ರ‍್ಯಾಂಕ್ ಮೂಲಕವೇ ಮನೆಮಾತಾದ ಎಕ್ಸಲಂಟ್ ಸಂಸ್ಥೆ

| Published : May 30 2025, 12:05 AM IST

ಸಾರಾಂಶ

ಮಕ್ಕಳು ಸಾಧನೆಯ ಪಥದಲ್ಲಿ ಹೆಜ್ಜೆ ಹಾಕಲೆಂದೇ ನಿರ್ಮಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಇಂದು ರ‍್ಯಾಂಕ್‌ಗಳ ಮೇಲೆ ರ‍್ಯಾಂಕ್ ನೀಡುವುದರ ಮೂಲಕ ನಾಡಿನ ಮನೆಮಾತಾಗಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಬಸವರಾಜ ಕೌಲಗಿಯವರು ಕಟ್ಟಿದ ಜ್ಞಾನ ಗುಮ್ಮಟವು ಮಕ್ಕಳ ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತಿದೆ. ಮಕ್ಕಳಲ್ಲಿನ ಜ್ಞಾನದ ಭಂಡಾರವನ್ನು ಹೊರಗೆಳೆದು ನಾಡಿಗೆ ನೀಡುತ್ತಿದೆ. ಮಕ್ಕಳು ಸಾಧನೆಯ ಪಥದಲ್ಲಿ ಹೆಜ್ಜೆ ಹಾಕಲೆಂದೇ ನಿರ್ಮಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಇಂದು ರ‍್ಯಾಂಕ್‌ಗಳ ಮೇಲೆ ರ‍್ಯಾಂಕ್ ನೀಡುವುದರ ಮೂಲಕ ನಾಡಿನ ಮನೆಮಾತಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್ ವತಿಯಿಂದ ಆಯೋಜಿಸಲಾಗಿದ್ದ ಸೈನಿಕ, ನವೋದಯ, ಕಿತ್ತೂರು ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಗಳ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಕ್ಸಲಂಟ್ ಶಿಕ್ಷಣ ಸಂಸ್ಥೆಯೂ ಸಂಸ್ಕಾರಯುತ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಮೌಲ್ಯ ಬಿತ್ತುವ ಕಾರ್ಯ ಮಾಡುತ್ತಿದೆ. ಗುಣಮಟ್ಟದ ಶಿಕ್ಷಣದ ಮೂಲಕವಾಗಿಯೇ ತಮ್ಮತನವನ್ನು ಸಂಸ್ಥೆ ಸಾಬೀತು ಮಾಡಿದೆ. ಹೀಗಾಗಿಯೇ ರಾಜ್ಯದ ಮೂಲೆ ಮೂಲೆಗಳಿಂದ ಪಾಲಕರು ತಮ್ಮ ಮಕ್ಕಳನ್ನು ತರಬೇತಿಗಾಗಿ ಇಲ್ಲಿಗೆ ಕರೆತರುತ್ತಾರೆ. ಪಾಲಕರರ ನಿರೀಕ್ಷೆಯಂತೆ ಎಕ್ಸಲಂಟ್ ಸಂಸ್ಥೆ ಪ್ರತಿವರ್ಷವೂ ಅತ್ಯುತ್ತಮವಾದ ಫಲಿತಾಂಶವನ್ನು ನೀಡುತ್ತಿದೆ. ಈ ಬಾರಿಯಂತೂ ಯಾರೂ ಕೂಡ ಊಹಿಸದ ರೀತಿಯಲ್ಲಿ ಫಲಿತಾಂಶ ನೀಡಿದ್ದು ಮನಸ್ಸಿಗೆ ಖುಷಿ ನೀಡುತ್ತಿದೆ. ಒಂದೇ ವೇದಿಕೆ ಮೇಲೆ ನೂರಾರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುತ್ತಿರುವುದು ನನ್ನ ಬದುಕಿನಲ್ಲಿ ಇದೇ ಮೊದಲು. ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷನಾಗಿ ನಾನು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದು ನನ್ನ ಪುಣ್ಯ ಎಂದು ಹರ್ಷ ವ್ಯಕ್ತ ಪಡಿಸಿದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ಪ್ರತಿಬಾರಿಯೂ ಉತ್ತಮವಾದ ಫಲಿತಾಂಶವನ್ನು ಒದಗಿಸುವಲ್ಲಿ ಸಫಲವಾಗಿರುವ ನಮ್ಮ ಸಂಸ್ಥೆಯು ಈ ಬಾರಿ ಸೈನಿಕ, ನವೋದಯ, ಕಿತ್ತೂರು ಹಾಗೂ ರಾಷ್ಟ್ರೀಯ ಮಿಲಿಟರಿ ಶಾಲೆಗಳ ಪರೀಕ್ಷೆಯಲ್ಲಿ ಅದ್ಭುತ ಫಲಿತಾಂಶ ನೀಡಿದೆ. ಅದರಲ್ಲೂ ಸೈನಿಕ ಶಾಲೆಯ ಪರೀಕ್ಷೆಯಲ್ಲಿ ರಾಜ್ಯದ ಟಾಪ್ ಹತ್ತು ರ‍್ಯಾಂಕ್‌ಗಳಲ್ಲಿ ನಮ್ಮ ನಾಲ್ಕು ವಿದ್ಯಾರ್ಥಿಗಳಿರುವುದು ನಮ್ಮ ಸಂಸ್ಥೆಯ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಎಕ್ಸಲಂಟ್ ವಿಜ್ಞಾನ ಕಾಲೇಜಿನಲ್ಲೂ ರಾಜ್ಯಕ್ಕೆ ನಾಲ್ಕು ರ‍್ಯಾಂಕ್ ದೊರೆತಿದೆ ಎಂದರು.ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯು ಈ ವರ್ಷ ರ‍್ಯಾಂಕ್‌ಗಳ ಹಬ್ಬದ ವಾತಾವರಣವನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದಕ್ಕೆ ಸಿದ್ಧರಾಗಿದ್ದು, ನಮ್ಮ ಬೋಧಕವರ್ಗ ಇನ್ನೂ ಹೆಚ್ಚಿನ ರ‍್ಯಾಂಕ್‌ಗಳನ್ನು ನೀಡುವುದಕ್ಕೆ ಕಟಿಬದ್ಧವಾಗಿ ನಿಂತಿದೆ. ನಮ್ಮ ಮೇಲೆ ಭರವಸೆ ಇಟ್ಟು ತರಬೇತಿಗೆ ಕಳುಹಿಸುವ ಪಾಲಕರಿಗೂ ಸಹ ನಾವು ಚಿರಋಣಿ ಎಂದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಸದಸ್ಯ ರಾಜಶೇಖರ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಡೀ ವರ್ಷಗಳ ವರೆಗೂ ನಡೆದ ಪರೀಕ್ಷೆಗಳಲ್ಲಿ ಸಂಸ್ಥೆಯು ಪಡೆದುಕೊಂಡ ಫಲಿತಾಂಶದ ಸಮಗ್ರ ಮಾಹಿತಿ ನೀಡಿದರು. ಎಚ್‌ಎಂಟಿ ನಿವೃತ್ತ ಅಧ್ಯಕ್ಷ ಪಿ.ಎಸ್.ಬಗಲಿ, ನಿವೃತ್ತ ಸೇನಾಧಿಕಾರಿ ಪಿ.ಎಸ್.ಚವ್ಹಾಣ, ಆರ್‌ಕೆಎಂ ಆಸ್ಪತ್ರೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಸವರಾಜ ಮೊಹಿತೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಎಕ್ಸಲಂಟ್ ಕೋಚಿಂಗ್ ವಿಭಾಗದ ಆಢಳಿತಾಧಿಕಾರಿ ಉಮಾ ಶಾಬಾದಿ, ಕಲ್ಯಾಣರಾವ ಕುಲಕರ್ಣಿ, ವಿಶ್ವಕರ್ಮ ದೊಡ್ಡಪತ್ತಾರ, ಶೈಕ್ಷಣಿಕ ಸಂಯೋಜಕ ಮುರುಗೇಶ ಹಗದಪ್ಪನವರ, ವಿವೇಕಾನಂದ ಪೊದ್ದಾರ, ಹೇಮಂತ ನಾಯಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

₹1 ಲಕ್ಷ ಬಹುಮಾನ ವಿತರಣೆ

ಗಣಿತ, ಐಕ್ಯೂ, ಸಾಮಾನ್ಯಜ್ಞಾನ ವಿಷಯಗಳಲ್ಲಿ ನೂರು ಪ್ರತಿಷತ ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಒಂದು ಲಕ್ಷ ರುಪಾಯಿಗಳ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗೆ ಸನ್ಮಾನ

ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 80 ವಿದ್ಯಾರ್ಥಿಗಳು ಸೇರಿದಂತೆ ಆರ್‌ಎಂಎಸ್, ನವೋದಯ, ಕಿತ್ತೂರು ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ 120 ಬೋಧಕ ಹಾಗೂ 50ಜನ ಬೋಧಕೇತರ ಸಿಬ್ಬಂದಿ ಸನ್ಮಾನಿಸಲಾಯಿತು.