ಮನೆ ಬಿಟ್ಟು ಬಂದ ವೃದ್ಧೆಗೆ ಅನಾಥಾಶ್ರಮದಲ್ಲಿ ಆಶ್ರಯ

| Published : Jun 23 2025, 11:52 PM IST

ಸಾರಾಂಶ

ಮನೆಬಿಟ್ಟು ಬಂದಿದ್ದ ವೃದ್ಧೆಯೊಬ್ಬಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿ ಮಾನವೀಯತೆ ಮೆರೆದಿರರುವ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ಅತ್ತಿಹಳ್ಳಿ ಗ್ರಾಮದ ರುದ್ರಮ್ಮ (೭೫) ಮನೆ ಬಿಟ್ಟು ಬಂದಿರುವ ವೃದ್ಧೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮನೆಬಿಟ್ಟು ಬಂದಿದ್ದ ವೃದ್ಧೆಯೊಬ್ಬಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿ ಮಾನವೀಯತೆ ಮೆರೆದಿರರುವ ಘಟನೆ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ಅತ್ತಿಹಳ್ಳಿ ಗ್ರಾಮದ ರುದ್ರಮ್ಮ (೭೫) ಮನೆ ಬಿಟ್ಟು ಬಂದಿರುವ ವೃದ್ಧೆಯಾಗಿದ್ದು, ಮುಸ್ಲಿಮರ ಮನೆಯೊಂದರಲ್ಲಿ ಆಶ್ರಯದಲ್ಲಿದ್ದ ವೃದ್ಧೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಕರೆತಂದು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಡ್ಯದ ಜ್ಞಾನಸಿಂಧು ಆಶ್ರಮದಲ್ಲಿ ಆಶ್ರಯ ದೊರಕಿಸಲಾಗಿದೆ.

ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುವ ಪುತ್ರ ಮಹದೇವಸ್ವಾಮಿ ತಾಯಿಯನ್ನು ಒಬ್ಬಂಟಿಯಾಗಿ ಊರಿನಲ್ಲಿರಿಸಿದ್ದನು. ಮೂರು ದಿನಗಳ ಹಿಂದೆ ಅತ್ತಿಹಳ್ಳಿಯಿಂದ ಕಿರುಗಾವಲು ಗ್ರಾಮದ ಸಂತೆಮಾಳ ಬಳಿ ಬಂದಿದ್ದ ವೃದ್ಧೆ ರಸ್ತೆಯ ಪಕ್ಕದಲ್ಲಿ ಕುಳಿತಿದ್ದಳು. ತುಂಬಾ ಹೊತ್ತು ಒಂಟಿಯಾಗಿ ಕುಳಿತಿದ್ದ ವೃದ್ಧೆಯನ್ನು ಕಂಡ ಸ್ಥಳೀಯರು ಆಕೆಯನ್ನು ವಿಚಾರಿಸಿದಾಗ ಮಗ ಬಂದು ಕರೆದುಕೊಂಡು ಹೋಗುತ್ತಾನೆ ಎಂದು ತಿಳಿಸಿದ್ದಾರೆ. ಹಸಿವಿನಿಂದ ಇದ್ದ ಆಕೆಗೆ ಆಹಾರ ಕೊಟ್ಟು ಉಪಚರಿಸಿದ್ದಾರೆ. ಮುಸ್ಲಿಂ ಕುಟುಂಬವೊಂದು ವೃದ್ಧೆಯನ್ನು ಮನೆಯಲ್ಲಿರಿಸಿಕೊಂಡು ಆಶ್ರಯ ನೀಡಿದ್ದರು.

ಸಾರ್ವಜನಿಕರಿಂದ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ವೃದ್ಧೆಯನ್ನು ರಕ್ಷಣೆ ಮಾಡಿ ಮಿಮ್ಸ್ ಆಸ್ಪತ್ರೆಯಲ್ಲಿ ವೃದ್ಧೆಗೆ ಚಿಕಿತ್ಸೆ ಕೊಡಿಸಿದರು. ಈ ವಿಷಯವಾಗಿ ವೃದ್ಧೆಯ ಮಗ ಮಹದೇವಸ್ವಾಮಿಯನ್ನು ಸಂಪರ್ಕಿಸಿ ಮಂಡ್ಯಕ್ಕೆ ಕರೆಸಿಕೊಂಡರು. ತಾಯಿಯವರ ಬುದ್ಧಿ ಸ್ಥಿಮಿತದಲ್ಲಿಲ್ಲ. ಈಗ ಮತ್ತೆ ಊರಿಗೆ ಬಿಟ್ಟರೂ ಮತ್ತೆ ಇನ್ನೆಲ್ಲಿಗೋ ಹೋಗಿಬಿಡುತ್ತಾರೆ. ನಾನೂ ಬಡವನಿದ್ದೇನೆ. ಐದಾರು ತಿಂಗಳು ಇಲ್ಲಿಯೇ ಇರಲಿ. ಆನಂತರ ಬಂದು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ರಾಜಮೂರ್ತಿ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾ ಇಲಾಖೆ ಅಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅವರು ವೃದ್ಧೆಯ ಮಗನಿಗೆ ಬುದ್ಧಿವಾದ ಹೇಳಿ, ತಿಂಗಳಿಗೊಮ್ಮೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುವಂತೆ ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ವೃದ್ಧೆಗೆ ಉಪಾಹಾರ-ಊಟದ ವ್ಯವಸ್ಥೆ ಮಾಡಿ ಆರೈಕೆ ಜವಾಬ್ದಾರಿ ವಹಿಸಿಕೊಂಡು ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ಆಶ್ರಯ ಒದಗಿಸಿದ್ದಾರೆ.