ಕನ್ನಡಪ್ರಭ ವಾರ್ತೆ ಪಾಂಡವಪುರ
ಮಕ್ಕಳ ಕಲಿಕೆಗೆ ಅಂಗನವಾಡಿ ಕೇಂದ್ರಗಳೇ ತಳಪಾಯ ಎಂದು ಸಮಾಜ ಸೇವಕ, ಬೆಂಗಳೂರಿನ ಶ್ರೀಬಾಲ ಭೈರವೇಶ್ವರ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ರಾಘವನ್ ಹೇಳಿದರು.ಶಿಥಿಲಾವಸ್ಥೆಯಲ್ಲಿದ್ದ ಪಟ್ಟಣದ ಅಂಗನವಾಡಿ ಕೇಂದ್ರವನ್ನು ಬೀರಶೆಟ್ಟಹಳ್ಳಿ ಡೇರಿ ಮಾಜಿ ಅಧ್ಯಕ್ಷ ಮಧು ಬಿ ಗೌಡರ ನೇತೃತ್ವದಲ್ಲಿ ಅರವಿಂದ ರಾಘವನ್ ಸೇರಿದಂತೆ ಹಲವು ದಾನಿಗಳ ಅನುದಾನದಿಂದ ನವೀಕರಣಗೊಳಿಸಿ ಮಕ್ಕಳ ಕಲಿಕಾ ಚಟುವಟಿಕೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಆಗಸ್ಟ್ 15ರಲ್ಲಿ ಸುಂಕಾತೊಣ್ಣೂರು ಅಂಗನವಾಡಿ ಕೇಂದ್ರಕ್ಕೆ ಕಾಲಿಟ್ಟ ವೇಳೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದ ದೃಶ್ಯ ಕಂಡು ಕಣ್ಣೀರಾದೆ. ಆಗ ಸುಂಕಾತೊಣ್ಣೂರು ಸೇರಿದಂತೆ ತಾಲೂಕಿನ 136 ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಕುಳಿತುಕೊಳ್ಳಲು ಕುರ್ಚಿ, ಬೆಂಚು, ಕುಕ್ಕರ್, ಬೀರು ಸೇರಿದಂತೆ ಇತರೆ ಸಲಕರಣೆಗಳನ್ನು ಕೊಡಿಸಿದೆ. ಮತ್ತಷ್ಟು ಅಂಗನವಾಡಿ ಕೇಂದ್ರಗಳಿಗೆ ನೆರವು ನೀಡುವಂತೆ ಮನವಿಗಳು ಬಂದಿವೆ. ಮುಂದಿನ ದಿನಗಳಲ್ಲಿ ಆ ಅಂಗನವಾಡಿ ಕೇಂದ್ರಗಳಿಗೂ ನೆರವು ಒದಗಿಸುತ್ತೇನೆ ಎಂದರು.ನಾನು ಬೆಂಗಳೂರಿನ ಇಂಗ್ಲಿಷ್ ಶಾಲೆಯಲ್ಲಿ ಓದು-ಬರಹ ಕಲಿತೆ. ಪಾಂಡವಪುರಕ್ಕೆ 2008ರಲ್ಲಿ ಮೊದಲಿಗೆ ಕಾಲಿಟ್ಟೆ. ಆಗ ಮಾಜಿ ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಸಿ.ಎಸ್.ಪುಟ್ಟರಾಜು ಅವರ ಭಾಷಣಗಳನ್ನು ಆಲಿಸುತ್ತಾ ನಾನು ಕನ್ನಡ ಕಲಿತೆ. ಪುಟ್ಟಣ್ಣಯ್ಯ ರೀತಿ ಯಾರೂ ಭಾಷಣ ಮಾಡಲಾರರು. ಅವರದ್ದು ಧೈತ್ಯ ಪ್ರತಿಭೆ ಎಂದು ಹಳೆಯ ಘಟನೆಗಳ ಬಗ್ಗೆ ಮೆಲುಕು ಹಾಕಿದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಪೂರ್ಣಿಮಾ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಬಿಜೆಪಿ ಮುಖಂಡ ಎಚ್ಎನ್. ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕ ಎಂ.ಡಿ.