ಸಾರಾಂಶ
ಗದಗ: ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆ ಅನುಭವಿಸುವ ಸಮಸ್ಯೆಗಳನ್ನು ಕತೆಗಳ ಮೂಲಕ ಸಮಾಜದೆದುರು ತೆರೆದಿಡುವ ಪ್ರಯತ್ನವನ್ನು ಎದೆಯ ಹಣತೆಯ ಕೃತಿಯಲ್ಲಿ ಬಾನು ಮುಷ್ತಾಕ ಅವರು ಮಾಡಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಮಂಜುನಾಥ ಕರಲಿಂಗಣ್ಣವರ ಹೇಳಿದರು.ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಬೂಕರ್ ಪ್ರಶಸ್ತಿ ಪುರಸ್ಕೃತ ಎದೆಯ ಹಣತೆ ಕೃತಿ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಸಮಾನತೆಯ ತಳಹದಿಯ ಮೇಲೆ ಮಹಿಳೆಯ ಬದುಕು ರೂಪಗೊಳ್ಳಬೇಕು. ಹೆಣ್ಣಿನ ಆಶೋತ್ತರಗಳನ್ನು ಅರ್ಥೈಸಿಕೊಂಡು ಸ್ಪಂದಿಸುವ ಕುಟುಂಬ ವ್ಯವಸ್ಥೆಯ ರೂಪಗೊಳ್ಳುವ ಅವಶ್ಯಕತೆಯನ್ನು ಇಲ್ಲಿಯ ಕತೆಗಳು ವ್ಯಕ್ತಪಡಿಸುತ್ತವೆ ಎಂದರು.ಇದು ಮಹಿಳೆಯರ ಜೀವನ, ಸಾಮಾಜಿಕ ಸಮಸ್ಯೆಗಳು ಮತ್ತು ಸಹಿಷ್ಣುತೆಯ ಕುರಿತು ಪ್ರತಿಪಾದಿಸುತ್ತದೆ. ಇಲ್ಲಿರುವ 12 ಕತೆಗಳು ಭಾವನಾತ್ಮಕವಾಗಿ ಆಳವಾಗಿದ್ದು ಓದುಗನಲ್ಲಿ ಸಂವೇದನೆಯನ್ನು ಸೃಷ್ಟಿಸುತ್ತವೆ. ಕುಟುಂಬದ ಪಾಲನೆಯ ಹಿನ್ನೆಲೆಯಲ್ಲಿ ಹೆಣ್ಣು ತೋರುವ ಬದ್ಧತೆ, ಸಹನೆ, ತಾಳ್ಮೆಯಂತಹ ಗುಣಗಳನ್ನು ಎತ್ತಿ ತೋರುತ್ತದೆ. ತನ್ಮೂಲಕ ಭೇದ ರಹಿತ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಸಮಾನತೆಗೆ ಶಿಕ್ಷಣವೊಂದೇ ಪ್ರಬಲ ಅಸ್ತ್ರವಾಗಿದೆ. ಶಿಕ್ಷಣದ ಕೊರತೆಯಿಂದ ಆರ್ಥಿಕ ಅಸಮಾನತೆ ತಲೆದೋರಿ ಅಸಮಾನ ವ್ಯವಸ್ಥೆ ಸಮಾಜದಲ್ಲಿ ರೂಪಗೊಳ್ಳುತ್ತಿದೆ. ಬಡವರು, ಕೆಳವರ್ಗದ ಜನರು ಅಮಾನವೀಯ ಕಟ್ಟಳೆಗಳಿಗೆ ಬಲಿಯಾಗುತ್ತಿದ್ದಾರೆ. ಮಹಿಳೆ ತನ್ನ ಇಡಿ ಜೀವನವನ್ನು ಕುಟುಂಬದ ಒಳಿತಿಗಾಗಿ ಮೀಸಲಿಟ್ಟರೂ 2ನೇ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದಾಳೆ. ಕತೆಗಳ ಮೂಲಕ ಮಹಿಳೆಯ ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರವನ್ನು ಸೂಚಿಸುವ ಮನಸ್ಥಿತಿಯನ್ನು ನಿರ್ಮಿಸುವ ಪಯತ್ನವನ್ನು ಬಾನು ಮುಷ್ತಾಕ ಅವರು ಮಾಡುತ್ತಾರೆ ಎಂದರು.ಈ ವೇಳೆ ದತ್ತಪ್ರಸನ್ನ ಪಾಟೀಲ, ರತ್ನಕ್ಕ ಪಾಟೀಲ, ಶಾರದಾ ಬಾಣದ, ಸುಶಾಂತೆ ನೀಲಗುಂದ, ಜಯಶ್ರೀ ಅಂಗಡಿ, ಅನಸೂಯಾ ಮಿಟ್ಟಿ, ಶೇಖಣ್ಣ ಕಳಸಾಪೂರಶೆಟ್ರ, ಸೈಯದ ಉಸ್ಮಾನ ಕೊಪ್ಪಳ, ಬಸವರಾಜ ತೋಟಗೇರ, ಜಯದೇವಭಟ್, ಡಿ.ಜಿ.ಕುಲಕರ್ಣಿ, ಬಸವರಾಜ ವಾರಿ, ಬಸವರಾಜ ಗಣಪ್ಪನವರ, ರಾಜಶೇಖರ ದಾನರಡ್ಡಿ, ನೀಲಮ್ಮ ಅಂಗಡಿ, ಶೈಲಜಾ ಗೀಡ್ನಂದಿ, ಬಿ.ಬಿ.ಹೊಳಗುಂದಿ, ಎಂ.ಎಸ್.ಹಾಲಶೆಟ್ಟಿ, ಅಮೃತಾ ಚನ್ನಪ್ಪಗೌಡರ, ಐ.ಕೆ.ಕಮ್ಮಾರ, ರತ್ನಾ ಪುರಂತರ, ವಿದ್ಯಾಧರ ದೊಡಮನಿ, ಗುರಪ್ಪ ಗಿರಿತಿಮ್ಮಣ್ಣವರ, ಬಿ.ಜಿ.ಗಿರಿತಿಮ್ಮಣ್ಣವರ, ಶಾಂತಲಾ ಹಂಚಿನಾಳ, ಎಂ.ಎಫ್.ದೋಣಿ, ರಾಜಶೇಖರ ಕರಡಿ, ಕೆ.ಜಿ.ವ್ಯಾಪಾರಿ, ಶಿವಾನಂದ ಭಜಂತ್ರಿ, ಜಿ.ಎಸ್.ನಂದಿಕೋಲಮಠ, ಅಶೋಕ ಸತ್ಯರಡ್ಡಿ, ಸತೀಶ ಚನ್ನಪ್ಪಗೌಡರ, ಶರಣಯ್ಯ ಹಿರಮಠ, ಎಸ್.ಬಿ.ಅಕ್ಕಿ, ಷಡಕ್ಷರಿ ಮೆಣಸಿನಕಾಯಿ ಮೊದಲಾದವರು ಭಾಗವಹಿಸಿದ್ದರು.
ರಕ್ಷಿತಾ ಗೀಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್.ಬಾಪುರಿ ವಂದಿಸಿದರು.