ಸಾರಾಂಶ
ರೋಟರಿ ಸಂಸ್ಥೆಗಳು ಅಂಗನವಾಡಿಗಳ ಕಾಯಕಲ್ಪಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ರೋಟರಿ ಸಂಸ್ಥೆಗಳು ಅಂಗನವಾಡಿಗಳ ಕಾಯಕಲ್ಪಕ್ಕೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಈ ಮೂಲಕ ಚಿಣ್ಣರ ವಿದ್ಯಾಭ್ಯಾಸಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ. ಅಂಗನವಾಡಿಗಳೇ ಮಕ್ಕಳ ಮೊದಲ ಪಾಠಶಾಲೆ, ಅಂಗನವಾಡಿ ಶಿಕ್ಷಕಿಯೇ ಕಂದಮ್ಮಗಳ ಮೊದಲ ಗುರುವಂತಾಗಿರುವಾಗ ಇಂಥ ಅಂಗನವಾಡಿಗಳಿಗೆ ಸೌಲಭ್ಯ ಕಲ್ಪಿಸುವಿಕೆಯೂ ರೋಟರಿಯ ಆದ್ಯತಾ ಯೋಜನೆಗಳಲ್ಲೊಂದಾಗಿದೆ ಎಂದು ರೋಟರಿ ಜಿಲ್ಲೆ 3181 ನ ಗವರ್ನರ್ ಎಚ್. ಆರ್. ಕೇಶವ್ ಹೇಳಿದ್ದಾರೆ.
ನಗರದಲ್ಲಿನ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ಕಾರ್ಯಕ್ರಮ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್. ಆರ್. ಕೇಶವ್, ರೋಟರಿ ಜಿಲ್ಲೆ 3181 ಗೆ ಸಂಬಂಧಿಸಿದಂತೆ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಕಂದಾಯ ಜಿಲ್ಲೆಗಳಲ್ಲಿ 87 ರೋಟರಿ ಸಂಸ್ಥೆಗಳಿದ್ದು 3800 ಸದಸ್ಯರನ್ನು ಹೊಂದಿದೆ. ಈ ರೋಟರಿ ವರ್ಷದಲ್ಲಿ ಅಂಗನವಾಡಿಗಳಿಗೆ ಸೌಕರ್ಯ ಸೇರಿದಂತೆ ಮಳೆ ಕೊಯ್ಲುನಂಥ ವಿಭಿನ್ನ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ತಾಯಂದಿರು ಆರ್ಥಿಕ ದುಸ್ಥಿತಿಯ ನಿವಾರಣೆಗಾಗಿ ಉದ್ಯೋಗ ಕಂಡುಕೊಂಡ ಪರಿಣಾಮ ಚಿಕ್ಕಂದಿನಲ್ಲಿಯೇ ಅಂಗನವಾಡಿಗಳನ್ನು ಆಶ್ರಯಿಸುತ್ತಿರುವ ಪುಟಾಣಿಗಳಿಗೆ ಇಂಥ ಅಂಗನವಾಡಿಗಳೇ ಮೊದಲ ಪಾಠಶಾಲೆಯಂತಾಗಿದ್ದು ಅಂಗನವಾಡಿ ಶಿಕ್ಷಕಿಯರೇ ಜೀವನದ ಮೊದಲ ಗುರುವಿನಂತಾಗಿದ್ದಾರೆ. ಅಂಗನವಾಡಿ ಶಿಕ್ಷಕಿಯರು ಪ್ರಸ್ತುತ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೀಗಿರುವಾಗ ಇಂಥ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಸಾಮಾಜಿಕ ಸೇವಾ ಸಂಸ್ಥೆಯಾಗಿ ರೋಟರಿಯ ಆದ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟರು.ವಿಶ್ವಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಬಹಳ ಮುಖ್ಯ ಪಾತ್ರ ವಹಿಸಿದ್ದು ಪ್ರಸ್ತುತ ಕೇವಲ 10 ಪೋಲಿಯೋ ಪ್ರಕರಣಗಳು ಮಾತ್ರ ಜಗತ್ತಿನಲ್ಲಿ ವರದಿಯಾಗಿದೆ. ಸದ್ಯದಲ್ಲಿಯೇ ಪೊಲಿಯೋ ನಿರ್ಮೂಲನೆ ಮೂಲಕ ಪೋಲಿಯೋ ಮುಕ್ತ ವಿಶ್ವಕ್ಕಾಗಿ ರೋಟರಿ ಅನೇಕ ವಷ೯ಗಳಿಂದ ಬಹಳ ಮುಖ್ಯ ಪಾತ್ರ ವಹಿಸಿದೆ ಎಂದೂ ಕೇಶವ್ ಶ್ಲಾಘಿಸಿದರು. ಸದಾ ಬದಲಾಗುತ್ತಲೇ ಸಾಗುತ್ತಿರುವ ಇಂದಿನ ಸಮಾಜದಲ್ಲಿ ರೋಟರಿಯಂಥ ಸಂಸ್ಥೆಗಳು ಕೂಡ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಬದಲಾವಣೆಯೊಂದಿಗೆ ಸಾಗಬೇಕಾದ ಅನಿವಾರ್ಯತೆಯಿದೆ ಎಂದೂ ಜಿಲ್ಲಾ ರೋಟರಿ ಗವರ್ನರ್ ಅಭಿಪ್ರಾಯ ವ್ಯಕ್ತಪಡಿಸಿದರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಮಾತನಾಡಿ, 10 ವರ್ಷಗಳಿಂದ ರೋಟರಿ ಮಿಸ್ಟಿ ಹಿಲ್ಸ್ ನಿಂದ ಮಕ್ಕಳ ದಸರಾವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬರಲಾಗಿದೆ. ಈ ವರ್ಷವೂ ಅನೇಕ ಅಂಗನವಾಡಿ ಕೇಂದ್ರಗಳಿಗೆ ನೆರವು ನೀಡಲಾಗಿದೆ. ವೈದ್ಯಕೀಯ, ಆರೋಗ್ಯ ಸೇವಾ ಯೋಜನೆಗಳನ್ನೂ ಮಿಸ್ಟಿ ಹಿಲ್ಸ್ ವತಿಯಿಂದ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್ ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ, ನಿರ್ದೇಶಕರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.