ಯಲಬುರ್ಗಾ: ತಳಮಟ್ಟದ ಸಂಘಟನೆ, ಶಿಸ್ತು ಹಾಗೂ ತತ್ವನಿಷ್ಠ ಕಾರ್ಯಕರ್ತರ ಪಡೆ ಇದ್ದುದಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಬಲವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಎಲ್ಎ-2 ವಿಸ್ತೃತ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಕ್ಷದ ತತ್ವ–ಸಿದ್ಧಾಂತವನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡು, ಸಂಘಟನಾ ಕಾರ್ಯಕ್ಕೆ ಕೈಜೋಡಿಸುವ ಕಾರ್ಯಕರ್ತರ ಸೇವೆ ದೊಡ್ಡದು. ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆಯನ್ನು ಗಟ್ಟಿಗೊಳಿಸುವುದು ದೀರ್ಘಕಾಲಿನ ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ. ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ, ಹೊಸ ಮತದಾರರ ನೋಂದಣಿ, ಸರ್ಕಾರದ ಸಾಧನೆಗಳ ಪ್ರಚಾರ ಹಾಗೂ ಜನಸಂಪರ್ಕ ಚಟುವಟಿಕೆ ತೀವ್ರಗೊಳಿಸಬೇಕು ಎಂದು ಸಲಹೆ ನೀಡಿದರು.ಪಕ್ಷದ ಬಲ ಕಾರ್ಯಕರ್ತರಲ್ಲಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಬೂತ್ ವ್ಯಾಪ್ತಿಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿದೆ. ಕಾರ್ಯಕರ್ತರ ತ್ಯಾಗ ಮತ್ತು ಶ್ರಮವನ್ನು ಎಂದಿಗೂ ಮರೆಯಲಾಗದು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಮಹೇಶ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಶ್ರಮ ಗುರುತಿಸಿ ಪ್ರೋತ್ಸಾಹಿಸುವ ಪಕ್ಷವಾಗಿದೆ. ಬೂತ್ ಮಟ್ಟದ ಕಾರ್ಯಪದ್ಧತಿ ಗಟ್ಟಿಯಾಗಿದ್ದರೆ ಮಾತ್ರ ಚುನಾವಣಾ ಯಶಸ್ಸು ಸಾಧ್ಯ. ಪ್ರತಿಯೊಬ್ಬ ಬಿಎಲ್ಎ-2 ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.ಬಿಜೆಪಿ ಮುಖಂಡರಾದ ಸಂತೋಷ ರಾಜಗುರು, ಸುನೀಲ ಹೆಸರೂರು ಕಾರ್ಯಾಗಾರದ ಉದ್ದೇಶವನ್ನು ವಿವರಿಸಿ, ಸಂಘಟನಾ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.ಪ್ರಮುಖರಾದ ಬಸಲಿಂಗಪ್ಪ ಭೂತೆ, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಶಿವಶಂಕರ ದೇಸಾಯಿ, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ, ಅಮರೇಶ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರಮಠ, ಶಿವಲೀಲಾ ದಳವಾಯಿ, ಸಂತೋಷಿಮಾ ಜೋಶಿ, ಶಿವಪ್ಪ ವಾದಿ, ಶರಣಪ್ಪ ಬಣ್ಣದಬಾವಿ, ಮಂಜುನಾಥ ನಾಡಗೌಡ್ರ, ಫಕೀರಪ್ಪ ತಳವಾರ್, ಗಾಳೆಪ್ಪ ಓಜನಹಳ್ಳಿ ಇದ್ದರು.
ಬಿಜೆಪಿ ತತ್ವಾಧಾರಿತ ರಾಜಕೀಯಕ್ಕೆ ಒತ್ತು ನೀಡುವ ಪಕ್ಷವಾಗಿದೆ. ಶಿಸ್ತಿನ ಸಂಘಟನೆ, ಸಮಯಪಾಲನೆ ಹಾಗೂ ಕಾರ್ಯಕರ್ತರ ಏಕತೆಯೇ ಪಕ್ಷದ ವೈಶಿಷ್ಟ್ಯ. ಮತದಾರರ ಪಟ್ಟಿಯಲ್ಲಿ ಯಾವುದೇ ದೋಷವಿಲ್ಲದಂತೆ ಪರಿಶೀಲನೆ ನಡೆಸುವುದು ಬಿಎಲ್ಎ-2ಗಳ ಮುಖ್ಯ ಕರ್ತವ್ಯವಾಗಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೌರಾ ಬಸವರಾಜ ಹೇಳಿದರು.