ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಪುನರ್‌ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಆಚರಿಸಲಾಯಿತು. ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಪುನರ್‌ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕೇರಳದ ಕಾಳೇಘಾಟ್‌ನ ತಂತ್ರಿಗಳಾದ ನಾರಾಯಣ ನಂಬೂದರಿ ಅವರು ಎರಡು ದಿನಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಗಣಪತಿಹೋಮದೊಂದಿಗೆ ಪೂಜೆಗಳು ಜರುಗಿದವು. ನಂತರ ‍ಶ್ರೀಮುತ್ತಪ್ಪನ್‌, ಶ್ರೀತಿರುವಪ್ಪನ್‌, ವಿಷ್ಣುಮೂರ್ತಿ ಮತ್ತು ಪರಿವಾರ ದೇವರಿಗೆ ಅಭಿಷೇಕ ಮತ್ತು ಪುಷ್ಪಾಲಂಕಾರದೊಂದಿಗೆ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ಶ್ರೀ ಅಯ್ಯಪ್ಪಸ್ವಾಮಿ, ಭುವನೇಶ್ವರಿ, ಕನ್ನಿಮೂಲ ಗಣಪತಿ ಮತ್ತು ನಾಗದೇವರಿಗೆ ಅಭಿಷೇಕ, ಅಲಂಕಾರದೊಂದಿಗೆ ಪೂಜೆ ಸಲ್ಲಿಸುವ ಮೂಲಕ ವಾರ್ಷಿಕ ಪೂಜೆ ಸಂಪನ್ನಗೊಂಡಿತು.

ದೇವಾಲಯದ ಪ್ರಧಾನ ಅರ್ಚಕರಾದ ಮಣಿಕಂಠನ್‌ ನಂಬೂದರಿ, ದೇವಾಲಯ ಸಮಿತಿ ಅಧ್ಯಕ್ಷ ಎನ್‌.ಡಿ.ವಿನೋದ್‌ಕುಮಾರ್‌ ಮತ್ತು ಪದಾಧಿಕಾರಿಗಳು ಎರಡು ದಿನಗಳು ಜರುಗಿದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.