ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಮಹಾ ಕುಂಭಮೇಳ 144 ವರ್ಷಗಳಿಗೊಮ್ಮೆ ಬರುತ್ತಿದ್ದು, ಇದರಲ್ಲಿ ಪಾಲ್ಗೊಳ್ಳಲು ಭಗವಂತನ ಕೃಪೆ ದೊರೆತ್ತಿತದ್ದೇ ಪವಾಡಸದೃಶ ಅನುಭವ. ಮೌನಿ ಅಮವಾಸ್ಯೆಯ ದಿನವೂ ಸೇರಿದಂತೆ ಸತತ ೫ ದಿನಗಳ ಕಾಲ ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ಪವಿತ್ರ ತೀರ್ಥ ಸ್ನಾನ ಮಾಡುವ ಸೌಭಾಗ್ಯ ದೊರಕಿದ ಬಳಿಕ ಬದುಕಿನಲ್ಲಿ ವರ್ಣಾನಾತೀತ ಅನುಭವವನ್ನು ಪಡೆದೆವು. ಅಸಂಖ್ಯ ಭಕ್ತಗಣವನ್ನು ನಿಭಾಯಿಸುತ್ತಿದ್ದ ಅಲ್ಲಿನ ವ್ಯವಸ್ಥೆ, ಸ್ವಚ್ಛತೆ ಮತ್ತು ಸುರಕ್ಷತೆಗೆ ನೀಡುತ್ತಿದ್ದ ಆದ್ಯತೆ ಶ್ಲಾಘನೀಯ...ಇದು ಪ್ರಯಾಗ್ರಾಜ್ ಕುಂಭುಮೇಳಕ್ಕೆ ತೆರಳಿದ ಉಪ್ಪಿನಂಗಡಿ ಪರಿಸರದ ಯಾತ್ರಿಗಳ ತಂಡದ ಸಾಕ್ಷಾತ್ ಅನುಭವ.
ಉಪ್ಪಿನಂಗಡಿಯ ಕೃಷ್ಣ ಶೆಣೈ, ಉದ್ಯಮಿಗಳಾದ ವಸಂತ ಕುಮಾರ್ ಎಂ.ಪಿ., ಶೀನಪ್ಪ ಗೌಡ ನೂಜಿಬಾಳ್ತಿಲ, ಪ್ರಸನ್ನ ನಾಯ್ಕ್ ಕೊಕ್ಕಡ, ಗೌತಮ್ ಭಟ್ ಉಪ್ಪಿನಂಗಡಿ, ಧರ್ಮಸ್ಥಳದ ಅರ್ಚಕ ಶಿವಪ್ರಸಾದ್ ಭಟ್ ಕೊಕ್ಕಡ, ಉದಯ ಗೌಡ ಚಾರ್ಮಾಡಿ ಅರವರನ್ನು ಒಳಗೊಂಡ ೮ ಮಂದಿಯ ತಂಡ ಕುಂಭಮೇಳದಲ್ಲಿ ಐದು ದಿನಗಳ ಕಾಲ ಪಾಲ್ಗೊಂಡಿತ್ತು. ತಂಡದ ಕಾರ್ತಿಕ್ ‘ಕನ್ನಡಪ್ರಭ’ದೊಂದಿಗೆ ಅನುಭವ ಹಂಚಿಕೊಂಡದ್ದು ಹೀಗೆ...:ಮಹಾ ಕುಂಭಮೇಳಕ್ಕೆ ಹೋಗುವ ಕನಸಿತ್ತು. ಅದೊಂದು ದಿನ ಆಧ್ಯಾತ್ಮಿಕ ಸಾಧಕ ಕೃಷ್ಣ ಶೆಣೈ ಗುರೂಜಿ ಪೋನಾಯಿಸಿ ನಾಲ್ಕು ಸಾವಿರಕ್ಕೆ ವಿಮಾನ ಟಿಕೆಟ್ ಲಭಿಸಿದೆ ಎಂದಾಗ ನಂಬಲಾಗಲಿಲ್ಲ. ತಂಡದ ೫ ಮಂದಿ ವಿಮಾನದಲ್ಲಿ ಪ್ರಯಾಣಿಸಿದೆವು. ಉಳಿದ ಮೂವರು ರೈಲಿನಲ್ಲಿ ಬಂದು ಸೇರಿದರು. ಜ.೨೩ ರಂದು ಕಾಶಿ ಕ್ಷೇತ್ರ ಸಂದರ್ಶನ ಮಾಡಿ, ೨೪ ರಂದು ಅಯೋಧ್ಯಾ ನಗರಿ ಸಂದರ್ಶಿಸಿದೆವು. ೨೫ ರಿಂದ ೩೦ರ ವರೆಗೆ ಪ್ರಯಾಗದಲ್ಲಿ ಠಿಕಾಣಿ ಹೂಡಿ ವಿವಿಧ ಅಖಾಡಗಳನ್ನು ಸಂದರ್ಶಿಸಿದೆವು.
