ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮಾರಿಗುಡಿಯಲ್ಲಿ ಎರಡು ದಿನಗಳ ಪ್ರಸಿದ್ಧ ಮಾರಿ ಜಾತ್ರೆ ಆರಂಭಗೊಡಿದ್ದು, ಮೊದಲ ದಿನ ಮಾರಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ.

ಇಂದು ಜಾಲಿಕೋಡಿ ಸಮುದ್ರದಲ್ಲಿ ಮೂರ್ತಿ ವಿಸರ್ಜನೆ: ಎಲ್ಲೆಡೆ ಬಿಗಿ ಬಂದೋಬಸ್ತ್‌ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮಾರಿಗುಡಿಯಲ್ಲಿ ಎರಡು ದಿನಗಳ ಪ್ರಸಿದ್ಧ ಮಾರಿ ಜಾತ್ರೆ ಆರಂಭಗೊಡಿದ್ದು, ಮೊದಲ ದಿನ ಮಾರಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿದೆ.

ಮಣ್ಕುಳಿಯ ಮಾರುತಿ ಆಚಾರ್ಯ ಮನೆಯಲ್ಲಿ ಅದ್ಧೂರಿಯ ಪೂಜೆ, ಪುನಸ್ಕಾರ ನಡೆದ ಬಳಿಕ ಬುಧವಾರ ಬೆಳಗ್ಗೆ 5.45ಕ್ಕೆ ಮೆರವಣಿಗೆಯ ಮೂಲಕ ಮಾರಿ ಉತ್ಸವ ಮೂರ್ತಿಯನ್ನು ತಂದು ಮಾರಿಗುಡಿಯಲ್ಲಿ ಹಿಂದಿನ ಸಂಪ್ರದಾಯ ಮತ್ತು ಧಾರ್ಮಿಕ ವಿಧಿವಿಧಾನಗಳಂತೆ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಮಾರಿಗುಡಿಯಲ್ಲಿ ವಿರಾಜಮಾನವಾದ ಮಾರಿಗೆ ಜೈನರಿಂದ ಪ್ರಥಮ ಪೂಜೆ ಸಲ್ಲಿಸಲಾಯಿತು. ನಂತರ ಸಾವಿರಾರು ಭಕ್ತರು ಮಾರಿಯ ದರ್ಶನ ಪಡೆದು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಹೂವು, ಹಣ್ಣು, ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದ ಸೇವೆ ಒಪ್ಪಿಸಿದರು. ಮಾರಿಮೂರ್ತಿಯನ್ನು ಮೆರವಣಿಗೆಯಲ್ಲಿ ಗದ್ದುಗೆಗೆ ತರುವ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀಪಾದ ಕಂಚುಗಾರ ಸೇರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಲವು ಮುಖಂಡರು, ಭಕ್ತರಿದ್ದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸೇರಿದಂತೆ ಸ್ಥಳೀಯ ಹಲವು ಗಣ್ಯರು ಮಾರಿಕಾಂಬೆಯ ದರ್ಶನ ಪಡೆದರು. ಮಾರಿಹಬ್ಬದ ಮೊದಲ ದಿನ ಗ್ರಾಮಾಂತರ ಭಾಗದವರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿದರೆ, ಎರಡನೇ ದಿನವಾದ ಇಂದು ಪಟ್ಟಣದವರು ಹಬ್ಬ ಆಚರಿಸುತ್ತಾರೆ. ಜಾತ್ರೆಯ ಎರಡನೇ ದಿನವಾದ ಗುರುವಾರ ಮಧ್ಯಾಹ್ನ ೪.೩೦ರ ಸುಮಾರಿಗೆ ಮಾರಿಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಿ ಪಟ್ಟಣದಿಂದ ೮ ಕಿಮೀ ದೂರದ ಜಾಲಿಕೋಡಿ ಸಮುದ್ರಕ್ಕೆ ಮಾರಿ ಮೂರ್ತಿಯನ್ನು ಸಾವಿರಾರು ಭಕ್ತರ ಬೃಹತ್ ಮೆರವಣಿಗೆಯಲ್ಲಿ ಹೊತ್ತೊಯ್ದು ವಿಜಸರ್ಜನೆ ಮಾಡುತ್ತಾರೆ. ಈ ಸಲ ಸಮುದ್ರ ತೀರದಲ್ಲಿ ಮಾರಿ ವಿಸರ್ಜನೆಯ ಅಂತಿಮ ವಿಧಿ ವಿಧಾನದ ಯಾವುದೇ ರೀತಿಯ ಫೋಟೋ, ವೀಡಿಯೊ ಅಥವಾ ಇತರೆ ಚಿತ್ರಿಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಬಾರಿ ಹೊಸ ಆಡಳಿತ ಮಂಡಳಿಯವರು ಮಾರಿ ಜಾತ್ರೆಯಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿ ಭಕ್ತರಿಗೆ ತ್ವರಿತವಾಗಿ ದೇವಿಯ ದರ್ಶನ ಮತ್ತು ಪೂಜೆಗೆ ಅವಕಾಶ ಕಲ್ಪಿಸಿದರು. ಮಾರಿ ಜಾತ್ರೆಯ ಪ್ರಯುಕ್ತ ಭಟ್ಕಳ ಪಟ್ಟಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಬಂದೋಬಸ್ತ್‌ಗೆ ಹೊರಗಿನ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗಳನ್ನು ಕರೆಯಿಸಲಾಗಿದ್ದು, ಎಲ್ಲೆಡೆ ತೀವ್ರ ನಿಗಾ ಇಡಲಾಗಿದೆ.