ಲಂಗರು ಹಾಕಿದ್ದ ದೋಣಿಗೆ ಆಕಸ್ಮಿಕ ಬೆಂಕಿ
KannadaprabhaNewsNetwork | Published : Oct 16 2023, 01:45 AM IST
ಲಂಗರು ಹಾಕಿದ್ದ ದೋಣಿಗೆ ಆಕಸ್ಮಿಕ ಬೆಂಕಿ
ಸಾರಾಂಶ
ಭಟ್ಕಳದ ಇಲ್ಲಿನ ಮಾವಿನಕುರ್ವೆ ಬಂದರಿನಲ್ಲಿ ಲಂಗರು ಹಾಕಿದ್ದ ದೋಣಿಯೊಂದಕ್ಕೆ ದಿಢೀರ್ ಬೆಂಕಿ ತಗುಲಿದ ಪರಿಣಾಮ ದೋಣಿ ಸಂಪೂರ್ಣ ಸುಟ್ಟು ಹೋದ ಘಟನೆ ಭಾನುವಾರ ನಡೆದಿದೆ.
ಭಟ್ಕಳ: ಇಲ್ಲಿನ ಮಾವಿನಕುರ್ವೆ ಬಂದರಿನಲ್ಲಿ ಲಂಗರು ಹಾಕಿದ್ದ ದೋಣಿಯೊಂದಕ್ಕೆ ದಿಢೀರ್ ಬೆಂಕಿ ತಗುಲಿದ ಪರಿಣಾಮ ದೋಣಿ ಸಂಪೂರ್ಣ ಸುಟ್ಟು ಹೋದ ಘಟನೆ ಭಾನುವಾರ ನಡೆದಿದೆ. ಮಾವಿನಕುರ್ವೆ ಬಂದರಿನ ನಿವಾಸಿ ಗೋವಿಂದ ನರಸಿಂಹ ಖಾರ್ವಿ ಅವರ ಮಾಲೀಕತ್ವದ ಎಂಜಿಲಾ ಹೆಸರಿನ ದೋಣಿಯೇ ಬೆಂಕಿಗೆ ಸುಟ್ಟು ಹೋಗಿದೆ. ಗೋವಿಂದ ಖಾರ್ವಿ ದೋಣಿವಿಹಾರ ನಡೆಸುವ ಪ್ರಯುಕ್ತ ಖರೀದಿ ಮಾಡಿ ರಿಪೇರಿಗಾಗಿ ಬಂದರಿನ ದಡದಲ್ಲಿ ಲಂಗುರು ಹಾಕಿದ್ದರು. ಪ್ರವಾಸೋದ್ಯಮದಡಿ ವಾಯುವಿಹಾರದ ದೋಣಿಯನ್ನಾಗಿ ಮಾರ್ಪಾಡಿಸಲು ಅಂದಾಜು ₹ 3 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ದೋಣಿಯಲ್ಲಿ ತಂದಿಟ್ಟಿದ್ದರು. ಭಾನುವಾರ ಇದ್ದಕ್ಕಿದ್ದಂತೆ ದೋಣಿಗೆ ಬೆಂಕಿ ತಗುಲಿದ್ದು ದೋಣಿ ಸಹಿತ ದೋಣಿಯಲ್ಲಿದ್ದ ಸಾಮಗ್ರಿ ಸುಟ್ಟು ಭಸ್ಮವಾಗಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ. ಬೆಂಗಿ ತಗುಲಿ ₹ 7 ಲಕ್ಷ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.