನ್, ನೂರುದ್ದೀನ್ ಗುಡಿಹಿಂದಲ್, ಗುದ್ನೇಪ್ಪ ನೋಟಗಾರ, ಮಲ್ಲಿಕಾರ್ಜುನ ಚೌಧರಿ, ಶಿವರಾಜ ಯಲ್ಲಪ್ಪಗೌಡ್ರ, ಮಂಜುನಾಥ ಕೋಳೂರು, ಲಲಿತಮ್ಮ ಯಡಿಯಾಪೂರ, ಕವಿತಾ ಹೂಗಾರ, ಲಕ್ಷ್ಮೀ ಸಬರದ್, ನಾಮನಿರ್ದೇಶಿತ ಸದಸ್ಯರಾದ ಈರಣ್ಣ ಯಲಬುರ್ಗಾ, ರಫೀ ಹಿರೇಹಾಳ, ಶರಣಯ್ಯ, ಕಾನೂನು ಸಲಹೆಗಾರ ರಮೇಶ ಗಜಕೋಶ, ವೃದ್ಯ ರಾಮಕೃಷ್ಣ ಸೇರಿದಂತೆ ಸಿಬ್ಬಂದಿಗಳು ಇದ್ದರು.