ಮರಿಸ್ವಾಮಿಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಪ್ರಭಾರಿ ಮುಖ್ಯ ಶಿಕ್ಷಕ ಆರ್.ಸಿ.ನಾಗೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಪುರಸಭೆ ಸರ್ಕಾರದ ನಾಮ ನಿರ್ದೇಶಕರಾದ ಲಕ್ಷ್ಮೇಗೌಡ, ಎಚ್.ಎಲ್.ಮುರಳಿಧರ್, ಗ್ರಾಮದ ಯಜಮಾನರಾದ ಸಿದ್ದೇಗೌಡ, ತಮ್ಮೇಗೌಡ, ಮಂಜುನಾಥ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕಿ ಆಶಾ ಲವಕುಮಾರ್, ರೈತಸಂಘದ ಮುಖಂಡ ಗಿರೀಶ್, ಟೈಲರ್ ಪ್ರಸನ್ನ, ಕೃಷ್ಣ, ಹೇಮಂತ್ ಕುಮಾರ್, ಹೊನ್ನೇಗೌಡ. ಡೇರಿ ಅಧ್ಯಕ್ಷ ಪಿ.ದಿವಾಕರ್, ಉಪಾಧ್ಯಕ್ಷ ಗೋ.ರಮೇಶ್ ನಿರ್ದೇಶಕ ಆನಂದ, ಮಾಜಿ ಅಧ್ಯಕ್ಷ ಮಧು ಬಿ ಗೌಡ, ಎಂ.ಎಸ್.ಸೌಮ್ಯ, ಅಂಗನವಾಡಿ ಕೇಂದ್ರದ ಶಿಕ್ಷಕಿ ಭಾಗ್ಯ, ಸಹಾಯಕಿ ಲಕ್ಷ್ಮಿ ಸೇರಿದಂತೆ ಗ್ರಾಮದ ಯುವಕರು, ಮುಖಂಡರು ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಂಗನವಾಡಿ ಕೇಂದ್ರಕ್ಕೆ ಆಧುನಿಕ ಸ್ಪರ್ಶ
ಪಟ್ಟಣದ ಬೀರಶೆಟ್ಟಹಳ್ಳಿ ಅಂಗನವಾಡಿ ಕೇಂದ್ರದ ಹೆಂಚು ಮತ್ತು ಮೇಲ್ಛಾವಣಿ ಹಾಗೂ ಗೋಡೆ ಬಾಗಿಲು ಮಳೆ ಮತ್ತು ಬಿಸಿಲಿನಿಂದಾಗಿ ಶಿಥಿಲಾವಸ್ಥೆಯಿಂದ ಕೂಡಿತ್ತು. ಇದನ್ನು ಗಮನಿಸಿದ ಅರವಿಂದ್ ರಾಘವನ್ ಹಾಗೂ ಶರದಿಂದು ನಿವಾಸಿಗಳಾದ ಬೆಂಗಳೂರಿನ ಡಾ.ಗಂಗಾಧರ್ ಸೇರಿದಂತೆ ಹಲವು ದಾನಿಗಳ ಅನುದಾನದಿಂದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರವನ್ನು ನವೀಕರಣಗೊಳಿಸಿ ಬಣ್ಣದ ಲೇಪನದಿಂದ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಮಕ್ಕಳಿಗೆ ಆಕರ್ಷಣೆಯಾಗುವಂತೆ ಪ್ರಾಣಿ, ಪಕ್ಷಿ, ಹಣ್ಣುಗಳ ಚಿತ್ತಾರ ಬಿಡಿಸಿ ಮಕ್ಕಳ ಆಟಿಕೆ ಪದಾರ್ಥಗಳನ್ನು ನೀಡಿ ಅಂಗನವಾಡಿ ಕೇಂದ್ರದ ದಿನಬಳಕೆ ವಸ್ತುಗಳಾದ ಮಿಕ್ಸಿ, ಕುಕ್ಕರ್, ಬೀರುಗಳನ್ನು ನೀಡಿ ಆಧುನಿಕ ಸ್ಪರ್ಶದೊಂದಿಗೆ ಹೆಚ್ಚಿನ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬಂದು ಕಲಿಕೆ ಚಟುವಟಿಕೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಳ್ಳಲಾಗಿದೆ.