೯ಕೆಎಂಎನ್ಡಿ-೫ಚಿತ್ರದುರ್ಗದಿಂದ ನೀರನ್ನು ತಂದು ವಿಜಯಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡರು. | Kannada Prabha
Image Credit: KP
ಚಿತ್ರದುರ್ಗದಿಂದ ನೀರು ತಂದು ವಿನೂತನ ಪ್ರತಿಭಟನೆ
- ಜಿಲ್ಲಾಡಳಿತಕ್ಕೆ ನೀರು, ಟಿಶ್ಯೂ ಪೇಪರ್ ಕೊಟ್ಟು ಸಿಎಂಗೆ ರವಾನಿಸಲು ಮನವಿ - ಲೇಖಕ ಪ್ರಸನ್ನಕುಮಾರ್, ನೀರಾವರಿ ತಜ್ಞ ಕ್ಯಾ.ರಾಜಾರಾವ್ರಿಂದ ಬೆಂಬಲ ಕನ್ನಡಪ್ರಭ ವಾರ್ತೆ ಮಂಡ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಗರದ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ಮುಂದುವರೆದಿದೆ. ಸೋಮವಾರ ಧರಣಿಯಲ್ಲಿ ಲೇಖಕ ಅರ್ಜುನಹಳ್ಳಿ ಪ್ರಸನ್ನಕುಮಾರ್, ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಪಾಲ್ಗೊಂಡು ಬೆಂಬಲ ಸೂಚಿಸಿದರು. ಧರಣಿಯಲ್ಲಿ ಪಾಲ್ಗೊಂಡಿದ್ದ ಲೇಖಕ ಅರ್ಜುನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ರಾಷ್ಟ್ರಪತಿಗಳಿಗೆ ನ್ಯಾಯ ಕೋರುವ ಸಂವಿಧಾನಬದ್ಧ ಅವಕಾಶ ಇದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಕಾವೇರಿ ಅಂತಿಮ ತೀರ್ಪನ್ನು ಒಪ್ಪಿಕೊಂಡಿರುವುದರಿಂದ ಸಂವಿಧಾನಬದ್ಧವಾಗಿ ಇರುವ ಅವಕಾಶ ಬಳಕೆ ಮಾಡಿಕೊಳ್ಳಲು ಮುಂದಾಗಬೇಕಾಗಿದೆ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಅಂತರ್ಗತ ಅಧಿಕಾರವಿದ್ದು ವಿವೇಚನೆ ಬಳಸಿ ಕಾವೇರಿ ಸಮಸ್ಯೆ ಕುರಿತ ಅರ್ಜಿ ಸ್ವೀಕರಿಸಿ ವಿಚಾರಣೆ ಮಾಡುವಂತೆ ಕೋರಬಹುದಾಗಿದೆ ಎಂದರು. ಅದೇ ರೀತಿ ರಾಷ್ಟ್ರಪತಿಯವರಿಗೆ ವಿಶೇಷ ಅಧಿಕಾರ ಇದ್ದು, ಅವರಿಗೆ ನ್ಯಾಯ ಕೋರಿದರೆ ಕಾವೇರಿ ವಿವಾದ ಸಂಬಂಧ ನಾಲ್ಕು ರಾಜ್ಯಗಳ ಪ್ರದೇಶದಲ್ಲಿ ಅಧ್ಯಯನ ಮಾಡಲು ಸಮಿತಿ ರಚಿಸಿದರೆ.ಸಮಿತಿಯ ವರದಿ ಆಧಾರದ ಮೇಲೆ ತೀರ್ಮಾನ ಮಾಡುವ ಅವಕಾಶವಿದೆ ಎಂದರು. ಕಾವೇರಿ ನೀರು ಹಂಚಿಕೆ ಸಂಬಂಧ ರಾಜ್ಯಗಳ ನಡುವೆ ವಿವಾದ ಇರುವುದರಿಂದ ಯಾವುದೇ ವ್ಯಕ್ತಿ,ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಮಾಡಿರುವುದರಿಂದ ಯಾರೇ ಅರ್ಜಿ ಸಲ್ಲಿಸಿದರೂ ವಜಾಆಗಲಿದೆ, ಹಾಗಾಗಿ ಸರ್ಕಾರವೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು, ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಬೇಕು ಎಂದರು. ಧರಣಿಯಲ್ಲಿ ಪ್ರೊ.ಬಿ.ಶಿವಲಿಂಗಯ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಅಂಬುಜಮ್ಮ, ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್ ಮತ್ತಿರರಿದ್ದರು. ಚಿತ್ರದುರ್ಗದ ವಿಜಯಸೇನೆ ಕಾರ್ಯಕರ್ತರು ಅಲ್ಲಿಂದ ನೀರು ತಂದು ವಿನೂತನ ಪ್ರತಿಭಟನೆ ನೀಡಿದರು. ನೀರು ಮತ್ತು ಟಿಶ್ಯೂ ಪೇಪರ್ನ್ನು ಜಿಲ್ಲಾಡಳಿಕ್ಕೆ ನೀಡಿ ಮುಖ್ಯಮಂತ್ರಿ ಅವರಿಗೆ ರವಾನಿಸುವಂತೆ ಮನವಿ ಸಲ್ಲಿಸಿದರು. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿದ್ದರೆ ಜಿಲ್ಲೆಯೊಳಗೆ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗಲಿದೆ. ಮುಂದೆ ಟಿಶ್ಯು ಪೇಪರ್ ಬಳಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಎಚ್ಚೆತ್ತುಕೊಂಡು ನೀರಿನ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವಂತೆ ಆಗ್ರಹಪಡಿಸಿದರು. ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ವಿಶ್ವ ನಾರಾಯಣಮೂರ್ತಿ, ಪ್ರದೀಪ್, ಅಖಿಲೇಶ್, ಜಿ.ಧ್ರುವಕುಮಾರ್, ಎಸ್.ಮಂಜುನಾಥ, ಸಾಯಿಕುಮಾರ್, ಟಿ.ಹರ್ಷ, ಅಭಿಷೇಕ್, ಡಿ.ಅವಿನಾಶ್, ರವೀಂದ್ರ, ಚಂದನ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.