ಸಾರಾಂಶ
ಶಿಕ್ಷಕಿ ಮನೆಯಲ್ಲಿದ್ದ ದಾಸ್ತಾನು ಮರಳಿ ಕೇಂದ್ರಕ್ಕೆ ತಂದ ಗ್ರಾಮಸ್ಥರು, ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ಗ್ರಾಮಸ್ಥರ ಆಗ್ರಹ.
ಕನ್ನಡಪ್ರಭ ವಾರ್ತೆ ಕೊಡೇಕಲ್
ಅಂಗನವಾಡಿ ಶಿಕ್ಷಕಿಯೊಬ್ಬರು ಫಲಾನುಭವಿಗಳಿಗೆ ನೀಡಬೇಕಿದ್ದ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿಕೊಂಡ ಆರೋಪ ಘಟನೆ ಕೊಡೇಕಲ್ನಲ್ಲಿ ಕೇಳಿ ಬಂದಿದೆ. ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರದ ಮೊಟ್ಟೆ ಸೇರಿದಂತೆ ಇತರ ಆಹಾರ ಸಾಮಗ್ರಿಗಳನ್ನು ಸರಿಯಾಗಿ ಮಕ್ಕಳಿಗೆ ನೀಡದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಏಕಾಏಕಿ ಶಿಕ್ಷಕಿಯ ಮನೆಗೆ ತೆರಳಿ ಮನೆಯಲ್ಲಿ ಯಾವ ಕಾರಣಕ್ಕೆ ಕೇಂದ್ರದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡಿದ್ದೀರಾ ಎಂದು ತರಾಟೆ ತೆಗೆದುಕೊಂಡಿದ್ದಾರೆ.ಬಾಲ್ಯದಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು ದೂರ ಮಾಡಿ ಪೌಷ್ಟಿಕಾಂಶ ಮತ್ತು ಆರೋಗ್ಯ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ತಂದಿರುವ ಮಹತ್ತರ ಯೋಜನೆಯನ್ನು ಕೆಲವು ಅಂಗನವಾಡಿ ಶಿಕ್ಷಕಿಯರು ಸರ್ಕಾರದಿಂದ ಬಂದಂತಹ ಪೌಷ್ಟಿಕಯುಕ್ತ ಆಹಾರವನ್ನು ಸರಿಯಾಗಿ ಸರಬರಾಜು ಹಾಗೂ ಮಕ್ಕಳಿಗೆ ನೀಡದೇ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ, ಜೊತೆಗೆ ಕೂಡಲೇ ಅಕ್ರಮವೆಸಗುತ್ತಿರುವ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ.
ಮನೆಯಲ್ಲಿದ್ದ ದಾಸ್ತಾನುಗಳನ್ನು ಮರಳಿ ಅಂಗನವಾಡಿಗೆ ತೆಗೆದುಕೊಂಡು ಬಂದು ಶಿಕ್ಷಕಿಯನ್ನು ತರಾಟೆ ತೆಗೆದುಕೊಂಡ ವಿಷಯ ತಿಳಿದ ಕೊಡೇಕಲ್ ಅಂಗನವಾಡಿ ಮೇಲ್ವಿಚಾರಕಿ ಸುನಂದಾ ಅವರು ಸ್ಥಳಕ್ಕಾಗಮಿಸಿ ಘಟನೆಯ ಕುರಿತು ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡು, ಅಂಗನವಾಡಿ ಸಾಮಗ್ರಿಗಳನ್ನು ಸಿಬ್ಬಂದಿಯ ಮನೆಯಲ್ಲಿ ಇರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ, ಆಹಾರ ಸಾಮಗ್ರಿಗಳನ್ನು ಕೇಂದ್ರದಲ್ಲಿ ಇಡದೇ ಮನೆಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.