ಒಟ್ಟು ಅವಧಿಯಲ್ಲಿ ಮೂರು ದಿನಗಳಲ್ಲಿ ಮಾತ್ರ ವಿವಿಧ ಅಖಾಡಗಳ ಸಾಧು ಸಂತರು ತ್ರಿವೇಣಿ ಸಂಗಮ ಸ್ಥಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ನಾನ ಮಾಡುವ ಅವಕಾಶ ಇದ್ದರೆ ಉಳಿದೆಲ್ಲಾ ದಿನಗಳಲ್ಲಿ ಈ ಸ್ಥಳಗಳಲ್ಲಿ ಸಾಮಾನ್ಯ ಜನರಿಗೆ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜ.೨೯ ರಂದು ಮೌನಿ ಅಮವಾಸ್ಯೆಯ ದಿನ ಸಂಭವಿಸಿದ ಕಾಲ್ತುಳಿತದ ಸಮಯದಲ್ಲಿ ನಾವು ಅಲ್ಲೇ ಇದ್ದರೂ ನಾವಿದ್ದ ಸ್ಥಳದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಅಲ್ಲಿನ ವ್ಯವಸ್ಥೆ ಉಲ್ಲಂಘಿಸಿದ ಕಾರಣಕ್ಕೆ ಆ ದುರ್ಘಟನೆ ಸಂಭವಿಸಿತ್ತು. ಆದರೆ ತಕ್ಷಣದ ವ್ಯವಸ್ಥಿತ ಕಾರ್ಯಾಚರಣೆಯ ಮೂಲಕ ಪರಿಸ್ಥಿತಿ ಸಹಜ ಸ್ಥಿತಿಗೆ ತರಲಾಯಿತು.ಈ ಘಟನೆಯ ಬೆನ್ನಲ್ಲೇ ಸಾಧು ಸಂತರು ಅಖಾಡದ ಮೂಲಕ ತಾವು ಕೈಗೊಳ್ಳಬೇಕಾದ ಪವಿತ್ರ ಸ್ನಾನ ತಡೆಹಿಡಿದು ಪರಿಸ್ಥಿತಿ ನಿಯಂತ್ರಿಸಲು ಆಡಳಿತದೊಂದಿಗೆ ಸಹಕರಿಸಿದ್ದರು.
ಜೀವ ರಕ್ಷಣೆಗೆ ಒತ್ತು:ಮೌನಿ ಅಮವಾಸ್ಯೆಯ ದಿನದ ಪವಿತ್ರ ತೀರ್ಥ ಸ್ನಾನಕ್ಕಾಗಿ ಪ್ರತಿ ಅಖಾಡದಲ್ಲಿ ಭಾರಿ ಸಿದ್ಧತೆ ಮಾಡಲಾಗಿತ್ತು. ಆ ಎಲ್ಲಾ ಸಿದ್ಧತೆ ಬದಿಗೊತ್ತಿ ಜನ ಸಾಮಾನ್ಯರ ಜೀವ ರಕ್ಷಣೆಗೆ ಸಾಧುಗಳು ನೀಡಿದ ಒತ್ತು ಅವರ ಮೇಲಿನ ಭಕ್ತಿ ಗೌರವವನ್ನು ಇಮ್ಮಡಿಗೊಳಿಸಿತು.
