ಸಾರಾಂಶ
ಆನಂದಪುರ: ಮುಂದಿನ ಎರಡು ವರ್ಷಗಳಲ್ಲಿ ಆನಂದಪುರ ಕೆಪಿಎಸ್ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಅಭಿವೃದ್ಧಿ ಮಾಡಲಾಗುವುದು ಎಂದು ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ರೇಕ್ಯೋ ಸಂಸ್ಥೆಯ ಸಿಒ ಪ್ರಕಾಶ್ ರುಕ್ಮಯ್ಯ ಹೇಳಿದರು.
ನಗರದ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾರ್ಯ, ವನಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಓದಿದಂತಹ ಶಾಲೆಯ ಅಭಿವೃದ್ಧಗೆ ಗಮನಹರಿಸಬೇಕು. ಆನಂದಪುರ ಕೆಪಿಎಸ್ ಶಾಲೆಯ ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯ ಅಡಿ ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.
ರೇಕ್ಯೋ ಸಂಸ್ಥೆಯಿಂದ ಈಗಾಗಲೇ 1 ಕೋಟಿ 60 ಲಕ್ಷ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಮಕ್ಕಳಿಗೆ ಉತ್ತಮ ಜ್ಞಾನ ಪಡೆಯಲು ಹೈಟೆಕ್ ಗ್ರಂಥಾಲಯ, ಪ್ರಯೋಗಾಲಯ, ಹೈಟೆಕ್ ಶೌಚಾಲಯ, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯವಾಗಲಿದೆ. ಶಾಲೆಯ ಪ್ರತಿಯೊಂದು ಕೊಠಡಿಗೂ ಸ್ಮಾರ್ಟ್ ಬೋರ್ಡ್ ಅಳವಡಿಸಲಾಗಿದೆ. ಆನಂದಪುರ ಕೆಪಿಎಸ್ ಶಾಲೆ ರಾಜ್ಯಕ್ಕೆ ಮಾದರಿ ಶಾಲೆಯಾಗಲಿದೆ ಎಂದರು.ವಿದ್ಯಾರ್ಥಿಗಳ ಶೈಕ್ಷಣ ಪ್ರಗತಿಗೆ ಬೇಕಾಗುವಂತಹ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ ನೂರರಷ್ಟು ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಹೇಳಿದರು.
ಪದವಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡುಪಲ್ಲಿ ಮಾತನಾಡಿ, ಸರ್ಕಾರದಿಂದ ದೊರೆಯುವ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು, ಉದ್ದಿಮೆದಾರರು ಮುಂದಾಗಬೇಕಾಗಿದೆ. ಬೆಂಗಳೂರಿನ ರೇಕ್ಯೋ ಸಂಸ್ಥೆಯ ಸಿಒ ಪ್ರಕಾಶ್ ರುಕ್ಮಯ್ಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇವರಂತೆ ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿ ಎಂದು ಕರೆ ನೀಡಿದರು.ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಪ್ರಾಂಶುಪಾಲ ರವಿಶಂಕರ್, ಉಪ ಪ್ರಾಚಾರ್ಯ ಈಶ್ವರಪ್ಪ, ಪಂಚಾಯತ್ ಅಧ್ಯಕ್ಷ ಕೆ.ಗುರುರಾಜ್, ರೇಕ್ಯೋ ಸಂಸ್ಥೆಯ ರಮೇಶ್, ಶಾಲಾ ಉಪಾಧ್ಯಕ್ಷ ರಾಮಚಂದ್ರ, ಗ್ರಾಮ ಪಂಚಾಯತ್ ಸದಸ್ಯ ಗಜೇಂದ್ರ ಯಾದವ್, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರಾದ ಎನ್.ಉಮೇಶ್, ಬಿ.ಡಿ ರವಿಕುಮಾರ್, ರಂಗನಾಥ್, ಜಗದೀಶ್, ಜೈ ಪ್ರಕಾಶ್, ಜಗನ್ನಾಥ್, ಶಾಲೆಯ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಇದ್ದರು.