ಮೌನಿ ಅಮವಾಸ್ಯೆ ದಿನದ ಕಾಲ್ತುಳಿತದಿಂದ ಒಂದಷ್ಟು ಮಂದಿಯ ಸಾವು ನಿಜ. ಈ ಮಧ್ಯೆ ‘ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಅವರ ಬಟ್ಟೆ ಬರೆ, ಚಪ್ಪಲಿಗಳು ಗುರುತುಪತ್ರಗಳು ಅನಾಥವಾಗಿದೆ’ ಎಂಬೆಲ್ಲಾ ಸಚಿತ್ರ ವರದಿಗಳ ಸತ್ಯಾಸತ್ಯತೆ ಏನು ಎಂದು ಪ್ರಶ್ನಿಸಿದಾಗ ಸಿಕ್ಕಿದ ಉತ್ತರ ಇದು...‘ಕುಂಭಮೇಳದಲ್ಲಿ ಭಾಗವಹಿಸುವವರ ಏಕೈಕ ಉದ್ದೇಶ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ. ಸ್ನಾನ ಮಾಡುವಾಗ ತಮ್ಮ ಬಟ್ಟೆ ಬರೆಗಳನ್ನು ಚಪ್ಪಲಿಗಳನ್ನು ಗುರುತು ಪತ್ರಗಳನ್ನು ದಡದಲ್ಲಿರಿಸಿ ನೀರಿಗಿಳಿಯುತ್ತಾರೆ. ಸ್ನಾನ ಮಾಡಿ ಮೇಲೆ ಬರುವಾಗ ಜನಜಂಗುಳಿಯಲ್ಲಿ ತಾವಿರಿಸಿದ ಸ್ಥಳದ ನೆಲೆ ಯಾವುದೆಂದು ತಿಳಿಯದೆ ಅದೆಲ್ಲವನ್ನೂ ಅಲ್ಲೆ ಬಿಟ್ಟು ಸಾಗುತ್ತಾರೆ. ಅಂತಹ ವಸ್ತುಗಳನ್ನು ಮುಂದಿರಿಸಿ ಕೆಲವು ಮಂದಿ ಸಾವಿರಾರು ಜನರು ನಾಪತ್ತೆಯಾಗಿದ್ದಾರೆಂದು ಸುಳ್ಳು ಸುದ್ದಿ ಬಿತ್ತರಿಸುತ್ತಿದಾರೆ ಹೊರತು ಅಲ್ಲಿನ ವ್ಯವಸ್ಥೆ, ಭೋಜನ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಸುರಕ್ಷಾ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವ್ಯವಸ್ಥೆ ಎಲ್ಲವೂ ಅದ್ಭುತ ಎಂದೇ ವಿವರಿಸಬೇಕಾಗುತ್ತದೆ’.
ಎಲ್ಲವೂ ಅಚ್ಚುಕಟ್ಟು:ನಾವಿದ್ದ ಐದು ದಿನಗಳಲ್ಲಿ ಒಬ್ಬನೇ ಒಬ್ಬ ಪೊಲೀಸ್ ಲಾಠಿ ಹೊಂದಿರುವುದು ಕಾಣಿಸಲಿಲ್ಲ. ಕೈಯಲ್ಲಿ ವೈಯರ್ಲೆಸ್ ಸೆಟ್ ಮತ್ತು ದ್ವನಿ ವರ್ಧಕದ ಸಾಧನ ಮಾತ್ರವೇ ಅವರ ಕೈಯಲ್ಲಿರುವುದನ್ನು ಕಂಡಿದ್ದೆವು. ಕೇವಲ ವಿನಂತಿ ಮಾತ್ರದಿಂದಲೇ ಅಷ್ಟು ಸಂಖ್ಯೆಯ ಭಕ್ತ ಸಮೂಹ ನಿಯಂತ್ರಿಸುತ್ತಿದ್ದದ್ದು ಆಶ್ಚರ್ಯವನ್ನು ಮೂಡಿಸಿತ್ತು. ರೈಲ್ವೆ ನಿಲ್ದಾಣದಲ್ಲಿ ಕೂಡಾ ಆತ್ಮೀಯವಾದ ಸುರಕ್ಷತಾ ನೀತಿಯನ್ನು ಅಳವಡಿಸಿದ್ದು ಕಂಡು ಬಂದಿತ್ತು. ಜನ ಮತ್ತು ವಾಹನ ನಿಯಂತ್ರಿಸುವ ನಿಟ್ಟಿನಲ್ಲಿ ಒಂದೊಂದು ಬಾರಿ ಕಿ.ಮೀ. ಗಟ್ಟಲೆ ನಡೆಯಬೇಕಾಗಿ ಬರುತ್ತಿತ್ತು. ಪ್ರಯಾಗದಲ್ಲಿನ ಐದು ದಿನಗಳಲ್ಲಿ ನಮ್ಮ ಆ ಪರಿಸರದ ನಡಿಗೆ ನೂರು ಕಿ.ಮೀ. ದೂರ ದಾಟಿತ್ತು ಎಂದು ಕಾರ್ತಿಕ್ ವಿವರಿಸಿದರು.